'ವೀರಪ್ಪನ್ ಸಂಭಾವಿತನಂತೆ ಬದುಕಲು ಬಯಸಿದ್ದ'
ಅಂಬುರಾಜ್ ಹೀಗೇಕೆ ಹೇಳಿದರೆಂದರೆ ಸರಿಸುಮಾರು 6 ತಿಂಗಳ ಕಾಲ ವೀರಪ್ಪನ್ ಜತೆ ಅರಣ್ಯದಲ್ಲಿ ಕಾಲ ಕಳೆದಿದ್ದರು. 'ಜೈಲಿನಿಂದ ಜೈಲಿಗೆ ರಂಗಯಾತ್ರೆ' ಎಂಬ ರಂಗನಾಟಕವನ್ನು ಪ್ರದರ್ಶಿಸುವ ಸಂದರ್ಭದಲ್ಲಿ ಅಂಬುರಾಜ್, ವೀರಪ್ಪನ್ ಜತೆಗಿನ ಅನುಭವಗಳನ್ನು ಮೆಲುಕು ಹಾಕುತ್ತಾ ಹೀಗೆ ಹೇಳಿದ್ದಾರೆ.
'ಆ ಆರು ತಿಂಗಳ ಕಾಲದ ಜೈಲುವಾಸದಲ್ಲಿ ಆತನನ್ನು (ವೀರಪ್ಪನ್) ಅತ್ಯಂತ ಸಮೀಪದಿಂದ ನೋಡಿದ್ದೆ. ಗೌರವಯುತವಾಗಿ ಇತರೆ ನಾಗರಿಕರು ಜೀವನ ನಡೆಸುವಂತೆಯೆ ವೀರಪ್ಪನ್ ತಾನೂ ಬಾಳ ಬಯಸಿದ್ದ' ಎಂದು ಅಂಬುರಾಜ್ ತಿಳಿಸಿದ್ದಾರೆ.
ಜನಸಾಮಾನ್ಯರಂತೆ ಬದುಕು ನಡೆಸುವುದಕ್ಕೆ ಅವಕಾಶ ಮಾಡಿಕೊಳ್ಳಲು ಸರಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ವೀರಪ್ಪನ್ ಜನರನ್ನು ಅಪಹರಣ ಮಾಡುತ್ತಿದ್ದನಷ್ಟೇ. ಗುಂಡಾಲ್ ಡ್ಯಾಂ ಬಳಿ ವೀರಪ್ಪನ್ 9 ಅರಣ್ಯಾಧಿಕಾರಿಗಳನ್ನು ಅಪಹರಿಸಿದಾಗ ನಾನೂ ಆತನ ಜತೆ ಇದ್ದೆ. ಆಗಲೂ ಅವನ ಬೇಡಿಕೆ ಅದೇ ಆಗಿತ್ತು.
'ನನ್ನ ಬಳಿಯಿರುವ ಶಸ್ತ್ರಾಸ್ತ್ರ ಕೆಳಗಿಡುತ್ತೇನೆ. ಆದರೆ ನನ್ನನ್ನು 5-10 ವರ್ಷ ಕಾಲ ಜೈಲಿನಲ್ಲಿಡಬೇಕು ಅಷ್ಟೇ. ಆನಂತರ ನಾನು ನೆಮ್ಮದಿಯ ಬದುಕನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು' ಎಂದು ಸರಕಾರಕ್ಕೆ ವೀರಪ್ಪನ್ ಮನವಿ ಮಾಡಿದ್ದ.
'ಗಮನಾರ್ಹವೆಂದರೆ ವರನಟ ಡಾ. ರಾಜಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದಾಗ ನಾನು ಅವನ ಜತೆಯಿರಲಿಲ್ಲ. ಆದರೆ ಆ ಅಪಹರಣದ ಹಿಂದಿನ ಆತನ ಉದ್ದೇಶವೂ ಇದೇ ಆಗಿತ್ತು ಎಂಬ ವಿಶ್ವಾಸ ನನ್ನದು ಎಂದು ಅಂಬುರಾಜ್ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ, ಯಾರಪ್ಪಾ ಈ ಅಂಬುರಾಜ ಅಂದರೆ ಈತ ತಮಿಳುನಾಡಿನ ಪೆರಿಯಾರ್ ಜಿಲ್ಲೆಯವ. ಆತನೇ ಹೇಳುವಂತೆ ಮೊದಲಬಾರಿಗೆ ಆಕಸ್ಮಿಕವಾಗಿ ವೀರಪ್ಪನ್ ಜತೆ ಆತನ ಭೇಟಿಯಾಗಿತ್ತು. 'ನನ್ನ ಶಾಲಾ ದಿನಗಳಲ್ಲಿ ಅರಣ್ಯದ ಸೊಬಗು ಆನಂದಿಸಲು ಹೀಗೇ ಸುಮ್ಮನೆ ಸುತ್ತಾಡುತ್ತಿದ್ದೆ. ಇಂತಹ ಸುತ್ತಾಟದಲ್ಲಿದ್ದಾಗಲೇ 1997ರಲ್ಲಿ ವೀರಪ್ಪನನ್ನು ಭೇಟಿಯಾದೆ' ಎಂದು ಅಂಬುರಾಜ್ ಹೇಳಿದ್ದಾರೆ.
90ರ ದಶಕದ ಅಂತ್ಯದಲ್ಲಿ ವೀರಪ್ಪನ್ ಜತೆ ಅರಣ್ಯದಲ್ಲಿ ಕಾಲ ಕಳೆದ ಕಾರಣವಾಗಿ ಕರ್ನಾಟಕ ಪೊಲೀಸರು ನನ್ನನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿದರು. ಮೈಸೂರು ಕೇಂದ್ರ ಕಾರಾಗೃಹದಲ್ಲಿ ಅಪರಾಧಿಯಾಗಿ ಅಂಬುರಾಜ್ ಜೈಲುಶಿಕ್ಷೆ (ಅಪರಾಧಿ ಸಂಖ್ಯೆ 14865) ಅನುಭವಿಸುತ್ತಿದ್ದಾರೆ.
ಆದರೆ ರಂಗಭೂಮಿಯ ಸೆಳೆತಕ್ಕೆ ಸಿಕ್ಕ ಅಂಬುರಾಜ್, ರಂಗಾಯಣದ ಸಹವಾಸದಲ್ಲಿ ಉತ್ತಮ ನಟನಾಗಿ ಮಾರ್ಪಟ್ಟಿದ್ದು, 'ಜೈಲಿನಿಂದ ಜೈಲಿಗೆ ರಂಗಯಾತ್ರೆ' ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮತ್ತು ಆ ರಂಗಭೂಮಿ ಸೆಳೆತವೇ ಅಂಬುರಾಜ್ ಅವರನ್ನು ಜೀವನ್ಮುಖಿಯನ್ನಾಗಿಸಿದೆ.