ಕಾರ್ಕಳ: ಪತ್ನಿಯ ಹತ್ಯೆ ಮಾಡಿ ಪತಿ ನೇಣಿಗೆ ಶರಣು
ಮಾಲಿನಿ ಶೆಟ್ಟಿ ಅವರು ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ಮತ್ತು ಆ ದಂಪತಿಗೆ ನಿತೇಶ್ (14) ಹಾಗೂ ನಿಶ್ಚಿತ್ (11) ಎಂಬಿಬ್ಬರು ಮಕ್ಕಳಿದ್ದರು. ವಿಚ್ಛೇದನದನಂತರ ಮಾಲಿನಿ ಶೆಟ್ಟಿ ಅವರು ಜಗನ್ನಾಥ ಪೂಜಾರಿಯೊಂದಿಗೆ ವಿವಾಹವಾಗಿದ್ದರು.
ಈ ಮಕ್ಕಳಿಬ್ಬರೂ ಬುಧವಾರ ಬೆಳಗ್ಗೆ ಶಾಲೆಗೆ ಹೊರಟ ನಂತರ ಈ ಹತ್ಯೆ ಮತ್ತು ಆತ್ಮಹತ್ಯೆ ನಡೆದಿದೆ. ಮನೆಯ ಸುತ್ತಮುತ್ತ ಬೇರೆ ಮನೆಯಿಲ್ಲದ್ದರಿಂದ ಪ್ರಕರಣ ತಕ್ಷಣಕ್ಕೆ ಗಮನಕ್ಕೆ ಬಂದಿಲ್ಲ. ಆದರೆ ಜಗನ್ನಾಥ ಪೂಜಾರಿಯ ಮನೆಯ ಮುಂದೆ ಕಟ್ಟಿಹಾಕಿದ್ದ ತನ್ನ ಕೋಳಿಯನ್ನು ಬಿಡಿಸಿಕೊಂಡು ಹೋಗಲು ಸ್ಥಳೀಯ ವ್ಯಕ್ತಿಯೊಬ್ಬರು ಸುಮಾರು 11.30ರಲ್ಲಿ ಮನೆಯೊಳಕ್ಕೆ ಬರಲು ಯತ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕೋಳಿ ಬಿಡಿಸಿಕೊಂಡು ಹೋಗಲು ಬಂದ ವ್ಯಕ್ತಿ ಜಗನ್ನಾಥ ಮತ್ತು ಮಾಲಿನಿ ಅವರ ಹೆಸರಿಟ್ಟು ಕರೆದಿದ್ದಾನೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನ ಬಂದು ಬಾಗಿಲು ಬಡಿಯಲು ಮುಂದಾಗಿದ್ದಾನೆ. ಆದರೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಕಿಟಕಿಯಿಂದ ಬಗ್ಗಿ ನೋಡಿದಾಗ ಅಲ್ಲಿ ಮಾಲಿನಿ ರಕ್ತದ ಮಡುವಿನಲ್ಲಿ ಮತ್ತು ಜಗನ್ನಾಥ್ ನೇಣಿಗೆ ಗೋಣೊಡ್ಡಿರುವುದು ಕಂಡುಬಂದಿದೆ. ಜತೆಗೆ, ಅಡುಗೆ ಮನೆಯಲ್ಲಿದ್ದ ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.
ಮಾಲಿನಿ ಯಾರು?: ಮಾಲಿನಿ ಶೆಟ್ಟಿ ಮಂಗಳೂರಿನ ಯೆಯ್ಯಾಡಿಯವರು. ಅವರ ತಂದೆ-ತಾಯಿ ದಿವಂಗತ ಜಗೀಶ್ ಮತ್ತು ಉಮಾವತಿ. 15 ವರ್ಷಗಳ ಹಿಂದೆ ಮಾಲಿನಿ ಶೆಟ್ಟಿ ಅವರು ಹಾಸನದ ಕುಮಾರ್ ಗೌಡ ಎಂಬವರೊಂದಿಗೆ ಚೊಚ್ಚಲ ಮದುವೆಯಾಗಿದ್ದರು. ಆದರೆ ವೈವಾಹಿಕ ಜೀವನದಲ್ಲಿ ಅಪಸ್ವರ ಕೇಳಿಬಂದ ನಂತರ ಮಾಲಿನಿ ಶೆಟ್ಟಿ ಗಂಡನನ್ನು ಬಿಟ್ಟು ತವರು ಮನೆಗೆ ವಾಪಸಾಗಿದ್ದರು.
ನಂತರ ಜೀವನೋಪಾಯಕ್ಕಾಗಿ ಮಾಲಿನಿ ಶೆಟ್ಟಿ ಮಂಗಳೂರಿನ ಕಾಪಿಕ್ಕಾಡಿನಲ್ಲಿ ಬ್ಯೂಟಿ ಪಾರ್ಲರ್ ಒಂದನ್ನು ತೆರೆದಿದ್ದರು. ಆಗ ಸಮೀಪದ ದೋಬಿ ಅಂಗಡಿಯಲ್ಲಿದ್ದ ಜಗನ್ನಾಥನ ಜತೆ ಗೆಳೆತನ ಬೆಳೆಸಿದ್ದಾರೆ. ಮೂರು ವರ್ಷಗಳ ಪ್ರೇಮದ ನಂತರ ಧರ್ಮಸ್ಥಳದಲ್ಲಿ ಅವರು ಮದುವೆಯೂ ಆದರು.
ಆದರೆ ಮಾಲಿನಿ ಶೆಟ್ಟಿಗಾಗಲಿ ಅಥವಾ ಅವರ ತವರಿನವರಿಗಾಗಲಿ ಜಗನ್ನಾಥನ ಹಿನ್ನೆಲೆ ಏನು ಎಂಬುದು ತಿಳಿದಿರಲಿಲ್ಲ. ಮೂರು ತಿಂಗಳ ಹಿಂದೆ ಮಾಲಿನಿ ಶೆಟ್ಟಿ ಮತ್ತು ಜಗನ್ನಾಥ ದಂಪತಿ ಕಾರ್ಕಳದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಈ ಮಧ್ಯೆ, ಜಗನ್ನಾಥ ಹೆಂಚು ಹೊದಿಸುವ ಕೆಲಸಕ್ಕೆ ಕೈಹಾಕಿದ್ದ.
ಸುಮಾರು 15 ದಿನಗಳ ಹಿಂದೆ ಮಾಲಿನಿ ಕುಟುಂಬ ಸಮೇತ ತಮ್ಮ ತಂದೆಯ ತಿಥಿಗೆ ತವರಿಗೆ ಬಂದಿದ್ದರು. ಅದನ್ನು ಮುಗಿಸಿಕೊಂಡು ಜೂನ್ 19ರಂದು ಕಾರ್ಕಳಕ್ಕೆ ಮರಳಿದ್ದರು. ಆದರೆ ಜೂನ್ 18ರಂದು ಮಾಲಿನಿ ತವರು ಮನೆಯಲ್ಲಿ ರೌದ್ರಾವತಾರ ತಾಳಿದ್ದ ಜಗನ್ನಾಥ ಕೈಯಲ್ಲಿ ಬೀರ್ ಬಾಟಲಿ ಹಿಡಿದು ಮಾಲಿನಿಯಲ್ಲಿ ಸಾಯಿಸುವುದಾಗಿ ಕೂಗಾಡಿದ್ದ. ಆದರೆ ಮನೆಯವರು ಇಬ್ಬರನ್ನೂ ಸಮಾಧಾನಪಡಿಸಿದ್ದರು. ಆದಾಗ್ಯೂ ದಂಪತಿಯ ಜಗಳಕ್ಕೆ ಕಾರಣ ತಿಳಿದುಬಂದಿರಲಿಲ್ಲ.
ಜೂನ್ 19ರಂದು ಜಗನ್ನಾಥ, ಇಬ್ಬರು ಮಕ್ಕಳೊಂದಿಗೆ ಮನೆಗೆ ಮರಳಿದ್ದಾನೆ. ಮಧ್ಯಾಹ್ನದ ವೇಳೆಗೆ ಮಾಲಿನಿ ಸಹ ವಾಪಸಾಗಿದ್ದಾರೆ. ಜೂನ್ 20ರಂದು ಅಂದರೆ ಘಟನೆ ನಡೆದ ದಿನ ಮಾಲಿನಿ ತನ್ನ ತಾಯಿ ಮತ್ತು ಸೋದರಿಯ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆದರೆ ಆಗ ಜಗಳದ ಬಗ್ಗೆಯಾಗಲಿ ಅಥವಾ ತನ್ನ ಜೀವಕ್ಕೆ ಪಾಯವಿದೆ ಎಂದಾಗಲಿ ಯಾವುದೇ ವಿಷಯವನ್ನು ಹೇಳಿಲ್ಲ.
ಬುಧವಾರ ಬೆಳಗ್ಗೆ ಕೆಲಸವಿದೆ ಎಂದು ಹೊರ ಹೋದ ಜಗನ್ನಾಥ ಸ್ವಲ್ಪ ಸಮಯದ ನಂತರ ಮನೆಗೆ ಬಂದು ಹೆಂಡತಿಯನ್ನು ಬಡಿದು ಸಾಯಿಸಿದ್ದಾನೆ. ನಂತರ ತಾನೂ ನೇಣಿಗೆ ಶರಣಾಗಿದ್ದಾನೆ. ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಕಳ ಡಿವೈಎಸ್ಪಿ ಜಯಂತ್ ಶೆಟ್ಟಿ, ಸರ್ಕಲ್ ಇನ್ಸ್ ಪೆಕ್ಟರ್ ವಿ ಡಿಸೋಜಾ, ಪೊಲೀಸ್ ಇನ್ಸ್ ಪೆಕ್ಟರ್ ಅಜ್ಮತ್ ಅಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.