ಜು.9ಕ್ಕೆ ನೂತನ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್?

ರಾಜ್ಯದ 27ನೇ ಮುಖ್ಯಮಂತ್ರಿಯಾಗಿ ಜು.9ರಂದು ಜಗದೀಶ್ ಶೆಟ್ಟರ್ ಅವರು ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತ ನಿಗದಿಪಡಿಸಲಾಗಿದೆ ಎಂಬ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಅವರ ಆಸೆ ಕೊನೆಗೂ ಈಡೇರಿದೆ. ಆದರೆ, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಆಗಲಿ, ದೆಹಲಿಯ ಬಿಜೆಪಿ ವಕ್ತಾರರಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ.
ರಾಜ್ಯ ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದ ಬಿಕ್ಕಟ್ಟಿನ ಪರಿಹಾರ ಸಂಬಂಧ ವರಿಷ್ಠರ ಸೂಚನೆಯಂತೆ ದೆಹಲಿಗೆ ತೆರಳಿದ್ದ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ಆರ್.ಅಶೋಕ್ ಬುಧವಾರ ಸಹ ದೆಹಲಿಯಲ್ಲೇ ಇದ್ದು, ವರಿಷ್ಠರೊಂದಿಗೆ ಸಮಾಲೋಚನೆ ಮುಂದುವರೆಸಿದ್ದರು.
ಮಂಗಳವಾರ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೊಂದಿಗೆ ನಡೆದ ಮಹತ್ವದ ಸಮಾಲೋಚನಾ ಸಭೆ ನಂತರ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ, ರಾಜ್ಯಾಧ್ಯಕ್ಷ ಕೆ.ಎಸ್ ಈಶ್ವರಪ್ಪ ರಾತ್ರಿಯೇ ಬೆಂಗಳೂರಿಗೆ ವಾಪಸ್ಸಾಗಿದ್ದರು.
ಆದರೆ ನಾಯಕತ್ವ ಬದಲಾವಣೆ ಬಯಸಿ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜಗದೀಶ್ ಶೆಟ್ಟರ್ ಮತ್ತು ತಟಸ್ಥ ಗುಂಪಿನಲ್ಲಿದ್ದ ಮತ್ತೋರ್ವ ಸಚಿವ ಆರ್.ಅಶೋಕ್ ಬುಧವಾರ ಸಹ ದೆಹಲಿಯಲ್ಲೇ ಬೀಡು ಬಿಟ್ಟು, ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಜು.16 ರಿಂದ ವಿಧಾನಸಭಾ ಅಧಿವೇಶನ ಆರಂಭವಾಗಲಿದೆ. ಜು.19 ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹಾಗಾಗಿ ಅಧಿವೇಶನಕ್ಕೆ ಸಿದ್ಧರಾಗಲು ಜು.9 ರಂದು ಮುಖ್ಯಮಂತ್ರಿಯಾಗಿ ಪ್ರಮಾಣಚನ ಸ್ವೀಕರಿಸಲಿದ್ದ್ದಾರೆ.












Click it and Unblock the Notifications