ಬಿಜೆಪಿ ವರಿಷ್ಠರ ಅಭಯ; ಸಿಎಂ ದೆಹಲಿ ಭೇಟಿ ರದ್ದು
ವಿಶೇಷ ವಿಮಾನದಲ್ಲಿ ಸದಾನಂದರು ದೆಹಲಿಗೆ ತುರ್ತಾಗಿ ತೆರಳಬೇಕಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ದೆಹಲಿ ಭೇಟಿ ರದ್ದಾಗಿದೆ. ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದಿನ ಮಟ್ಟಿಗೆ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಹೇಳುವುದಾದರೆ 'ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ' ಎಂಬಂತಾಗಿದೆ.
'ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವುದಿಲ್ಲ. ಯಾವುದಕ್ಕೂ ನೀವು ತಲೆಕೆಡಿಸಿಕೊಳ್ಳದೆ ರಾಜ್ಯಭಾರ ಮುಂದುವರಿಸಿ' ಎಂದು ಪಕ್ಷದ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿರುವುದರಿಂದ ಸದಾನಂದ ಗೌಡರು ತಮ್ಮ ದೆಹಲಿ ಭೇಟಿಯನ್ನು ರದ್ದುಪಡಿಸಿದ್ದಾರೆ ಎಂದು ತಿಳಿದುಬಂದಿದೆ.
'ಇದೇ 30ರಂದು ಪಕ್ಷದ ವರಿಷ್ಠರು ಬೆಂಗಳೂರಿನಲ್ಲಿ ರಾಜ್ಯ ನಾಯಕರ ಸಭೆ ನಡೆಸಲಿದ್ದಾರೆ. ಆ ವೇಳೆ ಬಿಕ್ಕಟ್ಟಿಗೆ ಪರಿಹಾರ ದೊರೆಯಲಿದೆ' ಎಂದು ಯಡಿಯೂರಪ್ಪ ಬಣದ ಬಿಪಿ ಹರೀಶ್ ಅವರು ಇದೀಗ ತಾನೆ ತಿಳಿಸಿದ್ದಾರೆ. ಇದರಿಂದಾಗಿ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯ ಉಸ್ತುವಾರಿ ವಹಿಸಿರುವ ಪ್ರಧಾನ್ ಅವರು ನಾಳೆ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವೂ ರದ್ದಾಗಿದೆ.
ಈ ಮಧ್ಯೆ, ಜಾರಕಿಹೊಳಿ ಅವರು ಸದಾನಂದ ಗೌಡ ಅವರ ಪರ ಲಾಬಿ ಮಾಡಲು ಗುರುವಾರ ಮಧ್ಯಾಹ್ನ ಬೆಳಗಾವಿಯಿಂದ ದೆಹಲಿಗೆ ಹೊರಟಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪಕ್ಷದ ವರಿಷ್ಠರಿಂದ 'ನಾಯಕತ್ವ ಬದಲಾವಣೆ ಮಾಡುವುದಿಲ್ಲ' ಎಂಬ ಆಶ್ವಾಸನೆ ಸಿಗುತ್ತಿದ್ದಂತೆ ದೆಹಲಿ ಪ್ರವಾಸವನ್ನು ರದ್ದುಮಾಡಿದ್ದಾರೆ.
ಅದಕ್ಕೂ ಮುನ್ನ, ಪತ್ರಕರ್ತರೊಂದಿಗೆ ಏರ್ಪಡಿಸಲಾಗಿದ್ದ ಪೂರ್ವನಿಗದಿತ ಭೋಜನ ಕೂಟವನ್ನು ದಿಢೀರನೆ ರದ್ದುಪಡಿಸಿದ ಸಿಎಂ ಸದಾನಂದ ಗೌಡರು, ಮಧ್ಯಾಹ್ನ ವಿಶೇಷ ವಿಮಾನದಲ್ಲಿ ದೆಹಲಿಗೆ ತುರ್ತಾಗಿ ತೆರಳುವ ಸಾಧ್ಯತೆಯಿತ್ತು. ಕೆಎಸ್ ಈಶ್ವರಪ್ಪ, ರಾಮದಾಸ್, ಕಾಗೇರಿ, ಸುರೇಶ್ ಕುಮಾರ್ ಸೇರಿದಂತೆ ಒಟ್ಟು 11 ಸಚಿವರು ಸದಾನಂದರಿಗೆ ಸಾಥ್ ನೀಡಲಿದ್ದಾರೆ ಎನ್ನಲಾಗಿತ್ತು.
ರಾಜಕೀಯ ಗೋಷ್ಠಿ: ಅತ್ತ ಸಿಎಂ ಸದಾನಂದರು ಸುದ್ದಿಗೋಷ್ಠಿ ನಡೆಸುತ್ತಿದ್ದರೆ ಇತ್ತ ಸದಾ ಸರಕಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮಾಜಿ ಸಿಎಂ ಯಡಿಯೂರಪ್ಪ ಅವರ ಬೆಂಬಲಿಗರು ಜಗದೀಶ್ ಶೆಟ್ಟರ್ ಅವರ ನಿವಾಸದಲ್ಲಿ ರಾಜಕೀಯ ಸಭೆ ನಡೆಸಿದರು.
ಎಂದಿನಂತೆ ರೇಣುಕಾಚಾರ್ಯ, ಉದಾಸಿ, ನಿರಾಣಿ, ಬಿಪಿ ಹರೀಶ್, ಉಮೇಶ್ ಕತ್ತಿ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಯಡಿಯೂರಪ್ಪ ಅವರು ತಮ್ಮ ಆಪ್ತ ಲೆಹರ್ ಸಿಂಗ್ ಅವರ ಜತೆಗೂಡಿ ನಿಗೂಢ ಸ್ಥಳದಲ್ಲಿ ಮಾತುಕತೆಯಲ್ಲಿ ನಡೆಸಿದರು.
ಆ ನಂತರದ ಬೆಳವಣಿಗೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು 'ತಮ್ಮ ಆರೋಗ್ಯ ಸರಿಯಿಲ್ಲ. ಇನ್ನು ಒಂದು ತಿಂಗಳ ಕಾಲ ಯಾರೊಂದಿಗೂ ಮಾತನಾಡುವುದಿಲ್ಲ. ಏನಾದರೂ ಹೇಳುವುದಿದ್ದರೆ ತಾನೇ ಮಾಹಿತಿ ನೀಡುತ್ತೇನೆ' ಎಂದು ಮೌನಕ್ಕೆ ಶರಣಾದರು.
ಈ ಮಧ್ಯೆ ಬಿಬಿಎಂಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಆರ್ ಅಶೋಕ್ ಅವರು 'ತಾವು ಯಾವುದೇ ಬಣದೊಂದಿಗೆ ಗುರುತಿಸಿಕೊಂಡಿಲ್ಲ. ಸಿಎಂ ಬದಲಾವಣೆ ವರಿಷ್ಠರಿಗೆ ಬಿಟ್ಟ ವಿಚಾರ. ನಾಳೆ ಶುಕ್ರವಾರ ಧರ್ಮೇದ್ರ ಪ್ರಧಾನ್ ಅವರು ಬೆಂಗಳೂರಿಗೆ ಬರಲಿದ್ದಾರೆ' ಎಂದು ತಿಳಿಸಿದರು.
ಸಿಎಂ ಸುದ್ದಿಗೋಷ್ಠಿ: ಸಿಎಂ ಸದಾನಂದ ಗೌಡರು ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ 12.30ರಲ್ಲಿ ನಡೆಸಿದ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಹೀಗಿದೆ: ರಾಜ್ಯದಲ್ಲಿ ಬಿಜೆಪಿ ಸರಕಾರವು ನಾಲ್ಕು ವರ್ಷಗಳ ಆಡಳಿತ ಪೂರೈಸಿರುವುದಕ್ಕೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ತೀವ್ರ ಹರ್ಷ ವ್ಯಕ್ತಡಿಸಿದ್ದಾರೆ. ಗಮನಾರ್ಹವೆಂದರೆ ತಮ್ಮ ಪಕ್ಷ ಮತ್ತು ಪಕ್ಷದಲ್ಲಿನ ರಾಜಕೀಯದ ಬಗ್ಗೆ ಏನನ್ನೂ ಹೇಳಿಲ್ಲ. ಹೆಚ್ಚಾಗಿ ಸರಕಾರದ ಸಾಧನೆಗಳ ಬಗ್ಗೆ ಸದಾನಂದ ಗೌಡರು ಹೇಳಿದ್ದಾರೆ.
ವಿವರ: ರಾಜ್ಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕೇಂದ್ರ ಯೋಜನಾ ಆಯೋಗ ತೃಪ್ತ ವ್ಯಕ್ತಪಡಿಸಿದೆ ಎಂದು ಗಮನ ಸೆಳೆದ ಸದಾನಂದರು, ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮೂಲಭೂತ ಕ್ಷೇತ್ರದಲ್ಲಿ ಬಿಜೆಪಿ ಸರಕಾರದ ಸಾಧನೆ ವಿಶೇಷವಾಗಿದೆ. ರಾಜ್ಯ ದೇಶದಲ್ಲೇ 16ನೇ ಸ್ಥಾನದಲ್ಲಿದೆ. ರಾಜ್ಯದ ಸಾಧನೆಗೆ ವಿಶ್ವ ಬ್ಯಾಂಕ್ ಸಹ ಪ್ರಶಂಸೆ ವ್ಯಕ್ತಪಡಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯಸವ್ಥೆ ಉತ್ತಮವಾಗಿದೆ. ನಕ್ಸಲ್ ಸಮಸ್ಯೆ ನಿಯಂತ್ರಣದಲ್ಲಿದೆ ಎಂದು ತಿಳಿಸಿದ ಸದಾನಂದರು 'ಸವ್ಯಸ್ಪರ್ಶಿ ಸಾಧನೆ ಪುಸ್ತಕ' ಬಿಡುಗಡೆ ಮಾಡುತ್ತಾ ಅದರಲ್ಲಿ ಸರಕಾರದ ಸಾಧನೆಯ ವಿವರ ಅಡಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಚಿವ ಸುರೇಶ್ ಕುಮಾರ್ ಅವರು ಉಪಸ್ಥಿತರಿದ್ದರು.