ಎಲ್ಲದಕು ಕಾರಣನು ಆ ಯಡಿಯೂರಪ್ಪಾ: ಸಿದ್ದರಾಮಯ್ಯ
ಹಾಗೆಯೇ ಬಿಜೆಪಿಯ ಬಗ್ಗೆ ಭವಿಷ್ಯವನ್ನೂ ಹೇಳಿದ್ದಾರೆ. ಆ ಪಕ್ಷದಲ್ಲಿನ ಬಣಗಳು ಇನ್ನು ಒಂದಾಗಲು ಸಾಧ್ಯವೇ ಇಲ್ಲ. ಅದರ ಅಂತ್ಯ ಸಮೀಪಿಸಿದೆ ಎಂದೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯ ಬಿಕ್ಕಟ್ಟಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಮ್ಮಕ್ಕು ನೀಡುತ್ತಿದ್ದಾರೆ. ಇದಕ್ಕೆಲ್ಲಾ ಅವರೇ ಕಾರಣರಾಗಿದ್ದಾರೆ. ಅವರಿಗೆ ರಾಜ್ಯ ರಾಜಕೀಯದಲ್ಲಿ ಅವರ ಮಾತನ್ನು ಕೇಳುವ ಮುಖ್ಯಮಂತ್ರಿಯೊಬ್ಬರು ಬೇಕು. ಬಿಜೆಪಿಯಲ್ಲಿರುವ ಬಣಗಳು ಮತ್ತೆ ಒಂದಾಗಲು ಸಾಧ್ಯವೇ ಇಲ್ಲ. ಜಾತಿ ರಾಜಕಾರಣ ಎಲ್ಲಕ್ಕಿಂತ ಹೆಚ್ಚು ಅಪಾಯಕಾರಿ ಎಂದು ವಿವರಿಸಿದರು.
ಸದಾನಂದ ಗೌಡ ಅತ್ಯಂತ ದುರ್ಬಲ ಮುಖ್ಯಮಂತ್ರಿ: ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಕೆಲಸ ಮಾಡಲು ಬರುವುದಿಲ್ಲ. ಅವರು ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ಕಿಡಿಗಕಾರಿದ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿಯಲ್ಲಿ ಈಗ ಉಂಟಾಗಿರುವುದು ಕುರ್ಚಿಗಾಗಿ ಜಗಳ. ಬಿಜೆಪಿ ವರಿಷ್ಠರನ್ನು ಬ್ಲ್ಯಾಕ್ಮೇಲ್ ಮಾಡಲು ಯಡಿಯೂರಪ್ಪ ಹೊರಟಿದ್ದಾರೆ.
ಅದಕ್ಕಾಗಿ ಈ ರೀತಿಯ ತಂತ್ರ ಅನುಸರಿಸಿದ್ದಾರೆ ಎಂದರು. ಮೂರು ದಿನಗಳಲ್ಲಿ ವಿಧಾನ ಮಂಡಲ ಅಧಿವೇಶನ ಕರೆಯಬೇಕು. ಪ್ರಸಕ್ತ ಸಮಸ್ಯೆಗಳನ್ನು ಈ ಸಂದರ್ಭ ಚರ್ಚಿಸಬೇಕು ಎಂದೂ ಅವರು ಇದೇ ವೇಳೆ ಆಗ್ರಹಿಸಿದರು.