ವಂಚನೆ:ಮತ್ತಷ್ಟು ಸ್ವಯಂಕೃಷಿಕರು ಪೊಲೀಸ್ ವಶಕ್ಕೆ
ಬಂಧಿತ ಐದು ಮಂದಿಯನ್ನು ದೇವನಹಳ್ಳಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವೀರೇಂದ್ರ ಬಾಬು ಹಾಗೂ ಮುರಳಿಯನ್ನು ಹೆಚ್ಚಿನ ತನಿಖೆಗಾಗಿ ಜುಲೈ 12ರವರೆಗೆ ಪೊಲೀಸರು ವಶಕ್ಕೆ ನೀಡಲಾಗಿದ್ದು ಇತರೆ ಮೂವರು ನಿರ್ದೇಶಕರುಗಳಾದ ವೆಂಕಟೇಶಬಾಬು, ಮಾರೇಗೌಡ ಮತ್ತು ಗೋವಿಂದರಾಜನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.
ತಾಲ್ಲೂಕು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಸ್ವಯಂಕೃಷಿ ಚಿಟ್ಫಂಡ್ಸ್ ಶಾಖೆಗಳ ಮೂಲಕ ಸಾರ್ವಜನಿಕರನ್ನು ವಂಚಿಸಿದ ಆರೋಪದ ಮೇಲೆ ಈ ಐವರ ವಿರುದ್ಧ 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿದ್ದವು. ತಲೆಮರೆಸಿಕೊಂಡು ಹೈದರಾಬಾದಿನಲ್ಲಿ ಇದ್ದ ಇವರನ್ನು ದೇವನಹಳ್ಳಿ ಪೊಲೀಸರು ಗುರುವಾರ ಬಂಧಿಸಿ ಇಲ್ಲಿಗೆ ಕರೆತಂದಿದ್ದರು.
ಸ್ವಯಂಕೃಷಿ ಸಂಸ್ಥೆಗೆ ಏಜೆಂಟರಾಗಿದ್ದವರು ಹಾಗೂ ಗ್ರಾಹಕರು ಹೂಡಿಕೆ ಮಾಡಿದ್ದ ಹಣವನ್ನು ಹಿಂದಿರುಗಿಸುವಲ್ಲಿ ಸಂಸ್ಥೆಯು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ನಿರ್ದೇಶಕರ ವಿರುದ್ಧ ಕಳೆದ ತಿಂಗಳಿನಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಹಿಂದೂಪುರ, ದೇವನಹಳ್ಳಿ, ಮೈಸೂರು, ನಂಜನಗೂಡು, ಬೆಂಗಳೂರಿನ ಜಯನಗರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಕೋಲಾರಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ವಂಚನೆ ಪ್ರಕರಣ ದಾಖಲಾಗಿರುವುದು ಚಿಟ್ಫಂಡ್ನಲ್ಲಿ ಎಂಬುದು ವಿಶೇಷ ಎಂದು ಪೊಲೀಸ್ ಮೂಲಗಳು ತಿಳಿಸಿವೆ.