ಬಾಲಕಿಗೆ ಮೂತ್ರ ಸೇವನೆ, ಸ್ವಾಮಿ ಅಗ್ನಿವೇಶ್ ಸಮರ್ಥನೆ
ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದನ್ನು ತಡೆಯಲು ಸ್ವಮೂತ್ರಪಾನ ಒಳ್ಳೆಯದು. ಸ್ವಮೂತ್ರಪಾನದಿಂದ ಅನೇಕ ಕಾಯಿಲೆಗಳು ದೂರಾಗುತ್ತದೆ ಎಂದು ಮೋರಾರ್ಜಿ ದೇಸಾಯಿ ಅವರ ಉದಾಹರಣೆಯನ್ನು ಸ್ವಾಮಿ ಅಗ್ನಿವೇಶ್ ನೀಡಿದ್ದಾರೆ.
ಸ್ವಾಮಿ ಅಗ್ನಿವೇಶ್ ಹೇಳಿಕೆಯಿಂದ ವಿಶ್ವಭಾರತಿ ಪಥಾ ವಿದ್ಯಾರ್ಥಿನಿಲಯದ ಮೂತ್ರಸೇವನೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಾರ್ಡನ್ ಹೇಳಿದ್ದರಲ್ಲಿ ತಪ್ಪೇನಿದೆ. ಸ್ವಮೂತ್ರಪಾನ ಸಹಜ ಪ್ರಕ್ರಿಯೆ. ನಾನು ಕೂಡಾ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅದನ್ನು ಗುಣಪಡಿಸಿಕೊಳ್ಳಲು ಸ್ವಮೂತ್ರಪಾನ ಮಾಡಿದ್ದೇನೆ ಎಂದು ಸಮಾಜಿಕ ಕಾರ್ಯಕರ್ತ ಅಗ್ನಿವೇಶ್ ಹೇಳಿದ್ದಾರೆ.
ಈ ಸಣ್ಣ ವಿಷಯವನ್ನು ಇಷ್ಟೇಕೇ ದೊಡ್ಡದು ಮಾಡಿ ದೇಶದಾದ್ಯಂತ ರಂಪ ರಾದ್ಧಾಂತ ಮಾಡುತ್ತಿದ್ದರೋ ಗೊತ್ತಿಲ್ಲ ಎಂದು ಅಗ್ನಿವೇಶ್ ಹೇಳಿದ್ದಾರೆ. ಈ ರೀತಿ ಚಿಕಿತ್ಸಾವಿಧಾನಕ್ಕೆ 'ಶಿವಂಬು' ಅಥವಾ 'ಸ್ವಮೂತ್ರ ಚಿಕಿತ್ಸಾ' ಎಂದು ಕರೆಯಲಾಗುತ್ತದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಂಬಲಾ ಜೈಲಿನಲ್ಲಿದ್ದಾಗ ನಾನು ಈ ಚಿಕಿತ್ಸೆ ಲಾಭ ಪಡೆದಿದ್ದೆ.
ಅನೇಕ ತಿಂಗಳುಗಳ ಕಾಲ ಈ ಚಿಕಿತ್ಸಾ ವಿಧಾನವನ್ನು ಅಭ್ಯಸಿಸಿ ಪ್ರಯೋಗಿಸಿದ್ದೇನೆ. ನೈಸರ್ಗಿಕ ಚಿಕಿತ್ಸೆ ಹಾಗೂ ವಿಧಾನಗಳ ಪುಸ್ತಕಗಳಲ್ಲಿ ಈ ಬಗ್ಗೆ ಯಥೇಚ್ಛವಾದ ಮಾಹಿತಿ ಇದೆ. ಪ್ರಬುದ್ಧ ವಯಸ್ಕನಾಗುವ ತನಕ ನನಗೂ ಈ ಸಮಸ್ಯೆ ಕಾಡಿತ್ತು. ಶಿವಂಬು ಚಿಕಿತ್ಸೆ ನನಗೆ ಸಹಾಯ ಮಾಡಿತು ಎಂದು ಅಗ್ನಿವೇಶ್ ಹೇಳಿದ್ದಾರೆ.
ಮೊರಾರ್ಜಿ ದೇಸಾಯಿ ಅಲ್ಲದೆ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಹಾಗೂ ದೇವಿಲಾಲ್ ಅವರು ಈ ಚಿಕಿತ್ಸೆ ಅನುಸರಿಸಿದ್ದರು ಎಂದು ಅಗ್ನಿವೇಶ್ ಹೇಳಿದ್ದಾರೆ.
ಬಾಲಕಿಯ ಪೋಷಕರ ದೂರಿನ ಮೇರೆಗೆ ಬಂಧಿತರಾಗಿದ್ದ Karabi ಹಾಸ್ಟೆಲ್ ವಾರ್ಡನ್ ಉಮಾ ಪೊದ್ದಾರ್ ಅವರಿಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದೆ.
ಘಟನೆ ಹಿನ್ನೆಲೆ: ರಾಷ್ಟ್ರಕವಿ ರವೀಂದ್ರನಾಥ ಟಾಗೋರರು ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ Karabi ಹಾಸ್ಟೆಲ್ ವಾರ್ಡನ್ ಉಮಾ ಪೊದ್ದಾರ್ ಎಂದಿನಂತೆ ವಿದ್ಯಾರ್ಥಿಗಳ ಕೊಠಡಿ ತಪಾಸಣೆ ನಡೆಸುತ್ತಿದ್ದಾಗ ಪುನೀತಾ ಎಂಬ 5ನೇ ತರಗತಿ ಬಾಲಕಿ ಹಾಸಿಗೆ ಒದ್ದೆ ಮಾಡಿಕೊಂಡಿರುವುದು ಕಂಡು ಬಂದಿದೆ. ಪುಟ್ಟ ಬಾಲಕಿಗೆ ತನ್ನ ಮೂತ್ರವನ್ನೇ ಕುಡಿಯುವಂತೆ ಶಿಕ್ಷೆ ನೀಡಿದ ಆಘಾತಕಾರಿ ಘಟನೆ ನಡೆದಿತ್ತು.
5ನೇ ತರಗತಿಯ ಪುಟ್ಟ ಬಾಲಕಿ ಹಾಸಿಗೆ ಒದ್ದೆ ಮಾಡಿದಳೆಂಬ ಕಾರಣಕ್ಕೆ ಈ ಕಠೋರ ಶಿಕ್ಷೆ ವಿಧಿಸಲಾಗಿದೆ. ಬಾಲಕಿಯ ಪೋಷಕರು ಹಾಸ್ಟೆಲ್ ವಾರ್ಡನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ತಪ್ಪಿತಸ್ಶರಿಗೆ ಗುರುತರ ಶಿಕ್ಷೆಯಾಗಲೇಬೇಕು. ಈ ಘಟನೆಯಿಂದ ನನ್ನ ಮಗಳು ಚೇತರಿಸಿಕೊಳ್ಳಲಾರಳು ಎಂದು ಬಾಲಕಿಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಕುರಿತು ವಿಶ್ವವಿದ್ಯಾಲಯದಿಂದ ವಿವರಣೆ ಕೇಳಿದೆ. ಇದು ನಿಜವೇ ಆಗಿದ್ದಲ್ಲಿ ವಾರ್ಡನ್ ಗೆ ಕಠಿಣ ಶಿಕ್ಷೆಯಾಗಲೇಬೇಕು. ಮಕ್ಕಳಿಗೆ ಈ ರೀತಿಯ ಅಮಾನುಷ ಶಿಕ್ಷೆ ವಿಧಿಸುವುದನ್ನು ದೇಶಾದ್ಯಂತ ನಿಷೇಧಿಸಲಾಗಿದೆ ಎಂದು NCPCR ಆಯೋಗದ ಸದಸ್ಯ ವಿನೋದ್ ಕುಮಾರ್ ಟಿಕ್ಕೂ ಹೇಳಿದ್ದರು.
ಆದರೆ ವಿಶ್ವ ವಿದ್ಯಾಲಯದ ಮೂಲಗಳು ಈ ಘಟನೆಯನ್ನು ನಿರಾಕರಿಸಿದ್ದು, ಬಾಲಕಿ ಅಸ್ವಸ್ಥಳಾಗಿದ್ದಳು. ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ವಾರ್ಡನ್ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸಲು ನಾಲ್ವರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದು ವಿವಿ ಅಧಿಕಾರಿಯೊಬ್ಬರು ಹೇಳಿದ್ದರು..