ಸುರೇಶ್ ಕುಮಾರ್ ಬೆಂಬಲಿಗರಿಂದ ರಾಜೀನಾಮೆ ಡ್ರಾಮಾ
ಭಾನುವಾರ ಸುದ್ದಿಗಾರರೊಂದೊಗೆ ಮಾತನಾಡಿದ ಸುರೇಶ್ ಕುಮಾರ್ ಅವರು 'ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಲಿ, ಸತ್ಯಾಸತ್ಯತೆ ಹೊರಬೀಳಲಿ' ನಂತರ ರಾಜೀನಾಮೆ ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸುವೆ ಎಂದಿದ್ದಾರೆ. ಈ ನಡುವೆ ಸುರೇಶ್ ಕುಮಾರ್ ಅವರ ಬೆಂಬಲಿಗ ಬಿಬಿಎಂಪಿ ಸದಸ್ಯರು ರಾಜೀನಾಮೆ ನೀಡಿದ ನಾಟಕ ಕೂಡಾ ಸಂಭವಿಸಿದೆ.
ಸುರೇಶ್ ಕುಮಾರ್ ಅವರು ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜಾಜಿನಗರ ಕ್ಷೇತ್ರದ ಆರು ಮಂದಿ ಕೌನ್ಸಿಲರ್ ಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಯಕರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಜಾಜಿನಗರದ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ ಗಳಲ್ಲಿ ಸುರೇಶ್ ಕುಮಾರ್ ಆರು ಸ್ಥಾನಗಳನ್ನು ಬಿಜೆಪಿ ಪಕ್ಷಕ್ಕೆ ತಂದುಕೊಡುವಲ್ಲಿ 2010ರ ಚುನಾವಣೆಯಲ್ಲಿ ಯಶಸ್ವಿಯಾಗಿದ್ದರು. 2010ರ ಏಪ್ರಿಲ್ ನಿಂದ ಇಲ್ಲಿ ತನಕ ಎಲ್ಲ ಆರು ಕೌನ್ಸಿಲರ್ ಗಳು ಸುರೇಶ್ ಕುಮಾರ್ ಅವರ ಬೆಂಬಲಿಗರಾಗಿ ಮುಂದುವರೆದಿದ್ದರು.
ಆರು ಮಂದಿ ಕೌನ್ಸಿಲರ್ ಗಳಲ್ಲಿ ಬಸವೇಶ್ವರನಗರದ ಎಸ್.ಎಚ್. ಪದ್ಮರಾಜ್, ಕಾಮಾಕ್ಷಿಪಾಳ್ಯದ ಕೆ.ರಂಗಣ್ಣ, ಪ್ರಕಾಶನಗರದ ರವೀಂದ್ರನ್, ರಾಮ ಮಂದಿರದ ಜಯರತ್ನ, ಶಿವನಗರದ ಜಿ.ಮಂಜುನಾಥ್ ಮತ್ತು ರಾಜಾಜಿನಗರದ ಎಚ್.ಆರ್. ಕೃಷ್ಣಪ್ಪ ಇವರುಗಳು ಶನಿವಾರ ಬೆಳಿಗ್ಗೆಯಿಂದಲೇ ಸುರೇಶ್ ಕುಮಾರ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿ ತಮ್ಮ ನಿಷ್ಠೆ ಪ್ರದರ್ಶಿಸಿದ್ದಾರೆ. ಸುರೇಶ್ ಕುಮಾರ್ ಅವರು ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದಾರೆ. ಶನಿವಾರ ಸಂಜೆ ವೇಳೆಗೆ ಆರು ಜನ ಸದಸ್ಯರು ತಮ್ಮ ಬಿಬಿಎಂಪಿ ಕೌನ್ಸಿಲರ್ ಸ್ಥಾನಗಳಿಗೆ ರಾಜೀನಾಮೆ ಬರೆದು ಬಿಜೆಪಿ ನಗರ ಅಧ್ಯಕ್ಷ ಸುಬ್ಬನರಸಿಂಹ ಅವರಿಗೆ ತಲುಪಿಸಿದ್ದಾರೆ.
ಬಿಜೆಪಿ ಬಿಬಿಎಂಪಿ ಸದಸ್ಯರ ರಾಜೀನಾಮೆ ಪತ್ರ ಪಡೆದ ಸುಬ್ಬನರಸಿಂಹ ಅವರು ಏನು ಮಾಡಬೇಕು ಎಂದು ತೋಚದೆ ಸುಮ್ಮನಾಗಿದ್ದಾರೆ. ಕೌನ್ಸಿಲರ್ ಗಳು ತಮ್ಮ ರಾಜೀನಾಮೆ ಪತ್ರವನ್ನು ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿಗಳಿಗಾಗಲೀ, ಅಥವಾ ಪೂಜ್ಯ ಮಹಾಪೌರ ವೆಂಕಟೇಶ್ ಮೂರ್ತಿ ಅವರಿಗಾಗಲಿ ತಲುಪಿಸಿಲ್ಲ ಎಂಬುದು ಗಮನಾರ್ಹ. ಆದರೆ, ಆರು ಮಂದಿ ಪೈಕಿ ಶಿವನಗರದ ಸದಸ್ಯ ಜಿ.ಮಂಜುನಾಥ್ ಅವರು ಕೊನೆ ಕ್ಷಣದಲ್ಲಿ ರಾಜೀನಾಮೆ ಪತ್ರ ನೀಡುವ ನಾಟಕದಿಂದ ಹೊರಗುಳಿದಿದ್ದಾರೆ ಎಂದು ತಿಳಿದು ಬಂದಿದೆ.
ರಾಜೀನಾಮೆ ಪ್ರಸಂಗವಾದ ಮೇಲೆ ಈ ಆರು ಮಂದಿ ಬಿಜೆಪಿ ಬಿಬಿಎಂಪಿ ಸದಸ್ಯರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರನ್ನು ಭೇಟಿ ಮಾಡಿದ್ದಾರೆ. ಸುರೇಶ್ ಕುಮಾರ್ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿದರೆ ನಾವು, ಕೂಡಾ ರಾಜೀನಾಮೆ ನೀಡಿ ಅವರ ಹಾದಿಯಲ್ಲೇ ಸಾಗುತ್ತೇವೆ ಎಂದು ಆಗ್ರಹಪೂರ್ವಕ ಮನವಿ ಸಲ್ಲಿಸಿದ್ದಾರೆ.