ಗೌಡರಿಗೆ ರಾಜ್ಯಾಧ್ಯಕ್ಷ ಪಟ್ಟ ಸಿಗುತ್ತಾ? ಸಿಗಲ್ವ?
ಬೆಂಗಳೂರು, ಜು.17: ಕೆಎಸ್ ಈಶ್ವರಪ್ಪ ಅವರಿಂದ ತೆರವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಿವಿ ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿದ್ದರೂ ಯಡಿಯೂರಪ್ಪ ಬಣದ ವಿರೋಧದಿಂದ ಹೈಕಮಾಂಡ್ ಕೈಕಟ್ಟಿ ಕೂತಿದೆ. ಅದರೆ, ಇನ್ನು ಎರಡು ಮೂರು ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಬರಗಾಲದ ಬಗ್ಗೆ ಕೇಂದ್ರ ಸರ್ಕಾರದೊಡನೆ ಮಾತನಾಡಲು ಹೋಗಿರುವ ಸಿಎಂ ಜಗದೀಶ್ ಶೆಟ್ಟರ್ ಅವರ ನಿಯೋಗ, ಬಿಜೆಪಿ ಹೈಕಮಾಂಡ್ ಜೊತೆ ಕೂಡಾ ಚರ್ಚೆ ನಡೆಸುವ ಸಾಧ್ಯತೆಯಿದೆ.
ಆದರೆ, ಸದಾನಂದ ಗೌಡರನ್ನು ಆದಷ್ಟು ರಾಜ್ಯ ರಾಜಕೀಯದಿಂದ ದೂರ ಇಡಲು ಯತ್ನಿಸುತ್ತಿರುವ ಯಡಿಯೂರಪ್ಪ ಅವರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅನಂತಕುಮಾರ್, ನಳಿನ್ ಕುಮಾರ್ ಕಟೀಲು, ಪ್ರಹ್ಲಾದ್ ಜೋಷಿ, ವಿಶ್ವೇಶ್ವರ ಹೆಗ್ಡೆ ಕಾಗೇರಿ ಹಾಗೂ ನಿರ್ಮಲ್ ಕುಮಾರ್ ಸುರಾನಾ ಹೆಸರು ಕೇಳಿ ಬಂದಿದೆ. ಅಲ್ಲದೆ ಸಮಾಜ ಕಲ್ಯಾಣ ಸಚಿವ ಎ ನಾರಾಯಣ ಸ್ವಾಮಿ, ಗೋವಿಂದ ಕಾರಜೋಳ ಹೆಸರು ಪಟ್ಟಿಯಲ್ಲಿದೆ.
ಡಿವಿಎಸ್ ಅವರು ರಾಜ್ಯಾಧ್ಯಕ್ಷ ಸ್ಥಾನ ಒಪ್ಪದಿದ್ದರೆ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ನಳೀನ್ ಕುಮಾರ್ ಕಟೀಲು ಅವರಿಗೆ ಸ್ಥಾನ ಗ್ಯಾರಂಟಿ ಎನ್ನಲಾಗಿದೆ. ಯುವ ನಾಯಕನೊಬ್ಬನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಮುಂದಿನ ಚುನಾವಣೆಯನ್ನು ಎದುರಿಸಲು ಬಿಜೆಪಿ ಚಿಂತನೆ ನಡೆಸಿದೆ. ಅಲ್ಲದೆ ನಳೀನ್ ಕುಮಾರ್ ಆಯ್ಕೆ ಬಗ್ಗೆ ಯಡಿಯೂರಪ್ಪ ಬಣದಲ್ಲೂ ಅಪಸ್ವರಗಳು ಕೇಳಿಬಂದಿಲ್ಲ.
ಆರೆಸ್ಸೆಸ್ ನಿಷ್ಠರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಸಂಪ್ರದಾಯ ಮುಂದುವರೆಸಿಕೊಂಡು ಹೋಗಲು ಹೈಕಮಾಂಡ್ ನಿರ್ಧರಿಸಿದ್ದು, ಈಗಲೂ ಕೂಡಾ ಕೆಲ ಪ್ರಭಾವಿ ಆರೆಸ್ಸೆಸ್ ನಾಯಕರ ಅಣತಿಯಂತೆ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ.
ರಾಜ್ಯ ರಾಜಕಾರಣದಿಂದ ದೂರವುಳಿಯುವುದಾಗಿ ಅನಂತ್ ಕುಮಾರ್ ಹೇಳಿದ್ದಾರೆ. ಸದಾನಂದ ಗೌಡರು ಪಕ್ಷ ಬಯಸುವ ಹುದ್ದೆ ಸ್ವೀಕರಿಸಲು ಸಿದ್ಧ ಎಂದಿದ್ದಾರೆ. ಪಕ್ಷ ನನಗೆಲ್ಲ ಕೊಟ್ಟಿದೆ. ನಾನು ಈಗ ಪಕ್ಷಕ್ಕಾಗಿ ಏನು ಕೊಡಬಲ್ಲೆ ಎನ್ನುವುದೇ ಮುಖ್ಯವಾಗುತ್ತದೆ. ಪಕ್ಷ ಸಂಘಟನೆ, ಮುಂದಿನ ಚುನಾವಣೆ ಹಿತದೃಷ್ಟಿಯಿಂದ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ರಾಜ್ಯ ಅಥವಾ ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದಂತೆ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಸೋಮವಾರ ಪುತ್ತೂರಿನಲ್ಲಿ ಡಿವಿಎಸ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.