ಬಿಜೆಪಿ ಹೈಕಮಾಂಡನ್ನು ಯಾವ ಬಿರುದಿನಿಂದ ಕರೆಯಬೇಕು?
ಬೆಂಗಳೂರು, ಜೂ. 29 : ಕರ್ನಾಟಕದಲ್ಲಿ ರಾಜಕೀಯ ಬಿರುಗಾಳಿಯ ಬಿಸಿ ತಟ್ಟುತ್ತಿದ್ದರೂ ಬೆಚ್ಚಗೆ ಹುತ್ತದಲ್ಲಿ ಕುಳಿತಿರುವ ಬಿಜೆಪಿ ಹೈಕಮಾಂಡ್ ಎಂಬ ಹಲ್ಲು ಕಿತ್ತ ಹಾವು ಕಚ್ಚುವುದು ಅತ್ತಾಗಿರಲಿ, ಕನಿಷ್ಠಪಕ್ಷ ಬುಸ್ ಅನ್ನುತ್ತದೋ, ಅಥವಾ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗ್ಯಾಂಗ್ ಆಡಿಸುತ್ತಿರುವ ಪುಂಗಿಗೆ ತಲೆದೂಗುತ್ತದೋ ಕಾದು ನೋಡುವ ಕಾಲ ಬಂದಿದೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಅಥವಾ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರನ್ನು ಕಿತ್ತು ತಮ್ಮ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಪ್ರತಿಷ್ಠಾಪಿಸಬೇಕು ಎಂದು ಪಟ್ಟುಹಿಡಿದಿರುವ ಬಿಎಸ್ವೈ ಬಣದ 8 ಶಾಸಕರು ಸಂಪುಟಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿ, ಬಂಡಾಯದ ಬಾವುಟ ಮತ್ತೆ ಹಾರಿಸಿದರೂ ಬಿಜೆಪಿ ಹೈಕಮಾಂಡ್ ಮಾತ್ರ ಕಠಿಣ ಕ್ರಮ ತೆಗೆದುಕೊಳ್ಳಲು ತಾನು ಅಸಮರ್ಥ ಎಂದು ತೋರಿಸಿದೆ.
ರಾಷ್ಟ್ರಪತಿ ಚುನಾವಣೆ ಮುಗಿಯುವವರೆಗೆ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ, ಜುಲೈ 18ರ ನಂತರವೇ ಅದರ ಬಗ್ಗೆ ಎಲ್ಲರೊಡನೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕದ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ಭಿನ್ನಮತೀಯ ಚಟುವಟಿಕೆಗಳು ಗರಿಗೆದರಿವೆ.
ಸದಾನಂದ ಗೌಡರ ಕೆಲಸ ತೃಪ್ತಿಕರವಾಗಿದೆ, ಅವರು ಆಡಳಿತವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮೇಲಿಂದ ಮೇಲೆ ಹೇಳಿಕೆ ನೀಡುತ್ತಿದ್ದರೂ, ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಎಂದು ಕಠಿಣ ಸಂದೇಶವನ್ನು ಭಿನ್ನಮತೀಯರಿಗೆ ರವಾನಿಸದೆ, ಮುಂದೆ ನೋಡೋಣ ಎಂಬ ಅಡ್ಡಗೋಡೆಯ ಮೇಲೆ ದೀಪವಿಡುವಂತಹ ಹೇಳಿಕೆಯನ್ನು ಹೈಕಮಾಂಡ್ ನೀಡುತ್ತಿರುವುದು ನಿಜಕ್ಕೂ ಸೋಜಿಗ.
ಬಿಜೆಪಿ ಎದುರಿಸುತ್ತಿರುವುದು ಇದೊಂದೇ ಸಮಸ್ಯೆಯಲ್ಲ. ಒಬ್ಬರಾದ ಮೇಲೆ ಒಬ್ಬರಂತೆ ತಾವೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಾರಿ ಮತ್ತಷ್ಟು ಗೊಂದಲ ಮೂಡಿಸುತ್ತಿದ್ದಾರೆ. ಸದಾನಂದ ಗೌಡರ ಬೆನ್ನಿಗೆ ನಿಂತಿದ್ದ ಈಶ್ವರಪ್ಪ ತಾವೂ ಸಿದ್ಧ ಎಂದು ಹೇಳಿ ಅಚ್ಚರಿ ಮೂಡಿಸಿದ್ದರೆ, ರಾಮಚಂದ್ರ ಗೌಡರು ತಾನೂ ಮುಖ್ಯಮಂತ್ರಿ ಪದವಿಗೇರಲು ಹೊಸಬಟ್ಟೆ ಹೊಲಿಸಲು ಸಿದ್ಧ ಎಂದಿದ್ದಾರೆ. ಇನ್ನು ಉಳಿದವರಿಗೆ ಮಾತನಾಡಲು ಬಿಟ್ಟರೆ ಇನ್ನೂ ನಾಲ್ಕಾರು ಹೆಸರುಗಳು ಬಂದಾವು.
ಸಮಸ್ಯೆಗಳ ಗುಡ್ಡೆಯೇ ಗುಡ್ಡದಷ್ಟಿರುವಾಗ ಸೋಮಶೇಖರ ರೆಡ್ಡಿ, ಸುರೇಶ್ ಬಾಬು ಅಂಥವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಪಕ್ಷದಿಂದ ಸಿಡಿದಿರುವ ಶ್ರೀರಾಮುಲು ಜೊತೆಗೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುವುದು ಮಾತ್ರವಲ್ಲದೆ, ಶಾಸಕಾಂಗ ಪಕ್ಷದ ಸಭೆಗೆ ಖಂಡಿತ ಬರುವುದಿಲ್ಲ ಎಂದು ಹೇಳಿ ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಪಕ್ಷವಿರೋಧಿ ಚಟುವಟಿಕೆಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿರುವ ಬಿಜೆಪಿ ಹೈಕಮಾಂಡನ್ನು ಯಾವ ಬಿರುದಿನಿಂದ ಕರೆಯಬೇಕು?
ವಿಧಾನಸಭೆ ಚುನಾವಣೆ ಇನ್ನೂ ಒಂದು ವರ್ಷ ಇರುವಿದ್ದರೂ ರಾಜಕೀಯ ದೊಂಬರಾಟದಿಂದಾಗಿ ಅಭಿವೃದ್ಧಿ ಕಾರ್ಯಗಳು ನಿಂತ ನೀರಂತಾಗಿವೆ. ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ, ಬರ ತಾಂಡವವಾಡುತ್ತಿದೆ, ರೈತರು, ಕೂಲಿ ಕಾರ್ಮಿಕರು ಗುಳೆ ಎದ್ದು ನಗರದತ್ತ ಪ್ರಯಣ ಬೆಳೆಸುತ್ತಿದ್ದಾರೆ. ಇದು ಕುರ್ಚಿಗಾಗಿ ಹೊಡೆದಾಡುತ್ತಿರುವ ಶಾಸಕರಿಗೆ ಗೊತ್ತಿದೆಯೋ ಇಲ್ಲವೋ? ಇಂಥ ಸಮಯದಲ್ಲಿ ಬಿಜೆಪಿ ಹೈಕಮಾಂಡ್ ಏನು ಮಾಡಬೇಕು?
ಅವರಿವರಿಂದ ಸಂದೇಶ ರವಾನಿಸುವ ಬದಲು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ರಾಜ್ಯದ ನಾಯಕರಿಗೆ, ಒಂದು ಬಾಯಿ ಮುಚ್ಚಿಕೊಂಡು ಸುಮ್ಮನಿರಿ ಇಲ್ಲದಿದ್ದರೆ ಚುನಾವಣೆಗೆ ಸಿದ್ಧರಾಗಿ ಎಂದು ಸ್ಪಷ್ಟ ಸಂದೇಶ ರವಾನಿಸಲಿ. ಮುಂದೆ ಏನಾದರಾಗಲಿ ಎಂಬ ನಿರ್ಣಯ ತೆಗೆದುಕೊಂಡು ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ಹಿಂಡುಹಿಂಡು ಶಾಸಕರನ್ನು ಪಕ್ಷದಿಂದ ಹೊರದಬ್ಬಲಿ. ಇಲ್ಲದಿದ್ದರೆ, ಹಾಳಾಗಿ ಹೋಗಲಿ ಎಂದು ಸದಾನಂದ ಗೌಡರನ್ನು ಕೆಳಗಿಳಿಸಿ ಬೇರೆಯವರನ್ನು ತರಬೇಕು. ಕನಿಷ್ಠಪಕ್ಷ ಇಷ್ಟಾದರೂ ಮಾಡಲು ಬಿಜೆಪಿ ಹೈಕಮಾಂಡ್ ಸಿದ್ಧವಿದೆಯಾ? ಇಲ್ಲದಿದ್ದರೆ ಬಿಜೆಪಿ ಹೈಕಮಾಂಡಿಗೆ ಯಾವ ಬಿರುದು ನೀಡಬೇಕು?












Click it and Unblock the Notifications