ಹುಡುಗಿಗಾಗಿ ಸಹೋದ್ಯೋಗಿಯನ್ನೇ ಸಾಯಿಸಿದ ಟೆಕ್ಕಿಗಳು
ಏನಾಯಿತೆಂದರೆ 25 ವರ್ಷದ ಅವಿವೇಕಿ ಟೆಕ್ಕಿಯೊಬ್ಬ ಹುಡಿಯೊಂದಿಗಿನ ತನ್ನ ಪ್ರೇಮಕ್ಕೆ ಅಡ್ಡಬಂದ ಎಂಬ ಒಂದೇ ಕಾರಣಕ್ಕೆ ಆತನ ಮೇಲೆ ಮೊದಲು ಕಾರು ಓಡಿಸಿದ. ಬಳಿಕ ಇತರೆ ಇಬ್ಬರು ಟೆಕ್ಕಿಗಳ ಜತೆಗೂಡಿ ಆತನನ್ನು ಸುಟ್ಟುಹಾಕಿದ್ದಾರೆ.
ಹೀಗೆ, ಬಿಪಿಒ ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ಜೋಗಿಂದರ್ ಶರ್ಮಾ ಅವರನ್ನು ಸಾಯಿಸಿದ ಆರೋಪದ ಮೇಲೆ ಅದೇ ಸಂಸ್ಥೆಯ ಸಂದೀಪ್ ಮತ್ತು ಆತನ ಇಬ್ಬರು ಸಹೋದ್ಯೋಗಿಗಳಾದ ಪ್ರೇಮ್ ಮತ್ತು ಸೋನಿರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜುಲೈ 8ರಂದು ಶರ್ಮಾರ ಅರೆಸುಟ್ಟ ದೇಹ ಜಫ್ಫರ್ ಪುರ್ ಕಲನ್ ಭಾಗದಲ್ಲಿ ಪತ್ತೆಯಾಗಿತ್ತು. ಜುಲೈ 7ರಂದು ಶರ್ಮಾ ಜತೆ ಕೊನೆಯ ಬಾರಿಗೆ ಇದೇ ಟೆಕ್ಕಿ ಸಂದೀಪ್ ಕಾಣಿಸಿಕೊಂಡಿದ್ದ. ಅದನ್ನೇ ಆಧಾರವಾಗಿಸಿಕೊಂಡು ಪೊಲೀಸರು ಸಂದೀಪನನ್ನು ವಿಚಾರಣೆಗೊಳಪಡಿಸಿದಾಗ ತನ್ನ ಹೇಯ ಕೃತ್ಯದ ವೃತ್ತಾಂತವನ್ನು ಬಿಡಿಸಿಟ್ಟಿದ್ದಾನೆ.
'ನಾನು ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ಜೋಗಿಂದರ್ ಶರ್ಮಾ ಅವರ ಕೈಕೆಳಗೆ ಕೆಲಸ ಮಾಡುತ್ತಿದೆ. ಈ ಮಧ್ಯೆ ನಮ್ಮಿಬ್ಬರ ನಡುವೆ ಹುಡುಗಿಯೊಬ್ಬಳು ಕಾಣಿಸಿಕೊಂಡಳು. ನನ್ನ ಹುಡುಗಿಯ ತಂಟೆಗೆ ಬರಬೇಡ ಎಂದು ಮ್ಯಾನೇಜರ್ ಜೋಗಿಂದರ್ ಗೆ ತಿಳಿಹೇಳಿದೆ. ಆದರೆ ಆಯಪ್ಪ ಸುಮ್ಮನಾಗಲಿಲ್ಲ. ಕೊನೆಗೆ ಆತನನ್ನು sceneನಿಂದ ನಿಖಾಲಿ ಮಾಡಲು ನಿಶ್ಚಯಿಸಿದೆವು' ಎಂದು ಸಂದೀಪ ತಿಳಿಸಿರುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಎಕೆ ಓಝಾ ಹೇಳಿದ್ದಾರೆ.
'ಕೊನೆಗೆ ನಮ್ಮ ಪ್ಲಾನ್ ಪ್ರಕಾರ 'ಎಣ್ಣೆ ಪಾರ್ಟಿ ಕೊಡಿಸ್ತೀವಿ ಬಾ' ಎಂದು ಮ್ಯಾನೇಜರ್ ಜೋಗಿಂದರನನ್ನು ಪುಸಲಾಯಿಸಿದೆವು. ಅದರಂತೆ ಪಾರ್ಟಿಗೆ ಬಂದ ಜೋಗಿಂದರನನ್ನು ಸಾಯಿಸಿಬಿಟ್ಟೆವು' ಎಂದು ಸಂದೀಪ್ ತನ್ನ ಅಪರಾಧವನ್ನು ಪೊಲೀಸರೆದುರು ಒಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಬಳಸಲಾಗಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.