ಜನಾರ್ದನ ರೆಡ್ಡಿ ಪತ್ನಿ ಅರುಣಾಗೆ ಜಾಮೀನು ಮಂಜೂರು
ಓಎಂಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಅರುಣಾ ಲಕ್ಷ್ಮಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿಎಂ ಅಂಗಡಿ ಅವರು 1 ಲಕ್ಷ ರು ವೈಯಕ್ತಿಕ ಬಾಂಡ್, ಇಬ್ಬರ ಶ್ಯೂರಿಟಿ, ದೇಶಬಿಟ್ಟು ತೆರಳಬಾರದು, ತಮ್ಮ ಪಾಸ್ ಪೋರ್ಟ್ ಅನ್ನು ನ್ಯಾಯಾಲಯದ ಸುಪರ್ದಿಗೆ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜು.16ಕ್ಕೆ ಮುಂದೂಡಲಾಗಿದೆ.
ಓಎಂಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿಯಾಗಿರುವ ಅರುಣಾ ಲಕ್ಷ್ಮಿ ಅವರು ಡೆಕ್ಕನ್ ಮೈನಿಂಗ್ ಸಿಂಡಿಕೇಟ್(DMS) ಹಾಗೂ ಅಸೋಸಿಯೇಟೆಡ್ ಮೈನಿಂಗ್ ಕಾರ್ಪೊರೇಷನ್(AMC) ಸಂಸ್ಥೆ ಒಡತಿಯಾಗಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಸೋಮವಾರ(ಜು.2) ನಡೆಯಿತು. ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಅವರು ಜು.10 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾ. ಎಂಎಸ್ ಅಂಗಡಿ ಅವರು ಆದೇಶ ನೀಡಿದ್ದರು.
ಗಾಲಿ ಜನಾರ್ದನ ರೆಡ್ಡಿ, ಮೆಹಫುಜ್ ಅಲಿ ಖಾನ್ ಹಾಗೂ ಇತರೆ ಮೂವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ. ಆ.4ರಂದು ಗಾಲಿ ರೆಡ್ಡಿಗೆ ಜಾಮೀನು ನೀಡುವುದರ ಬಗ್ಗೆ ವಿಚಾರಣೆ ಕೈಗೊಳ್ಳಲಾಗುವುದು ಎಂದು ನ್ಯಾ.ಎಂಎಸ್ ಅಂಗಡಿ ಹೇಳಿದರು.
ಗಾಲಿ ಜನಾರ್ದನ ರೆಡ್ಡಿ, ಮೆಹಫುಜ್ ಖಾನ್ ಅಲ್ಲದೆ ಬಳ್ಳಾರಿ ಉಪ ಅರಣ್ಯ ಸರಂಕ್ಷಣಾಧಿಕಾರಿ ಎಸ್ ಮುತ್ತಯ್ಯ. ಆಗಿನ ಹೊಸಪೇಟೆ ಗಣಿ ಮತ್ತು ಭೂಗರ್ಭ ಇಲಾಖೆ ಉಪ ನಿರ್ದೇಶಕ ಎಸ್ ಪಿ ರಾಜು ಹಾಗೂ ಸಂಡೂರು ತಾಲೂಕಿನ ರೇಂಜ್ ಅರಣ್ಯ ಅಧಿಕಾರಿ ಮಹೇಶ್ ಪಾಟೀಲ್ ಅವರು ಸಹ ಆರೋಪಿಗಳಾಗಿದ್ದು, ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಮೇಲ್ಕಂಡ ಆರೋಪಿಗಳಿಗೆ ಜಾಮೀನು ನೀಡುವುದರ ಬಗ್ಗೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿತು.
ಸಿಬಿಐ ಸಲ್ಲಿಸಿರುವ ದಾಖಲೆಗಳಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದ್ದು, 15 ಗಣಿ ಗುತ್ತಿಗೆದಾರ ಸಂಸ್ಥೆಗಳಿಗೆ ರಿಲೀಫ್ ಸಿಗುವ ಸಾಧ್ಯತೆ ನಿಚ್ಚಳವಾಗಿದೆ.
2008 ರಿಂದ 2010 ಅವಧಿಯಲ್ಲಿ 15ಕ್ಕೂ ಅಧಿಕ ಗಣಿ ಗುತ್ತಿಗೆ ಸಂಸ್ಥೆಗಳನ್ನು ಗಾಲಿ ರೆಡ್ಡಿ ಪೀಡಿಸಿ ಹಣ ಸಂಗ್ರಹಿಸಿದ ಬಗ್ಗೆ ಸಮಗ್ರ ಮಾಹಿತಿಯನ್ನು ಸಿಬಿಐ ಕಲೆ ಹಾಕಿದೆ. ಆದರೆ, ಚಾರ್ಜ್ ಶೀಟ್ ನಲ್ಲಿ 15 ಕಂಪನಿಯ ಯಾವೊಬ್ಬ ಅಧಿಕಾರಿಯ ಹೆಸರನ್ನು ನಮೂದಿಸದಿರಲು ಸಿಬಿಐ ನಿರ್ಧರಿಸಿತ್ತು.
ಮೇಲ್ಕಂಡ ಅವಧಿಯಲ್ಲಿ ಸುಮಾರು 2,000 ಕೋಟಿ ರು.ಗೂ ಅಧಿಕ ಮೊತ್ತದ 45 ಲಕ್ಷ ಟನ್ ಗಳಷ್ಟು ಕಬ್ಬಿಣ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ ಎಂದು ಆರೋಪ ಹೊರೆಸಲಾಗಿದೆ.