ಶಿರಡಿ ಬಸ್ ಅಪಘಾತ: ಸತ್ತವರು TCS ಯುವ ಟೆಕ್ಕಿಗಳು

ಕರ್ನಾಟಕದ ನೋಂದಣಿ ಹೊಂದಿದ್ದ ಶ್ರೀ ಕಾಳೇಶ್ವರಿ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ್ದ ಈ ಬಸ್ಸಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಗೆ ಸೇರಿದ್ದ ಟೆಕ್ಕಿಗಳೂ ಶಿರಡಿ ಯಾತ್ರೆಗೆ ಹೊರಟಿದ್ದರು. ಈ ಯುವ ಟೆಕ್ಕಿಗಳನ್ನು ಕಳೆದುಕೊಂಡು ತೀವ್ರ ಆಘಾತಕ್ಕೊಳಗಾಗಿರುವ TCS ಕಂಪನಿ, ಮೃತರ ಕುಟುಂಬದವರಿಗೆ ಎಲ್ಲ ರೀತಿಯಲ್ಲೂ ನೆರವಾಗಲು ಮುಂದಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ TCS ಕಂಪನಿಯು ಎರಡು ತಂಡಗಳನ್ನು ಕಳಿಸಿದ್ದು ಒಂದು ಅಪಘಾತ ಸ್ಥಳಕ್ಕೆ ಮತ್ತೊಂದು ಉಸ್ಮಾನಾಬಾದ್ ಹಾಗೂ ಸೊಲ್ಲಾಪುರದಲ್ಲಿರುವ ಆಸ್ಪತ್ರೆಗಳಿಗೆ ತೆರಳಿದೆ ಎಂದು ಕಂಪನಿಯ ಉಪಾಧ್ಯಕ್ಷ ವಿ ರಾಜಣ್ಣ ತಿಳಿಸಿದ್ದಾರೆ.
ಇಪ್ಪತ್ತರ ವಯಸ್ಸಿನ ಯುವ ಇಂಜಿನಿಯರುಗಳು ಕಳೆದ ವಾರವಷ್ಟೇ ತರಬೇತಿ ಮುಗಿಸಿದ್ದರು. ಒಟ್ಟು 15 ಮಂದಿ ಸಾಫ್ಟ್ ವೇರ್ ಇಂಜಿನಿಯರುಗಳ ತಂಡ ಶಿರಡಿ ಸಾಯಿಬಾಬಾ ಆಶಿರ್ವಾದಕ್ಕಾಗಿ ವೋಲ್ವೋ ಬಸ್ಸಿನಲ್ಲಿ ತೆರಳಿದ್ದರು. ಅವರ ಪೈಕಿ 13 ಅಮೂಲ್ಯ ಕುಡಿಗಳು ಇನ್ನಿಲ್ಲವಾಗಿವೆ. ಅವರ ಪೈಕಿ ಒಂಬತ್ತು ಮಂದಿ ಮಹಿಳಾ ಟೆಕ್ಕಿಗಳು. ತೀವ್ರ ಗಾಯಗಳೊಂದಿಗೆ ಇಬ್ಬರು ಬಚಾವಾಗುಳಿದಿದ್ದಾರೆ.
ಈ ಯುವ ಸಾಫ್ಟ್ ವೇರ್ ಇಂಜಿನಿಯರುಗಳು ಆಂಧ್ರ ಪ್ರದೇಶದ ವಿಜಯನಗರಂ ಮತ್ತು ವಿಶಾಖಪಟ್ಟಣಂನವರು. ವಿಜಯನಗರಂನ NVG Engineering College ವಿದ್ಯಾರ್ಥಿಗಳು. ಮದ್ಯದ ಅಮಲಿನಲ್ಲಿ ಯದ್ವಾತದ್ವಾ ಬಸ್ ಚಲಾಯಿಸುತ್ತಿದ್ದ ಚಾಲಕ ಸಹ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications