ಒಕ್ಕಲಿಗರ ಶಾಸಕರಿಂದ ಸಾಮೂಹಿಕ ರಾಜೀನಾಮೆ ಬೆದರಿಕೆ

ಭಾನುವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆದ ನಂತರ ಸೋಮವಾರ ಶಿವಮೊಗ್ಗದಲ್ಲಿ ಸದಾನಂದ ಗೌಡರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ನಡುವೆ ಪಕ್ಷಾತೀತವಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಒಕ್ಕಲಿಗ ಶಾಸಕರ ಸಭೆ ನಡೆಸಲು ಉದ್ದೇಶಿಸಲಾಗಿದೆ. ಸಭೆಗೆ ಗೈರು ಹಾಜರಾದವರನ್ನು ಒಕ್ಕಲಿಗರಲ್ಲ ಎಂದು ಪರಿಗಣಿಸಿ ಬಹಿಷ್ಕರಿಸಲಾಗುವುದು ಎಂದು ನಂಜಾವಧೂತ ಸ್ವಾಮೀಜಿ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ(ಜು.9) ಸಭೆ ಸೇರಿದ ಒಕ್ಕಲಿಗರ ಸಂಘದ ಶಾಸಕರು ಈ ನಿರ್ಣಯ ಕೈಗೊಂಡಿದ್ದಾರೆ. ಗೃಹ ಸಚಿವ ಆರ್ ಅಶೋಕ್ ಅವರ ಪರವಾಗಿ ಭಾಗಿ ಆಗಿದ್ದ ಬೆಂಬಲಿಗ ಶಾಸಕ ಮುನಿರಾಜು ಅವರು ಸಭೆ ಬಳಿಕ ಮಾತನಾಡಿ, ಬೆಂಗಳೂರು ನಗರ ಒಕ್ಕಲಿಗ ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದರು.
ಕರವೇ ನಾರಾಯಣ ಗೌಡ ಮಾತನಾಡಿ ಉತ್ತಮ ಆಡಳಿತ ನೀಡಿದರೂ ಸದಾನಂದ ಗೌಡರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಬೆಂಬಲ ನೀಡದ ಶೋಭಾ ಕರಂದ್ಲಾಜೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿಗೆ ಆಗಮಿಸುವ ಪಕ್ಷದ ವರಿಷ್ಠರಾದ ರಾಜನಾಥ್ ಸಿಂಗ್, ಧರ್ಮೇಂದ್ರ ಪ್ರಧಾನ್ ಹಾಗೂ ಅರುಣ್ ಜೇಟ್ಲಿ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಘೇರಾವ್ ಮಾಡಲಾಗುವುದು. ಪಕ್ಷದ ವರಿಷ್ಠರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದರು.
ಮಠಾಧೀಶರ ಬೆಂಬಲ: ಡಿವಿ ಸದಾನಂದ ಗೌಡರನ್ನು ಮುಖ್ಯಮಂತ್ರ್ರಿ ಸ್ಥಾನದಿಂದ ಅನಗತ್ಯವಾಗಿ ಪದಚ್ಯುತಗೊಳಿಸಿದ್ದಕ್ಕೆ ಬಿಜೆಪಿಗೆ ತಕ್ಕ ಉತ್ತರ ಸಿಗಲಿದೆ. ಯಾವ ಕಾರಣಕ್ಕೆ ಸದಾನಂದ ಗೌಡರನ್ನು ಕೆಳಗಿಳಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟಣೆ ಬೇಕು ಎಂದು ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಅವರು ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದರು.
ಎಚ್ ಡಿ ದೇವೇಗೌಡ, ಎಸ್ಎಂ ಕೃಷ್ಣ ಹಾಗೂ ಕುಮಾರಸ್ವಾಮಿ ಅವರಂಥ ನಾಯಕರು ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ. ಲಿಂಗಾಯತ ಸಮುದಾಯಕ್ಕೆ ಕೇಡು ಬಗೆದಿಲ್ಲ. ಆದರೆ, ಇಂದು ಜಾತಿ ಲೆಕ್ಕಾಚಾರದಂತೆ ಸಿಎಂ ಕುರ್ಚಿ ಬದಲಿಸುತ್ತಿರುವ ಹೈಕಮಾಂಡ್ ಕ್ರಮವನ್ನು ನಾವು ಧಿಕ್ಕರಿಸುತ್ತೇವೆ ಎಂದು ಸ್ವಾಮೀಜಿ ಹೇಳಿದರು.
ಆದರೆ, ಸದಾ ಕಾಲ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿರುವ ಒಕ್ಕಲಿಗ ಸಮುದಾಯ ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಕಿರುಕುಳ ಅನುಭವಿಸಿದೆ. ಪೇದೆಯಿಂದ ಹಿಡಿದು ಐಎಎಸ್ ಅಧಿಕಾರಿಗಳ ತನಕ ಎಲ್ಲರೂ ಕಿರುಕುಳಕ್ಕೆ ಒಳಗಾಗಿದ್ದಾರೆ.
ಇಂಥ ಸಂದರ್ಭದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲುವಂಥ ಕ್ರಮಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದಿರುವುದು ಸರಿಯಿಲ್ಲ ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಮುಂದಿನ ಹಂತವಾಗಿ ಒಕ್ಕಲಿಗ ಶಾಸಕರ ರಾಜೀನಾಮೆ ನೀಡಿ ಹೊರಬರುವಂತೆ ಕರೆ ನೀಡಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಶೇ 17ರಷ್ಟು ಒಕ್ಕಲಿಗರ ಮತದಾರರಿದ್ದಾರೆ. 13 ರಿಂದ 15 ಜಿಲ್ಲೆಗಳಲ್ಲಿ ಒಕ್ಕಲಿಗರಿದ್ದಾರೆ. 13೦ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದೆ.ಸದಾನಂದ ಗೌಡರಲ್ಲದೆ, ಶೋಭಾ ಕರಂದ್ಲಾಜೆ, ಬಚ್ಚೇಗೌಡ, ಆರ್ ಆಶೋಕ್ ಮುಂತಾದ ಪ್ರಮುಖ ನಾಯಕರಿದ್ದಾರೆ.












Click it and Unblock the Notifications