ಪ್ರಣಬ್ ಗೆ ಮತ, ಜಗನ್ ರೆಡ್ಡಿ ಬಿಡುಗಡೆ ಭರವಸೆ

ಹೈದರಾಬಾದಿನ ಚಂಚಲಗುಡ ಜೈಲಿನಲ್ಲಿರುವ ಜಗನ್ ಅವರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಹತ್ತಿರದ ಮತದಾನ ಕೇಂದ್ರದಲ್ಲಿ ಜು.19ರಂದು ಮತ ಚಲಾಯಿಸಲು ಅನುಮತಿ ನೀಡುವಂತೆ ಕೋರಿದ್ದರು.
ವೈಎಸ್ ಆರ್ ಕಾಂಗ್ರೆಸ್ ಪಕ್ಷ ನಾಳೆ(ಜು.18) ಸಭೆ ಸೇರಲಿದ್ದು ಪ್ರಣಬ್ ಹಾಗೂ ಸಂಗ್ಮಾ ಅವರಲ್ಲಿ ಯಾರಿಗೆ ಮತ ಹಾಕಬೇಕು ಎಂಬುದರ ಬಗ್ಗೆ ನಿರ್ಧರಿಸಲಿದ್ದಾರೆ. ವೈಎಸ್ ಆರ್ ಪಕ್ಷದಲ್ಲಿ 2 ಸಂಸದರು ಹಾಗೂ 17 ಶಾಸಕರು ಇದ್ದಾರೆ. ಮೂಲಗಳ ಪ್ರಕಾರ ವೈಎಸ್ ಆರ್ ಪಕ್ಷದ ಸಂಪೂರ್ಣ ಬೆಂಬಲ ಯುಪಿಎ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರಿಗೆ ಎನ್ನಲಾಗಿದೆ.
ಆಗಸ್ಟ್ ನಲ್ಲಿ ಹೊರಕ್ಕೆ? : ಈ ಮೂಲಕ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮುಂದಿನ ದಿನಗಳಲ್ಲಿ ಜೈಲಿನಿಂದ ಹೊರಬೀಳುವಂತೆ ಹಾಗೂ ಜೈಲಿನಿಂದ ಹೊರಬಿದ್ದ ಮೇಲೆ ನೋಡಿಕೊಳ್ಳುವ ಜವಾಬ್ದಾರಿ ಪ್ರಣಬ್ ಹಾಗೂ ಯುಪಿಎ ಮೇಲೆ ಬೀಳಲಿದೆ.
ರಾಷ್ಟ್ರಪತಿ ಚುನಾವಣೆ ಬಿಸಿ ಮುಗಿದ ಮೇಲೆ ಆಗಸ್ಟ್ ನ ಮೊದಲ ವಾರದಲ್ಲಿ ಜಗನ್ ಮೋಹನ್ ರೆಡ್ಡಿ ಚಂಚಲಗೂಡ ಜೈಲಿನಿಂದ ಹೊರಬೀಳುವುದು ಖಚಿತ ಎಂಬ ಸುದ್ದಿ ನವದೆಹಲಿಯ ರಾಜಕೀಯ ವಲಯದಲ್ಲಿ ಹಬ್ಬಿರುವ ಸದ್ಯದ ಗಾಳಿಸುದ್ದಿ.
ಜುಲೈ ತಿಂಗಳ ಕೊನೆವಾರದಲ್ಲಿ ಜಗನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ. ಯುಪಿಎ ಸರ್ಕಾರದ ಅಣತಿಯಂತೆ ಸಿಬಿಐ ಪರ ವಕೀಲರು ಯಾವುದೇ ರೀತಿ ಬಲವಾದ ಆಕ್ಷೇಪಣೆ ಸಲ್ಲಿಸುವ ಯತ್ನ ಮಾಡುವುದಿಲ್ಲ ಎನ್ನಲಾಗಿದೆ. ಹೀಗಾಗಿ ಜಗನ್ ಅವರ ಬಿಡುಗಡೆ ಹಾದಿ ಸುಲಭವಾಗಲಿದೆ.
ಯುಪಿಎ ಪರ ನಿಂತ ಜಗನ್: ಯುನೈಟೆಡ್ ಪ್ರೊಗ್ರೇಸಿವ್ ಅಲೈಯನ್ಸ್ (UPA) ಪರ ಜಗನ್ ನಿಂತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಪಿಎ ಸಂಗ್ಮಾ ಅವರು ಚಂಚಲಗುಡ ಜೈಲಿಗೆ ಬಂದಾಗ ಒಳಗಡೆ ಹೋಗಲು ಆಗದಂಥ ಪರಿಸ್ಥಿತಿ ನಿರ್ಮಿಸಲಾಗಿತ್ತು. ಕೊನೆಗೆ ಜಗನ್ ಅವರ ತಾಯಿ ವಿಜಯಮ್ಮ ಅವರನ್ನು ಭೇಟಿ ಮಾಡಿ ತೆರಳಿದ್ದರು.
ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರೊಂದಿಗೆ ಪ್ರಣಬ್ ಮುಖರ್ಜಿ ಅವರಿಗಿದ್ದ ಸ್ನೇಹಕ್ಕೆ ಜಗನ್ ಮನ್ನಣೆ ನೀಡಲಿದ್ದು, ವೈಎಸ್ ಆರ್ ಕಾಂಗ್ರೆಸ್ ಪಕ್ಷ ಕೂಡಾ ಪ್ರಣಬ್ ಅವರಿಗೆ ಮತ ನೀಡಲಿದೆ. ಇದಲ್ಲದೆ, ಜಗನ್ ಅವರ ಭವಿಷ್ಯದ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ನಾಯಕರೊಡನೆ ವೈಎಸ್ ವಿಜಯಮ್ಮ ಮಾತುಕತೆ ನಡೆಸಿ ಬಂದ ಮೇಲೆ ಈ ರೀತಿ ಬೆಳವಣಿಗೆಗಳು ಕಾಣಿಸಿಕೊಂಡಿದೆ.
ಎನ್ ಡಿಎ ಅಭ್ಯರ್ಥಿಗೆ ಮತ ನೀಡಿದರೆ ಕಾಂಗ್ರೆಸ್ ಜೊತೆಗಿನ ಬಿರುಕು ಇನ್ನಷ್ಟು ಹೆಚ್ಚಾಗಬಹುದು. ಮುಂಬರುವ ದಿನಗಳಲ್ಲಿ ಆಂಧ್ರಪ್ರದೇಶದಲ್ಲಿ ವೈಎಸ್ ಆರ್ ಪಕ್ಷ ಪ್ರಭುತ್ವಕ್ಕೆ ಬಂದರೆ ಎನ್ ಡಿಎಗಿಂತ ಕಾಂಗ್ರೆಸ್ ನೆರವು ಅಗತ್ಯವಾಗಿರುತ್ತದೆ. ಹೀಗಾಗಿ ಸಂಗ್ಮಾಗಿಂತ ಪ್ರಣಬ್ ಅವರಿಗೆ ಮತ ನೀಡುವುದೇ ಸೂಕ್ತ ಎಂಬ ಚಿಂತನೆಯಲ್ಲಿ ವೈಎಸ್ ಆರ್ ಪಕ್ಷ ತೊಡಗಿದೆ. ಜಗನ್ ಹೆಚ್ಚು ದಿನ ಜೈಲಿನಲ್ಲಿದ್ದರೆ ಕಾಂಗ್ರೆಸ್ ಗೆ ಅಪಾಯ ಎಂಬ ಸತ್ಯ ಅರಿತಿರುವ ಕಾಂಗ್ರೆಸ್ ಹೈಕಮಾಂಡ್ ನಾಯಕರು, ಜಗನ್ ಅವರನ್ನು ಹೊರ ತರುವ ಹಾದಿ ನಿರ್ಮಿಸಿದ್ದಾರೆ.












Click it and Unblock the Notifications