ಬಾಬ್ರಿ ಮಸೀದಿ ಧ್ವಂಸವಾದಾಗ ಅಂದಿನ ಪ್ರಧಾನಿ ಏನ್ಮಾಡ್ತಿದ್ರು?
ಮುಸ್ಲಿಮರ ಧಾರ್ಮಿಕ ಕೇಂದ್ರ ಬಾಬ್ರಿ ಮಸೀದಿ ಧ್ವಂಸ ಮಾಡುವ ಸಂದರ್ಭದಲ್ಲಿ ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರು ತಮ್ಮ ನಿವಾಸದಲ್ಲಿ ದೇವತಾ ಪೂಜಾ ಕೈಂಕರ್ಯದಲ್ಲಿ ನಿರತರಾಗಿದ್ದರು ಎಂಬ ವಿಷಯ ಬಹಿರಂಗಗೊಂಡಿದೆ.
1992ರ ಡಿಸೆಂಬರ್ 2 ರಂದು ಬಾಬ್ರಿ ಮಸೀದಿ ಮೇಲೆ ಕರಸೇವಕರು ದಾಳಿ ಇಟ್ಟು ಧ್ವಂಸಗೊಳಿಸತೊಡಗಿದಾಗ ಪ್ರಧಾನಿ ಪಿವಿ ನರಸಿಂಹರಾವ್ ಅವರು ಪೂಜೆಯಲ್ಲಿ ತಲ್ಲೀನರಾಗಿದ್ದರು ಎಂದು ಕುಲದೀಪ್ ನಯ್ಯರ್ ಅವರ 'ಬಿಯಾಂಡ್ ದಿ ಲೈನ್ಸ್' ಪುಸ್ತಕದಲ್ಲಿ ಹೇಳಲಾಗಿದೆ.
ಅಂದಿನ ಪ್ರಧಾನಿಗಳಾಗಿದ್ದ ನರಸಿಂಹ ರಾವ್ ಅವರು ಬಾಬ್ರಿ ಮಸೀದಿಯ ಕೊನೆ ಕಲ್ಲನ್ನು ಕರ ಸೇವಕರು ಬೀಳಿಸುವವರೆಗೂ ಪೂಜೆಯಿಂದ ಮೇಲಕ್ಕೆ ಎದ್ದಿರಲಿಲ್ಲ. ಧ್ವಂಸ ಕಾರ್ಯ ಮುಗಿಯುವವರೆಗೂ ನರಸಿಂಹ ರಾವ್ ಅವರು ತಮ್ಮ ಕಿವಿಗಳಿಗೆ ಏನೂ ಕೇಳಿಸಬಾರದು ಎಂದು ಹತ್ತಿ ಇಟ್ಟುಕೊಂಡಿದ್ದರು.
ಧ್ವಂಸ ಕಾರ್ಯ ಪೂರೈಕೆಯಾದ ಸುದ್ದಿಯನ್ನು ಅವರ ಸಹಾಯಕ ಬಂದು ಕಿವಿಯಲ್ಲಿ ಹೇಳಿದ ಮೇಲೆ ನರಸಿಂಹರಾವ್ ಅವರು ಪೂಜೆಯಿಂದ ಎದ್ದರು ಎಂಬ ವಿಷಯವನ್ನು ಸಾಮಾಜಿಕ ಕಾರ್ಯಕರ್ತ ದಿವಂಗತ ಮಧು ಲಿಮಾಯೆ ಅವರಿಂದ ನನಗೆ ತಿಳಿದು ಬಂದು ಎಂದು ನಯ್ಯರ್ ಅವರು ತಮ್ಮ ಪುಸ್ತಕದ 'ನರಸಿಂಹ ರಾವ್ ಅವರ ಸರ್ಕಾರ' ಎಂಬ ಅಧ್ಯಾಯದಲ್ಲಿ ಪ್ರಸ್ತಾಪಿಸಿದ್ದಾರೆ.
ಅದರೆ, ಕುಲದೀಪ್ ನಯ್ಯರ್ ಅವರ ಬಿಯಾಂಡ್ ದಿ ಲೈನ್ಸ್ ಪುಸ್ತಕದಲ್ಲಿ ನರಸಿಂಹರಾವ್ ಅವರ ಬಗ್ಗೆ ಇದೇ ಎನ್ನಲಾದ ಕಟು ಸತ್ಯಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಪುತ್ರ ರಂಗಾರಾವ್, ಇದೆಲ್ಲವೂ ನಂಬಲಾಗದ ಸುದ್ದಿ ಹಾಗೂ ಕಪೋಲಕಲ್ಪಿತ. ಈ ರೀತಿ ಆರೋಪ ಮಾಡುವುದು ಸಹಿಸಲು ಸಾಧ್ಯವಿಲ್ಲ. ನಮ್ಮ ತಂದೆ ಮುಸ್ಲಿಮರನ್ನು ತುಂಬಾ ಪ್ರೀತಿಸುತ್ತಿದ್ದರು. ಬಾಬ್ರಿ ಮಸೀದಿ ಧ್ವಂಸದಿಂದ ತುಂಬಾ ಕೋಪಗೊಂಡಿದ್ದರು.
ಕರಸೇವಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನನ್ನ ಬಳಿ ತಮಗಾದ ದುಃಖವನ್ನು ತೋಡಿಕೊಂಡಿದ್ದರು. ಆದರೆ, ಲಿಮಾಯೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ರಂಗರಾವ್ ಅವರು ಕಿಡಿಕಾರಿದ್ದಾರೆ.
ಕೋಮು ದಳ್ಳುರಿಯಿಂದ ದೇಶ ಹತ್ತಿ ಉರಿಯುತ್ತಿದ್ದಾಗ ಪ್ರಧಾನಿ ಪೂಜೆ ಮಾಡುತ್ತಿದ್ದರು ಎಂಬ ಸುದ್ದಿ ಅನೇಕರನ್ನು ದಿಗ್ಭ್ರಮೆಗೊಳಿಸಿದೆ. ರೋಮ್ ನಗರ ಹತ್ತಿ ಉರಿಯುವಾಗ ನೀರೋ ದೊರೆ ಪೀಟಿಲು ಬಾರಿಸುತ್ತಿದ್ದ ಎಂಬಂತೆ ಪಿವಿ ನರಸಿಂಹರಾವ್ ಪ್ರಕರಣ ಬಿಂಬಿಸಲಾಗಿದೆ ಎಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಪರಿಸ್ಥಿತಿ ಕೈ ಮೀರುವ ಹಂತ ತಲುಪಿದಾಗ ಪ್ರಧಾನಿ ಪಿವಿ ನರಸಿಂಹ ರಾವ್ ಅವರು ತಮ್ಮ ನಿವಾಸಕ್ಕೆ ಪತ್ರಕರ್ತರನ್ನು ಕರೆಸಿಕೊಂಡು ಸುದ್ದಿಗೋಷ್ಥಿ ನಡೆಸಿದರು. ಅರೆ ಮಿಲಿಟರಿ ಬಳಕೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಉತ್ತರ ಪ್ರದೇಶದಲ್ಲಿ ಹವಾಮಾನ ಸರಿಯಿಲ್ಲ, ಮಿಲಿಟರಿ ಪಡೆ ತಲುಪಲು ಸಾಧ್ಯವಿಲ್ಲ ಎಂದು ಬಿಟ್ಟರು. ನಂತರ ಉತ್ತರಪ್ರದೇಶ ಸರ್ಕಾರ ವಜಾಗೊಳಿಸಿ, ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ರಾಜೀನಾಮೆ ಪಡೆಯಲಾಯಿತು ಎಂದು ಕುಲದೀಪ್ ನಯ್ಯರ್ ಅವರ ಪುಸ್ತಕದಲ್ಲಿ ಹೇಳಲಾಗಿದೆ.