ಹುತಾತ್ಮ ಯೋಧನಿಗಾಗಿ ಕಂಬನಿಮಿಡಿದ ಕವಡಿಮಟ್ಟಿ

ಯಾದಗಿರಿ ಜಿಲ್ಲೆಯಲ್ಲಿ ದೇಶಕ್ಕಾಗಿ ಹೋರಾಡುವ ಕೆಚ್ಚು ಹೆಚ್ಚುತ್ತಿದೆ. ದೂರದಲ್ಲಿರುವ ದೇಶದ ಗಡಿ ಕಾಯುವಂತಹ ಮಹತ್ ಮತ್ತು ಕಠಿಣ ಕೆಲಸಕ್ಕೆ ಜಿಲ್ಲೆಯ ಯುವಕರು ಮುಂದಾಗುತ್ತಿದ್ದು ಸಂತಸ ತರುವ ವಿಚಾರವೇ ಆದರೆ ಶತೃಗಳನ್ನು ಸದೆ ಬಡಿಯುತ್ತ ತಮ್ಮನ್ನೆ ತಾವು ಅರ್ಪಿಸಿಕೊಳ್ಳುವುದು ಅವರ ಮನೆಯರಿಗೆ ಮರೆಯಲಾಗದ ನೆನಪಾಗಿ ಉಳಿಯುತ್ತಿದೆ.
ಕಳೆದ ತಿಂಗಳು ಶಹಾಪುರದ ಸಗರ ಗ್ರಾಮದ ಯೋಧನೊಬ್ಬ ನಕ್ಸಲ್ ಗುಂಡಿಗೆ ಬಲಿಯಾಗಿದ್ದು ಮರೆಯುವ ಮುನ್ನವೇ ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದ ಯುವಕ, ಗಡಿ ಭದ್ರತಾ ಪಡೆಯ ಯೋಧ ಶರಣಬಸವ ಕೆಂಗೂರಿ (23) ಜೂ. 17ರಂದು ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಉಗ್ರಗಾಮಿಗಳೊಂದಿಗೆ ಹೋರಾಡುವಾಗ ಗುಂಡಿಗೆ ಬಲಿಯಾಗಿದ್ದಾನೆ.
ಅಂತಿಮ ಸಂಸ್ಕಾರ : ಕುಪ್ವಾರದಿಂದ ದೆಹಲಿ ಮೂಲಕ ಹೈದರಾಬಾದ್ ಮಾರ್ಗವಾಗಿ ಬುಧವಾರ ಬೆಳಗಿನ ಜಾವ ಬಂದ ವೀರ ಯೋಧನ ಪಾರ್ಥೀವ ಶರೀರ, ಸುರಪುರ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಾಗಿ, ಸ್ವಗ್ರಾಮ ಕವಡಿಮಟ್ಟಿಗೆ ತಲುಪಿದಾಗ ನೆರೆದಿದ್ದ ಸಾವಿರಾರು ಸಂಖ್ಯೆಯ ಜನರಲ್ಲಿ ದುಃಖ ಕಪ್ಪು ಕಾರ್ಮೋಡದಂತಾಗಿತ್ತು. ತಮ್ಮ ಮಗನನ್ನು ಕಳೆದುಕೊಂಡ ಆತನ ಮನೆಯುವರ ದುಃಖವನ್ನು ಹೇಳಲು ಪದಗಳೇ ಸಾಲದಂತಿತ್ತು. ಸ್ನೇಹಿತನನ್ನು ಕಳೆದುಕೊಂಡ ಆತನ ಗೆಳೆಯರು ಮೌನವಾಗಿ ರೋದಿಸುತ್ತಿದ್ದರು. ವೀರಯೋಧನಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದ ಪೋಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ವಂದನೆ ಸಮರ್ಪಿಸಿದರು.
ದೇಶದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದ ಶರಣಬಸವ ಹಲವಾರು ಕನಸುಗಳನ್ನು ಹೊಂದಿದ್ದ. ತಾನು ದೇಶಕ್ಕಾಗಿ ಇನ್ನಷ್ಟು ಸೇವೆ ಸಲ್ಲಿಸಬೇಕು ಎಂದು ಹೇಳುತ್ತಿದ್ದ. ಸಮಯ ಬಂದರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲೂ ಸಿದ್ಧ, ಅದು ಹೆಮ್ಮೆಯ ಸಂಗತಿ ಎಂದು ಸ್ನೇಹಿತರ ಮುಂದೆ ಆಗಾಗ ಹೇಳುತ್ತಿದ್ದನಂತೆ. ಆದರೆ, ಆ ತ್ಯಾಗದ ಸಮಯ ಇಷ್ಟು ಬೇಗನೆ ಬರುತ್ತದೆಂದು ಸ್ನೇಹಿತರು ನಿರೀಕ್ಷಿಸಿರಲಿಲ್ಲ.
ಪ್ರತಿಮೆ ಸ್ಥಾಪಿಸಲಿ : ತನ್ನ ಊರು ಕವಡಿಮಟ್ಟಿ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಶರಣ ಬಸವ ತಾನೊಂದು ವೇಳೆ ಶತೃಗಳೊಂದಿಗೆ ಹೋರಾಡುವಾಗ ವೀರ ಮರಣವನ್ನಪ್ಪಿದರೆ ಗ್ರಾಮದಲ್ಲಿ ತನ್ನದೊಂದು ಪ್ರತಿಮೆ ಸ್ಥಾಪಿಸುವಂತೆ ಕೇಳಿಕೊಂಡಿದ್ದನಂತೆ ಆತನ ಮಾತುಗಳನ್ನು ನೆನೆದು ಆತನ ಸ್ನೇಹಿತರು ಕಣ್ಣೀರಾಗುತ್ತಾರೆ. ವೀರ ಯೋಧನ ತಂದೆ ಹಣಮಂತ, ತಾಯಿ ಮಲ್ಲಮ್ಮ, ಸಹೋದರ ವಸಂತ್ ಅವರ ಬಾಯಿಯಿಂದ ಮಾತೇ ಹೊರಡುತ್ತಿಲ್ಲ.
ತಮ್ಮ ಸ್ನೇಹಿತ ಇಡೀ ದೇಶಕ್ಕೆ ಮಾದರಿಯಾಗಿರುವ ಬಗ್ಗೆ ಅವರಿಗೆಲ್ಲ ಹೆಮ್ಮೆ ತರುವ ವಿಚಾರವಾಗಿದ್ದರೂ ಕೂಡಾ ಬಡತನವನ್ನೆ ಹಾಸಿ ಹೊದ್ದು ಮಲಗಿರುವ ಆತನ ಕುಟುಂಬದ ಸದಸ್ಯರಿಗೆ ಆತನ ಸಾವು ಆರದ ಗಾಯವನ್ನುಂಟು ಮಾಡಿದೆ. ಜೀವನಕ್ಕಾಗಿ ಶರಣಬಸವನ ಕುಟುಂಬ ಆತನನ್ನೇ ನಂಬಿತ್ತು.
ಶರಣಬಸವನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕಾ ಸಚಿವ ರಾಜೂಗೌಡ ವೈಯಕ್ತಿಕವಾಗಿ 1 ಲಕ್ಷ ರು. ಪರಿಹಾರವನ್ನು ಘೋಷಿಸಿದರು. ಅಲ್ಲದೇ ಮುಖ್ಯಮಂತ್ರಿಗಳ ಜತೆ ಮಾತನಾಡಿ ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯಿಸುವುದಾಗಿ ಭರವಸೆ ನೀಡಿದರು. ಹಾಗೂ ಆತನ ಇಚ್ಛೆಯಂತೆ ಗ್ರಾಮದಲ್ಲಿ ಆತನ ಪ್ರತಿಮೆಯನ್ನೂ ಕೂಡಾ ಸ್ಥಾಪಿಸುವ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.












Click it and Unblock the Notifications