ಆಪರೇಷನ್ ಕಮಲ, ಜಾತಿವಾದದಿಂದ ಬಿಜೆಪಿ ಪತನ: ಡಿವಿಎಸ್
ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಪಕ್ಷೇತರರು ಹಾಗೂ ಆಪರೇಷನ್ ಕಮಲದಿಂದ ಬಂದ ವಲಸಿಗರು ಮುಂದೆ ಸರ್ಕಾರದ ಅವನತಿಗೂ ಕಾರಣರಾಗಿದ್ದು ದುರಂತ. ವಲಸಿಗರು ಹಾಗೂ ಮೂಲ ಬಿಜೆಪಿ ಕಾರ್ಯಕರ್ತರ ನಡುವಿನ ಕಿತ್ತಾಟ ಮೊದಲಿನಿಂದಲೂ ಇತ್ತು. ಇದು ಈಗ ಕೆಟ್ಟ ಸ್ವರೂಪ ಪಡೆದಿದೆ ಅಷ್ಟೇ. ಮೂಲ ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ ಎಂಬ ಕೊರಗಿದೆ ಎಂದು ಸದಾನಂದ ಗೌಡ ಹೇಳಿದರು.
ಆಪರೇಷನ್ ಕಮಲದಿಂದ ಆದ ತೊಂದರೆ ಬಗ್ಗೆ ಮಾತನಾಡುವವರೆ ಮೌನವಾಗಿರುವಾಗ ಏನು ಮಾಡಲು ಸಾಧ್ಯವಾಗುವುದಿಲ್ಲ, ಬಿಎಸ್ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಎಚ್ ಎನ್ ಅನಂತ್ ಕುಮಾರ್ ಹಾಗೂ ನಾನು ಕೋರ್ ಕಮಿಟಿಯಲ್ಲಿದ್ದೇವೆ. ಆದರೆ, ನಮ್ಮಲ್ಲೇ ಪರಸ್ಪರ ಭಿನ್ನಾಭಿಪ್ರಾಯಗಳಿರುವುದರಿಂದ ಶಾಸಕರು ಹಾಗೂ ಕೆಳಮಟ್ಟದ ಕಾರ್ಯಕರ್ತರಿಗೆ ಸೂಕ್ತ ಮನ್ನಣೆ ದೊರೆಕಿಸಿಕೊಡಲು ಆಗುತ್ತಿಲ್ಲ.
ಭಿನ್ನಮತೀಯರ ಓಲೈಕೆ: ಸಚಿವ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡಿರುವ ಶಾಸಕರನ್ನು ತಪ್ಪದೇ ಭೇಟಿಯಾಗುತ್ತೇನೆ. ಇದರಲ್ಲಿ ಯಾವ ಬಣ ಅಥವಾ ಜಾತಿ ರಾಜಕೀಯ ಇರುವುದಿಲ್ಲ. ಪಕ್ಷದ ನಾಯಕರನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಮಾಧ್ಯಮಗಳು ಗುಂಪುಗಾರಿಕೆ, ಬಣ ಎಂದು ಏನಾದರೂ ಬರೆದುಕೊಳ್ಳಲಿ. ನಾನು ಭಿನ್ನಮತೀಯರನ್ನು ಓಲೈಸಲು ಯತ್ನಿಸುವುದಂತೂ ಸತ್ಯ.
ಪಕ್ಷದ ಎಲ್ಲಾ ನಿಷ್ಠಾವಂತ ಕಾರ್ಯಕರ್ತರನ್ನು ಮುಂದಿನ ಚುನಾವಣೆ ತನಕ ಉಳಿಸಿಕೊಳ್ಳುವುದು ನನ್ನ ಮುಂದಿರುವ ಮಹತ್ವ ಗುರಿ. ನನ್ನ ಪ್ರಯತ್ನದಲ್ಲಿ ಸೋಲುಂಟಾದರೆ ರಾಜಕೀಯ ತೊರೆಯಲು ಸಿದ್ಧ ಎಂದು ಸದಾನಂದ ಗೌಡರು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಲಾಬಿ ನಡೆಸಿಲ್ಲ. ಎಲ್ಲಾ ಸ್ಥಾನ ಮಾನಕ್ಕೂ ಜಾತಿವಾದ ತರುವುದು ಸರಿಯಲ್ಲ. ನನ್ನ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲು ಪಕ್ಷ ಬಯಸಿದರೆ ನಾನು ಸಿದ್ಧ. ಒಕ್ಕಲಿಗರಿಗೆ ಎಚ್ ಡಿ ದೇವೇಗೌಡ ಅಥವಾ ಕುಮಾರಸ್ವಾಮಿ ನಾಯಕರಾಗಿದ್ದಾರೆ. ಎಸ್ ಸಿ ಎಸ್ಟಿಗಳಿಗೆ ಮಲ್ಲಿಕಾರ್ಜುನ ಖರ್ಗೆ, ಎಸ್ ಪರಮೇಶ್ವರ್ ಇದ್ದಾರೆ. ಕುರುಬರ ನಾಯಕನಾಗಿ ಸಿದ್ದರಾಮಯ್ಯ ಅವರನ್ನು ಕಾಣುತ್ತಾರೆ. ನಮ್ಮಲ್ಲಿ ಮಾತ್ರ ಲಿಂಗಾಯತರನ್ನೇ ನೆಚ್ಚಿಕೊಂಡು ಬಂದಿದೆ. ಹಾಗಂತ ಲಿಂಗಾಯತರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಪಕ್ಷ ನನ್ನಿಂದ ಏನು ಬಯಸುತ್ತದೆಯೋ ಅದನ್ನು ನೀಡಲು ನಾನು ಸಿದ್ಧ ಎಂದು ಸದಾನಂದ ಗೌಡ ಹೇಳಿದ್ದಾರೆ.