ಭಾವಿ ಪತ್ನಿ ಮೇಲೆ ಸಂಶಯ, ಕೈಕೊಟ್ಟ ಟೆಕ್ಕಿ ಸೆರೆ

ಕಿನ್ನಿಗೋಳಿಯ ಸಾಫ್ಟವೇರ್ ಇಂಜಿನಿಯರ್ ದೀಪಕ್ ಹಾಗೂ ಜಪ್ಪಿನಮೊಗರಿನ ಉಪನ್ಯಾಸಕಿಯೊಬ್ಬರೊಂದಿಗೆ ಮದುವೆ ನಿಶ್ಚಯವಾಗಿತ್ತು. ಹಿರಿಯರ ಒಪ್ಪಿಗೆಯೊಂದಿಗೆ ಎ. 8ರಂದು ನಿಶ್ಚಿತಾರ್ಥ ನಡೆದು ಜೂ. 24ರ ರವಿವಾರ ಮದುವೆ ನಡೆಯಬೇಕಿತ್ತು.
ಶುಕ್ರವಾರ ಮೆಹಂದಿ ಶಾಸ್ತ್ರವೂ ನಡೆದಿತ್ತು. ಆತ ಆಕೆಗೆ ತಾಳಿಯನ್ನೂ ನೀಡಿದ್ದ . ಶನಿವಾರ ಬೆಳಗ್ಗೆ ಬಂದವನೇ ಇದ್ದಕ್ಕಿದ್ದಂತೆ ನನಗೆ ಈ ಮದುವೆ ಇಷ್ಟವಿಲ್ಲ ಎಂದಾಗ ಹೆಣ್ಣಿನ ಮನೆ ಕಡೆಯವರ ಪಿತ್ತ ನೆತ್ತಿಗೇರಿದೆ. ಸಿಟ್ಟಿನಲ್ಲೇ ಪಾಂಡೇಶ್ವರ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ.
ಪೊಲೀಸರ ಸಮ್ಮುಖದಲ್ಲಿ ಮಾತುಕತೆ ನಡೆದಾಗ ಅನೇಕ ವಿಷಯಗಳು ಹೊರಬಂದಿದೆ. ಆದರೆ, ದೀಪಕ್ ಮಾತ್ರ ಮದುವೆಗೆ ಒಪ್ಪಲಿಲ್ಲ. ಬದಲಿಗೆ ಜೂ.30 ರವರೆಗೂ ಕಾಲಾವಕಾಶ ನೀಡಿ ನೋಡೋಣ ಎಂದಿದ್ದಾನೆ. ವಧುವಿನ ಮನೆ ಕಡೆಯವರು ಈಗ ನ್ಯಾಯಾಂಗ ಮದುವೆ ವಿಷಯ ಕೈಬಿಟ್ಟು ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ. ವರನ ಪರವಾಗಿ ಸಂಘ ಪರಿವಾರದ ಮುಖಂಡರು ನಿಂತತೆ, ವಧುವಿನ ಪರ ಮಹಿಳಾ ಸಂಘಟನೆ ಕಾರ್ಯಕರ್ತೆಯರು ನಿಂತಿದ್ದು ವಿಶೇಷ.
ಮದುವೆ ಮುರಿಯಲು ಕಾರಣವಾಗಿದ್ದು ಮೇಘರಾಜ್ ಮಾಡಿದ ಒಂದು ಕರೆ. ವಧುವಿನ ನೆರೆಮನೆಯಲ್ಲಿರುವ ಮೇಘರಾಜ್ ಬಹುದಿನಗಳಿಂದ ಲೆಕ್ಚರರ್ ರನ್ನು ಪ್ರೀತಿಸುತ್ತಿದ್ದ. ಕೊನೆಗೂ ಧೈರ್ಯ ಮಾಡಿ ಆಕೆ ಮನೆಯವರ ಮುಂದೆ ನಿಂತು 'ನಿಮ್ಮ ಮಗಳನ್ನು ಮದುವೆಯಾಗುತ್ತೇನೆ' ಒಂದು ದಿನ ಕೇಳಿಬಿಟ್ಟ. ಆದರೆ, ಲೆಕ್ಚರರ್ ಮನೆಯವರು ಲ್ಯಾಂಡ್ ಡೆವಲಪರ್ ಮೇಘರಾಜ್ ಮಾತಿಗೆ ಬೆಲೆ ನೀಡಲಿಲ್ಲ. ಬದಲಿಗೆ ಸಾಫ್ಟ್ ವೇರ್ ದೀಪಕ್ ನನ್ನು ಆಯ್ಕೆ ಮಾಡಿದರು. ಮೇಘರಾಜ್ ಒಳ್ಳೆ ಉದ್ಯಮಿಯಾಗಿದ್ದರೂ ಜಾತಿ ನೆಪವೊಡ್ಡಿ ಆತನನ್ನು ತಿರಸ್ಕರಿಸಲಾಗಿತ್ತು. ಈ ಬಗ್ಗೆ ಎಲ್ಲವನ್ನು ದೀಪಕ್ ಗೆ ಹೇಳಲಾಗಿತ್ತು. ಲೆಕ್ಚರರ್ ತನ್ನ ಭಾವಿ ಪತಿಗೆ ತನ್ನ ಫೇಸ್ ಬುಕ್, ಟ್ವಿಟರ್ ಖಾತೆ ವಿವರಗಳನ್ನು ನೀಡಿದ್ದಳು. ದೀಪಕ್ ಕೂಡಾ ನೋ ಪ್ರಾಬ್ಲಂ ಎಂದಿದ್ದ
ಆದರೆ, ಇತ್ತೀಚೆಗೆ ಮೇಘರಾಜ್ ಲೆಕ್ಚರರ್ ಗೆ ಕಾಲ್ ಮಾಡುತ್ತಿದ್ದ. ಇದನ್ನು ಗಮನಿಸಿದ ದೀಪಕ್ ಅದೇ ಕಾರಣ ಮಾಡಿಕೊಂಡು ಮದುವೆಗೆ ಒಲ್ಲೆ ಎಂದಿದ್ದಾನೆ. ಮದುವೆ ಕಾರ್ಡ್ ಹಂಚಿ, ಎಲ್ಲ ಏರ್ಪಾಟು ಆದ ಮೇಲೆ ಕ್ಷುಲ್ಲಕ ಕಾರಣ ನೀಡಿ ಮದುವೆ ಬೇಡ ಎಂದ ಟೆಕ್ಕಿ ದೀಪಕ್ ಮೇಲೆ ಲೆಕ್ಚರರ್ ಫ್ಯಾಮಿಲಿ ಸಿಟ್ಟಾಗಿದೆ. ಲೆಕ್ಚರರ್ ಮದುವೆಯಾಗು ಎಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ದೀಪಕ್ ಬೆದರಿಕೆ ಹಾಕಿರುವುದು ಪೊಲೀಸರನ್ನು ಪೇಚಿಗೆ ಸಿಲುಕಿಸಿದೆ. ಸದ್ಯಕ್ಕಂತೂ ಮದುವೆ ಬಂದ ನೆಂಟರಿಷ್ಟರು ಬಂದ ದಾರಿಗೆ ಸುಂಕವಿಲ್ಲದ್ದಂತೆ ತೆರಳಿದ್ದಾರೆ.












Click it and Unblock the Notifications