ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದು ಹೋದ ಪ್ರಧಾನ್ : ಬಿಜೆಪಿ ಬಿಕ್ಕಟ್ಟು ಯಥಾಸ್ಥಿತಿ

By Prasad
|
Google Oneindia Kannada News

Dharmendra Pradhan
ಬೆಂಗಳೂರು, ಜೂ. 30 : ಕರ್ನಾಟಕ ಬಿಜೆಪಿಯಲ್ಲಿ ಉದ್ಭವವಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರು ಬಂದಿದ್ದರಾ ಅಥವಾ ಎಂದಿನಂತೆ ಎಲ್ಲರ ಅಹವಾಲುಗಳನ್ನು ಸ್ವೀಕರಿಸಿ ಹೈಕಮಾಂಡಿಗೆ ಮುಟ್ಟಿಸುವ ಉದ್ದೇಶದಿಂದ ಬಂದಿದ್ದರಾ? ಗೊತ್ತಿಲ್ಲ. ಬಂದವರು ಮಾತ್ರ ಖಾಲಿ ಕೈಯಲ್ಲಿ ವಾಪಸ್ ಹೊರಟಿದ್ದಾರೆ. ಬಿಜೆಪಿಯ ಬಿಕ್ಕಟ್ಟು ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಸದಾನಂದ ಗೌಡ ಅವರು ಪಕ್ಷಪಾತಿ ಧೋರಣೆ ತೋರುತ್ತಿದ್ದಾರೆ ಎಂದು ಅವರ ವಿರುದ್ಧ ಮುಗಿಬಿದ್ದಿರುವ ಯಡಿಯೂರಪ್ಪ ಬಣದ ಆಕ್ರೋಶವನ್ನು ಎದುರಿಸಿ, ಏನೇ ಆಗಲಿ ಒತ್ತಡ ತಂತ್ರಕ್ಕೆ ಮಣಿಯಬಾರದು, ನಾಯಕತ್ವ ಬದಲಾಗಬಾರದು ಎಂದು ಭಿನ್ನಮತೀಯರ ವಿರುದ್ಧ ತಿರುಗಿ ನಿಂತಿರುವ ಡಿವಿ ಸದಾನಂದ ಗೌಡರ ಬಣದ ಒಕ್ಕೊರಲಿನ ಮನವಿಯನ್ನು ತೆಗೆದುಕೊಂಡು, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪ್ರಧಾನ್ ದೆಹಲಿಗೆ ಮರಳುತ್ತಿದ್ದಾರೆ.

ಪರ ಮತ್ತು ವಿರೋಧಿ ಬಣದ ಜೊತೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮೇಂದ್ರ ಪ್ರಧಾನ್ ಅವರು, ಎಲ್ಲರ ಜೊತೆ ಮಾತನಾಡಿದ್ದೇನೆ, ಸದ್ಯದಲ್ಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ದೆಹಲಿಯಲ್ಲಿ ಹುಡುಕುತ್ತೇವೆ ಎಂದಷ್ಟೇ ಚುಟುಕಾಗಿ ಹೇಳಿ ಜಾಗ ಖಾಲಿ ಮಾಡಿದರು. ಬಿಜೆಪಿಯಲ್ಲಿನ ಬಿಕ್ಕಟ್ಟು ಯಾವ ಸ್ಥಿತಿ ತಲುಪಿದೆ ಎಂದು ಅವರ ಮುಖವೇ ಎಲ್ಲ ಕಥೆಯನ್ನು ಹೇಳುತ್ತಿತ್ತು. ಪತ್ರಕರ್ತರ ಪ್ರಶ್ನೆಗಳಿಗೆ ಅವರಲ್ಲಿ ಯಾವ ಉತ್ತರವೂ ಇರಲಿಲ್ಲ.

ಡಿವಿಎಸ್ ಬಣದ ಎಚ್ಚರಿಕೆ : ಯಡಿಯೂರಪ್ಪ ಮತ್ತು ಸಂಗಡಿಗರ ಒತ್ತಡಕ್ಕೆ ಯಾವುದೇ ಕಾರಣಕ್ಕೂ ಮಣಿಯಬಾರದು. ನಾಯಕತ್ವ ಬದಲಾವಣೆ ಬೇಡಿಕೆಗೆ ಸೊಪ್ಪು ಹಾಕಬಾರದು ಎಂದು ಮನವಿ ಮಾಡಿಕೊಂಡಿರುವ ಡಿವಿಎಸ್ ಬಣ, ಮುಂದೆ ನಾವೂ ಒತ್ತಡ ತಂತ್ರ ಹೇರುತ್ತೇವೆ, ಷರತ್ತುಗಳಿಗೆ ಒಪ್ಪುತ್ತೀರಾ ಎಂದು ಪ್ರಧಾನ್ ಅವರನ್ನೇ ಪ್ರಶ್ನಿಸಿದ್ದಾರೆ. ಒಂದು ವೇಳೆ ನಾಯಕತ್ವ ಬದಲಾವಣೆಯಾಗಿ ಸರಕಾರ ಬಿದ್ದುಹೋದರೆ ಅದಕ್ಕೆ ನೀವೇ ಕಾರಣರಾಗುತ್ತೀರಿ ಎಂದು ಹೈಕಮಾಂಡಿಗೂ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನ್ ಅವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಎ. ರಾಮದಾಸ್ ಅವರು, ನಾಯಕದ್ವದ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ, ಪಕ್ಷದ ಸಂಘಟನೆಯ ನಿರ್ಧಾರಗಳು ಬೆಂಗಳೂರಿನಲ್ಲಿ ಆಗುವುದಿಲ್ಲ. ಅವೆಲ್ಲ ದೆಹಲಿಯಲ್ಲಿನ ಹಿರಿಯ ನಾಯಕರು ತೆಗೆದುಕೊಳ್ಳುತ್ತಾರೆ. ನಾವು ಅವರ ನಿರ್ಣಯಕ್ಕೆ ಬದ್ಧರಾಗುತ್ತೇವೆ. ಸದ್ಯದಲ್ಲಿಯೇ ಸಂಸದೀಯ ಮಂಡಳಿ ಸಭೆಯಲ್ಲಿ ನಾವೆಲ್ಲ ಭಾಗವಹಿಸುತ್ತಿದ್ದೇವೆ. ಮುಂದೆ ಜನರ ಇಚ್ಛೆಯಂತೆ ನಾವೆಲ್ಲ ಒಂದಾಗಿಯೇ ಆಡಳಿತ ನಡೆಸುತ್ತೇವೆ, ಚುನಾವಣೆ ಎದುರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಸದಾ ಯಡಿಯೂರಪ್ಪ ಅವರ ಬೆಂಬಲ ವ್ಯಕ್ತಪಡಿಸುತ್ತಿದ್ದ ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿ ಅವರು ತಮ್ಮ ನಿಷ್ಠೆಯನ್ನು ಬದಲಿಸಿ ಡಿವಿ ಸದಾನಂದ ಗೌಡರ ಪಾಳಯ ಸೇರಿಕೊಂಡಿದ್ದಾರೆ. ಯಡಿಯೂರಪ್ಪ ಅವರೊಡನೆ ಭೂ ಹಗರಣಗಳಲ್ಲಿ ಸಿಲುಕಿರುವ ಮಾಜಿ ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು, ದೆಹಲಿಯಿಂದ ಬಂದಿರುವ ಧರ್ಮೇಂದ್ರ ಪ್ರಧಾನ್ ಅವರಿಗೆ ತಮ್ಮ ಟ್ರೇಡ್ ಮಾರ್ಕ್ ತಿರುಪತಿ ಲಡ್ಡುವನ್ನು ಪ್ರಸಾದದ ರೂಪದಲ್ಲಿ ಕೊಟ್ಟರು.

ಭಿನ್ನಮತೀಯರಲ್ಲಿಯೇ ಭುಗಿಲೆದ್ದ ಭಿನ್ನಮತ : ನಾಯಕತ್ವ ಬದಲಾಗಲೇಬೇಕು, ಯಡಿಯೂರಪ್ಪ ಇಲ್ಲದಿದ್ದರೆ ಸರಿ ಜಗದೀಶ್ ಶೆಟ್ಟರ್ ಅವರನ್ನಾದರೂ ಪಟ್ಟದ ಮೇಲೆ ಕೂಡಿಸಿ ಎಂದು ಭಿನ್ನಮತ ಸ್ಫೋಟಿಸಿರುವ ಯಡಿಯೂರಪ್ಪ ಬಣದಲ್ಲೇ ಭಿನ್ನಮತ ಭುಗಿಲೆದ್ದಿದೆ. ರಾಜೀನಾಮೆ ಸಲ್ಲಿಸಿರುವ 7 ಜನ ಒಂದೆಡೆಯಿದ್ದರೆ, ಜಗದೀಶ್ ಶೆಟ್ಟರ್ ಬದಿಗೆ ಸರಿದು ಯಡಿಯೂರಪ್ಪನವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಜಗದೀಶ್ ಶೆಟ್ಟರ್ ಅವರನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಆಡುತ್ತಿರುವ ರಾಜಕೀಯ ನಾಟಕದ ಮತ್ತೊಂದು ಅಂಕ ಅನಾವರಣಗೊಂಡಿದ್ದು, ಧರ್ಮೇಂದ್ರ ಪ್ರಧಾನ್ ಅವರೊಡನೆ ಭಿನ್ನಮತೀಯರು ಭೇಟಿ ಮಾಡಿದ ನಂತರ, ಯಡಿಯೂರಪ್ಪ ಅವರ ಮನೆಗೆ ತೆರಳಿದ ಶಾಸಕರ ದಂಡಿನಲ್ಲಿ ಜಗದೀಶ್ ಶೆಟ್ಟರ್ ಇರಲಿಲ್ಲ. ಅವರು ಪ್ರತ್ಯೇಕವಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ಅನೇಕ ಊಹಾಪೋಹಗಳಿಗೆ ಮತ್ತು ಸಂಶಯಗಳಿಗೆ ಕಾರಣವಾಗಿದೆ.

ಪ್ರಧಾನ್‌ರಿಂದ ಯಡಿಯೂರಪ್ಪ ಭೇಟಿ : ಬಿಜೆಪಿ ಬಿಕ್ಕಟ್ಟಿನ ತೆರೆಮರೆಯ ಸೂತ್ರಧಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಧರ್ಮೇಂದ್ರ ಪ್ರಧಾನ್ ಅವರನ್ನು ಹೈಕಮಾಂಡನ್ನೇ ತಮ್ಮಲ್ಲಿಗೆ ಕರೆಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಬಿಕ್ಕಟ್ಟು ಶಮನಕ್ಕೆಂದು ಬಂದಿರುವ ಪ್ರಧಾನ್ ಅವರನ್ನು ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸಕ್ಕೆ ಕರೆಯಿಸಿಕೊಂಡಿರುವ ಯಡಿಯೂರಪ್ಪ, ತಮ್ಮ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿಯ ಪ್ರತಿ ಶಾಸಕರು ಧರ್ಮೇಂದ್ರ ಇದ್ದಲ್ಲಿಗೆ ಬಂದು ಭೇಟಿಯಾಗುತ್ತಿದ್ದರೆ ಯಡಿಯೂರಪ್ಪ ಮಾತ್ರ ತಾವಿದ್ದಲ್ಲಿಯೇ ಪ್ರಧಾನ್ ಅವರನ್ನು ಕರೆಸಿಕೊಂಡಿದ್ದಾರೆ.

English summary
Karnataka BJP crisis : Dharmendra Pradhan's presence and conversation with two factions of BJP does not yeild any result. The status quo continues as Yeddyurappa loyalists and Sadananda Gowda supporters stick to their stand. But, BJP high command fails to take any stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X