ನಿತೀಶ್, ಬಿಎಸ್ವೈ, ಕಾಂಗ್ರೆಸ್ ಈಗ ಆಪತ್ಭಾಂಧವರು

ಹಾಗೆ ನೋಡಿದರೆ ರಾಷ್ಟ್ರಪತಿ ಚುನಾವಣೆ ಕಣದಲ್ಲಿ ಸ್ವಲ್ಪ ಕಾಲ ಬಿರುಗಾಳಿ ಎಬ್ಬಿಸಿದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ರಾಜಕೀಯ ನಾಯಕರ ಮುಖವಾಡವನ್ನು ಬಯಲುಮಾಡಿ ಹೋಗಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಕೇಂದ್ರ ವಿತ್ತ ಸಚಿವ, ಹಿರಿಯ ಕಾಂಗ್ರೆಸ್ ನಾಯಕ, ಬೆಂಗಾಲಿ ಬಾಬು ಪ್ರಣಬ್ ಮುಖರ್ಜಿ ಅವರು ಆಯ್ಕೆಗೆ ತೊಡರುಗಾಲು ಹಾಕುವ ಭರಾಟೆಯಲ್ಲಿ ಮತ್ತೆ ಹೊಸ ರಾಜಕೀಯ ಸಮೀಕರಣಗಳು ಉದ್ಭವವಾಗುತ್ತಿವೆ.
ಅತ್ತ ಬಿಹಾರಿ ಬಾಬು ನಿತೀಶ್ ಕುಮಾರ್ ಅವರು ಪ್ರಣಬ್ ಮುಖರ್ಜಿಗೆ ಜೈ ಎನ್ನುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ಅವರಿಗೆ ತುಂಬುತೋಳಿನ ಸ್ವಾಗತ ನೀಡಲು ತವಕಿಸುತ್ತಿದೆ. ಅದೇ ರೀತಿ ಕನ್ನಡದ ಕಲಿ ಮಾಜಿ ಸಿಎಂ ಯಡಿಯೂರಪ್ಪನವರು ಉರುಳಿಸಿರುವ ದಾಳದತ್ತ ಕಾಂಗ್ರೆಸ್ ತದೇಕಚಿತ್ತದಿಂದ ನೋಡುತ್ತಿದೆ.
ಸುಪ್ರೀಂ ಆದೇಶದ ಹೊರತಾಗಿಯೂ ಸಿಬಿಐ ಉರುಳಿನಿಂದ ಪಾರು ಮಾಡಬೇಕಾದರೆ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಯಡಿಯೂರಪ್ಪನವರು ಕಾಂಗ್ರೆಸ್ಸಿನತ್ತ ಮುಖ ಉರುಳಿಸಿರುವ ದಾಳ ಬಿಜೆಪಿ ವರಿಷ್ಠರಿಗೆ ಈಟಿಯಂತೆ ನಾಟಿದೆ.
ಕಾಂಗ್ರೆಸ್ಸಿಗೂ ಅದೇ ಬೇಕಾಗಿರುವುದು. ಅತ್ತ ಇದೇ ರಾಷ್ಟ್ರಪತಿ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲೆತ್ನಿಸಿದ ಬೆಂಗಾಲಿ ದೀದಿ UPAಗೆ ಗುಡ್ ಬೈ ಹೇಳುವ ಬೆದರಿಕೆಯೊಡ್ಡಿರುವಾಗ ಕಾಂಗ್ರೆಸ್ ಗೆ ಆಪತ್ಭಾಂಧವರು ಬೇಕಾಗಿದ್ದಾರೆ. ಹಾಗಾಗಿ, ಮೋದಿ-ನಿತೀಶ್ ಗುದ್ದಾಟದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಅದು ಹೊಂಚುಹಾಕುತ್ತಿದೆ. ಏನಿಲ್ಲ. ನಿತೀಶ್ ಕುಮಾರ್ ಅತ್ತ NDAಗೆ ಗುಡ್ ಬೈ ಹೇಳಿದರೆ ಸಾಕು. ಅವರನ್ನು ನಮ್ಮತ್ತ ಸೆಳೆದುಕೊಂಡರೆ ಅದಕಿಂತ ಸೌಭಾಗ್ಯ ಇನ್ನೇನು ಎಂಬುದು ಕಾಂಗ್ರೆಸ್ ಎಣಿಕೆಯಾಗಿದೆ.
ಇನ್ನು ಅದೇ ರೀತಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯಾಬಲ ಹೊಂದಿದ್ದರೂ ಪಕ್ಷ ವರಿಷ್ಠರ 'ರಾಜಕೀಯ'ದಿಂದ ಬೇಸತ್ತಿರುವ ಸನ್ಮಾನ್ಯ ಯಡಿಯೂರಪ್ಪನವರನ್ನು ಸಿಬಿಐ ಆಪತ್ತಿನಿಂದ ಬಚಾವು ಮಾಡಿದರೆ ಸದ್ಯದ ಪರಿಸ್ಥಿತಿಯಲ್ಲಿ ನಿತೀಶ್ ರಂತೆ ಯಡಿಯೂರಪ್ಪ ಸಹ ನಮಗೆ ಆಪತ್ಭಾಂಧವರಾಗಬಲ್ಲರು. ಸದ್ಯದ ರಾಷ್ಟ್ರಪತಿ ಚುನಾವಣೆಯಷ್ಟೇ ಅಲ್ಲ. ಕರ್ನಾಟಕದಲ್ಲಿ ಪಾತಾಳ ಕಚ್ಚಿರುವ ಕಾಂಗ್ರೆಸ್ಸಿಗೆ ಜೀವಸಂಜೀವಿನಿಯಾಗಬಲ್ಲರು ಎಂಬುದು ಕಾಂಗ್ರೆಸ್ಸಿನ ಭವಿಷ್ಯದ ಲೆಕ್ಕಾಚಾರ.
ಈ ರಾಜಕೀಯ ಸಮೀಕರಣವನ್ನು ಪೂರ್ಣಗೊಳಿಸುವ ಸಲುವಾಗಿಯೇ ಮೊನ್ನೆ ಯಡಿಯೂರಪ್ಪನವರು ಸುಮ್ನೆ ಹಾಗೇ ಪ್ರಣಬ್ ದಾ ಗೆ ಫೋನ್ ಹಚ್ಚಿ, ಕಾಂಗ್ರೆಸ್ ಕಿವಿಕಚ್ಚಿದ್ದು. ಅದೇ ಉಮೇದಿಯೊಂದಿಗೆ ಸದಾನಂದ ಗೌಡರನ್ನು ಗೋಡೆಗೆ ಹಾಕಿಕೊಂಡು ಹೊಸಹುರುಪಿನಿಂದ ಗದುಮಲು ಶುರು ಹಚ್ಚಿಕೊಂಡಿರುವುದು. ಆದರೆ ಈಗ ಎದ್ದಿರುವ ಬಿರುಗಾಳಿ ಸಹಜವಾಗಿಯೇ ತಣ್ಣಗಾಗಲು ಇನ್ನೊಂದೆರಡು ದಿನ ಸಾಕು. ಆಮೇಲೆ ಈ ನಾಯಕರ ನಿಜವಾದ ಬಣ್ಣ ತನ್ನಷ್ಟಕ್ಕೆ ತಾನೇ ಬಯಲಿಗೆ ಬೀಳುತ್ತದೆ. ಜನ ಅದಕ್ಕೇ ಕಾಯುತ್ತಿದ್ದಾರೆ.












Click it and Unblock the Notifications