ಜಾಮೀನಿಗೆ ಲಂಚ : ಪಟ್ಟಾಭಿಯ ಅಧಿಕೃತ ಬಂಧನ
ಲಂಚದ ಡೀಲ್ ಕುದುರಿಸಲು ಪ್ರಮುಖ ಪಾತ್ರ ವಹಿಸಿದ್ದ ನ್ಯಾಯಾಧೀಶರ ಮಗ ಟಿ. ರವಿ ಚಂದ್ರ ಮತ್ತು ನಿವೃತ್ತ ನ್ಯಾಯಾಧೀಶ ಪಿ.ವಿ. ಚಲಪತಿರಾವ್ ಅವರನ್ನು ಎಸಿಬಿ ಈಗಾಗಲೆ ಬಂಧಿಸಿದೆ. ಪಟ್ಟಾಭಿರಾಮ ರಾವ್ ಅವರನ್ನು ಮಂಗಳವಾರ ಅವರ ಮನೆಯಿಂದ ಎಸಿಬಿ ಕಚೇರಿಗೆ ಕರೆದೊಯ್ದು ಬೆಳಿಗ್ಗೆ ತೀವ್ರವಾಗಿ ವಿಚಾರಣೆಗೆ ಗುರಿಪಡಿಸಿದ ನಂತರ ಭ್ರಷ್ಟಾಚಾರ ವಿರೋಧಿ ದಳದ ನಿರ್ದೇಶಕ ಬಿ ಪ್ರಸಾದ ರಾವ್ ಅವರು ನ್ಯಾಯಧೀಶರನ್ನು ಅಧಿಕೃತವಾಗಿ ಬಂಧಿಸಿದೆ.
ಓಬಳಾಪುರಂ ಮೈನಿಂಗ್ ಕಂಪನಿಯ ಮಾಲಿಕ ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ಅಮಾನತುಗೊಂಡ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಅವರು 60 ಕೋಟಿ ರು. ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಸಚಿವರುಗಳಾದ ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ಅವರ ವಿರುದ್ಧ ಕೂಡ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ.
ಈ ಭ್ರಷ್ಟಾಚಾರ ಪ್ರಕರಣದ ಕೇಂದ್ರಬಿಂದು ನಿವೃತ್ತ ನ್ಯಾಯಾಧೀಶ ಚಲಪತಿ ರಾವ್ ಅವರು ಎಸಿ ಕಾಲೇಜ್ ಆಫ್ ಲಾನಲ್ಲಿ ಕಾನೂನು ಓದುತ್ತಿದ್ದಾಗ ಪಟ್ಟಾಭಿರಾಮ ರಾವ್ ಅವರ ಸಹಪಾಠಿಯಾಗಿದ್ದರು. ಇದೇ ಚಲಪತಿ ರಾವ್ ನಡೆಸಿದ ದೂರವಾಣಿ ಸಂಭಾಷಣೆಯ ಆಧಾರದ ಮೇಲೆ ಈ ಪ್ರಕರಣವನ್ನು ಬಯಲಿಗೆಳೆಯಲಾಗಿದೆ.
ಲಂಚ ನೀಡಲು ಅಪಾರ ಪ್ರಮಾಣದ ಹಣವನ್ನು ಕರ್ನಾಟಕದಿಂದ ಹೈದರಾಬಾದ್ನಲ್ಲಿರುವ ಜಡ್ಜ್ ಬ್ಯಾಂಕ್ ಖಾತೆಗಳಿಗೆ ಬಳ್ಳಾರಿ ಶಾಸಕ ಮತ್ತು ಕೆಎಂಎಫ್ ಚೀಫ್ ಸೋಮಶೇಖರ ರೆಡ್ಡಿ ಮತ್ತು ಕಂಪ್ಲಿ ಶಾಸಕ ಸುರೇಶ್ ಬಾಬು ಅವರು ಜಮಾ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರೂ ಇದನ್ನು ಅಲ್ಲಗಳೆದಿದ್ದು, ತಾವು ಅಮಾಯಕರು ತಮ್ಮನ್ನು ಬಿಟ್ಟುಬಿಡಿ ಎಂದು ಪ್ರಲಾಪಿಸಿದ್ದಾರೆ.