ಚುನಾವಣೆ ಎಂಬ ಯುದ್ಧ ಗೆದ್ದವನೇ ನಿಜವಾದ ಅಧಿಪತಿ
25 ವರ್ಷಗಳ ಕಾಲ ವಿರೋಧ ಪಕ್ಷದ ಸ್ಥಾನದಲ್ಲಿಯೇ ಇದ್ದ ಭಾರತೀಯ ಜನಪಾ ಪಕ್ಷ 2008ರಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದಾಗ ಅದರ ಸಂತೋಷ ನಿಜಕ್ಕೂ ಮುಗಿಲು ಮುಟ್ಟಿತ್ತು. ಆದರೆ, ಅಧಿಕಾರ ಗಳಿಸುವುದು ಮತ್ತು ಅಧಿಕಾರ ನಡೆಸುವುದರ ನಡುವಿನ ವ್ಯತ್ಯಾಸ ಮತ್ತು ಸಂಕಷ್ಟ ಅರ್ಥಮಾಡಿಕೊಳ್ಳಲು ಬಿಜೆಪಿ ನಾಯಕರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಜನರಿಂದ ಬಹುಮತ ಪಡೆದ ಸರಕಾರದಲ್ಲಿ ಪ್ರತಿದಿನ ಒಂದಿಲ್ಲೊಂದು ವಿವಾದ ಹುಟ್ಟಿಕೊಳ್ಳುತ್ತಲೇ ಇತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ, ಆಡಳಿತ ಯಂತ್ರದ ಹಿಡಿದ ಬಿಜೆಪಿ ನಾಯಕರಿಗೆ ಸಿಗಲೇಇಲ್ಲ. ಅಧಿಕಾರಿಗಳ ಕೂಡ ರಾಜಕಾರಣಿಗಳ ಅನುಭವವನ್ನು ದುರ್ಲಾಭ ಪಡೆದರು.
ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ದಿನವೇ ಜಗದೀಶ್ ಶೆಟ್ಟರ್ ಬೆಂಬಲಿಗರು, ತಮ್ಮ ನಾಯಕನ್ನು ಕಡೆಗಣಿಸಲಾಗಿದೆ, ಅವಮಾನ ಮಾಡಲಾಗಿದೆ ಎಂದು ಬೊಬ್ಬೆ ಎಬ್ಬಿಸಿದ್ದರು. ಮುಂದೆ ರೆಡ್ಡಿ ಸಹೋದರರು ಎಬ್ಬಿಸಿದ ಭಿನ್ನಮತದ ಬಿರುಗಾಳಿ, ಸಿಡಿ ಹಗರಣ, ರೇಣುಕಾಚಾರ್ಯ ಚುಂಬನ ಪ್ರಕರಣ, ಹಾಲಪ್ಪನಿಂದ ಅತ್ಯಾಚಾರ ಪ್ರಕರಣ, ಭಿನ್ನಮತೀಯರು ದಂಗೆಯೆದ್ದಿದ್ದು, ಯಡಿಯೂರಪ್ಪ ಅಕ್ರಮ ಗಣಿಗಾರಿಕೆ ಉರುಳಿಗೆ ಸಿಲುಕಿ ರಾಜೀನಾಮೆ ನೀಡಿದ್ದು, ವಿರೋಧದ ನಡುವೆಯೇ ಸದಾನಂದ ಗೌಡ ಮುಖ್ಯಮಂತ್ರಿಯಾಗಿ ಪದವಿಗ್ರಹಣ ಮಾಡಿದ್ದಿಂದ ರಾಜೀನಾಮೆ ನೀಡುವವರೆಗೆ.... ನಡೆದಿರುವ ಹಗರಣಗಳು ಒಂದೆ ಎರಡೆ?
ಈ ಎಲ್ಲ ಹಗರಣಗಳ ಬೆಂಕಿಗೆ ತುಪ್ಪ ಸುರಿದಿದ್ದು ಮಾಧ್ಯಮ. ಪ್ರತಿಯೊಂದು ಘಟನೆಗೆ ವಿಶೇಷ ಬಣ್ಣ ಬಳಿಯಿತು, ಬೇರೆ ಬೇರೆ ಅರ್ಥ ಕಲ್ಪಿಸಿತು. ಇನ್ನೂ ಅನೇಕ ಹಗರಣಗಳ ಹಿಂದೆ ಮಾಧ್ಯಮಗಳ ಕೈವಾಡವಿರುವುದು ಎಲ್ಲಾ ಸರಕಾರಗಳಲ್ಲೂ ಸಾಬೀತಾಗುತ್ತಲೇ ಬಂದಿದೆ. ಆದರೆ, ಯಡಿಯೂರಪ್ಪ ಎರಡು ಬಾರಿ ವಿಶ್ವಾಸ ನಿರ್ಣಯ ಮಂಡಿಸುವ ಹಂತದಲ್ಲಿ ತಿರುಗಿಬಿದ್ದಿದ್ದ ರೆಡ್ಡಿ ಸಹೋದರರೇ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದುದನ್ನು ಮಾಧ್ಯಮಗಳು ಯಾವತ್ತೂ ಹೈಲೈಟ್ ಮಾಡಲೇ ಇಲ್ಲ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.
ಏನೇ ಹಗರಣಗಳು, ರಂಪಾಟಗಳು ಬಿಜೆಪಿ ಮಾಡಿಕೊಂಡಿರಲಿ, ಮತ್ತೆ ಚುನಾವಣೆಯ ವಿಷಯಕ್ಕೆ ಬಂದಾಗ ಎಲ್ಲ ನಾಯಕರನ್ನು ಬದಿಗೊತ್ತಿ ದೃಷ್ಟಿ ಸಾಗುವುದು ಯಡಿಯೂರಪ್ಪನವರ ಕಡೆಗೇ. ಹಲವಾರು ದಶಕಗಳ ಕಾಲ ರಾಜ್ಯಭಾರ ಮಾಡಿದ್ದ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅತ್ಯಂತ ಹೀನಾಯ ಸ್ಥಿತಿಗೆ ತಂದ ಶ್ರೇಯ ಯಡಿಯೂರಪ್ಪನವರಿಗೇ ಸಲ್ಲಬೇಕು. ಮಾಧ್ಯಮಗಳು ಯಡಿಯೂರಪ್ಪನವರನ್ನು ತಮ್ಮ ಏಕೈಕ ಗುರಿಯನ್ನಾಗಿ ಮಾಡಿಕೊಂಡವು. ರೆಡ್ಡಿಗಳೇನಾದರೂ ಕಾಂಗ್ರೆಸ್ ಪಕ್ಷದಲ್ಲಿದ್ದರೆ ಮಾಧ್ಯಮಗಳು ಅಕ್ರಮ ಗಣಿಗಾರಿಕೆ ವಿಷಯವನ್ನು ಈ ಪರಿ ಬ್ಲೋ ಅಪ್ ಮಾಡುತ್ತಿತ್ತೆ? ಇದನ್ನು ಓದುಗರ ವಿವೇಚನೆಗೆ ಬಿಡುವುದೇ ಒಳಿತು.
ಯಡಿಯೂರಪ್ಪನವರ ವಿರುದ್ಧ ಆರೋಪಗಳು ಏನೇ ಇರಲಿ, ಮತದಾರರನ್ನು ಸೆಳೆಯುವ ಮತ್ತು ಚುನಾವಣೆ ಗೆಲ್ಲುವ ವಿಷಯಕ್ಕೆ ಬಂದಾಗ ಯಡಿಯೂರಪ್ಪನವರು ಏಕಮಾದ್ವಿತೀಯ ನಾಯಕರಾಗಿ ಹೊರಹೊಮ್ಮುವುದನ್ನು ಅವರ ವಿರೋಧಿಗಳು ಕೂಡ ಅಲ್ಲಗಳೆಯುವುದಿಲ್ಲ. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ತಾಕತ್ತು ಸದಾನಂದ ಗೌಡರಿಗೆ ಇತ್ತೆ? ಬಿಜೆಪಿ ಹೈಕಮಾಂಡ್ ಕರ್ನಾಟಕದ ನಾಯಕರು ಮುಂದಿಟ್ಟಿರುವ ಹಲವಾರು ಬೇಡಿಕೆಗಳನ್ನು ಒಪ್ಪುತ್ತದೋ ಬಿಡುತ್ತದೋ ಆದರೆ, ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಸಕಾರಾತ್ಮಕ ನಿಲುವು ತಾಳಿದೆ. ಶೆಟ್ಟರ್ ಅವರಿಗೆ ಲಿಂಗಾಯತ ಪಂಗಡದ ಬಲವಾದ ಬೆಂಬಲವೂ ಇದೆ. ಸೇನಾಪತಿ ಯಾರೇ ಆಗಿರಲಿ ಚುನಾವಣೆ ಎಂಬ ಯುದ್ಧ ಗೆಲ್ಲಬೇಕಷ್ಟೆ. ಕರ್ನಾಟಕದ ಪ್ರಸ್ತುತ ರಾಜಕೀಯ ವಿದ್ಯಮಾನ ಕುರಿತು ಸಂದೀಪ್ ಅವರು ಸುದೀರ್ಘವಾಗಿ ವಿಶ್ಲೇಷಿಸಿದ್ದಾರೆ. ಮುಂದೆ ಓದಿರಿ.