ರೈತನಿಗೆ ನಿರಾಣಿ ಕಪಾಳಮೋಕ್ಷ ಕೇಸ್ ದಾಖಲು
ಸಚಿವ ಮುರುಗೇಶ್ ನಿರಾಣಿ ಮುಧೋಳದ ಮುಂಟೂರಿನ ಬಳಿ ರೈತ ಮುಖಂಡರೊಬ್ಬರಿಗೆ ಥಳಿಸಿದ ಪ್ರಕರಣ ಸ್ಥಳೀಯರನ್ನು ರೊಚ್ಚಿಗೆಬ್ಬಿಸಿದೆ.
ಮಾಜಿ ಸಂಸದರೊಬ್ಬರ ಪುತ್ರ ಸ್ಥಳೀಯ ರೈತ ಮುಖಂಡ ಶಿವಾನಂದ ತಿಮ್ಮಸ್ವಾಮಿ ಅವರ ಮೇಲೆ ನಿರಾಣಿ ಹಾಗೂ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನಮ್ಮದ್ದು ರೈತ ಪರ ಸರ್ಕಾರ ಎಂದು ಹೇಳಿಕೊಳ್ಳುವ ಸದಾನಂದಗೌದರು ತಮ್ಮ ಸಹದ್ಯೋಗಿ ಸಚಿವರು ಮಾಡಿರುವ ಈ ಕೃತ್ಯದಿಂದ ತಲೆ ತಗ್ಗಿಸುವಂತಾಗಿದೆ.
ಶಿವಾನಂದ ಅವರು ಮುರುಗೇಶ್ ನಿರಾಣಿ ಅವರ ಕಾರು ತಡೆದು ಘೆರಾವ್ ಮಾಡಲು ಯತ್ನಿಸಿದರು. ಈ ಸಮಯದಲ್ಲಿ ಸಿಟ್ಟಿಗೆದ್ದ ನಿರಾಣಿ ಅವರು ಶಿವಾನಂದ ಅವರ ಕೆನ್ನೆಗೆ ಬಲವಾಗಿ ಬಾರಿಸಿ ದಾರಿ ಬಿಟ್ಟು ಹೋಗುವಂತೆ ಕೂಗಾಡಿದರು ಎನ್ನಲಾಗಿದೆ.
ರೈತ ಮುಖಂಡ ಶಿವಾನಂದ ಅವರ ಮೇಲಿನ ಹಳೆದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ನಿರಾಣಿ ಅವರು ಈ ರೀತಿ ನಡೆದುಕೊಂಡರು ಎನ್ನಲಾಗಿದೆ.
ನಿರಾಣಿ ವಿರುದ್ಧ ಪ್ರಕರಣ ದಾಖಲಿಸಲು ಸ್ಥಳೀಯ ಠಾಣೆಗೆ ಹೋದ ರೈತರಿಗೆ ನಿರಾಶೆ ಕಾದಿತ್ತು. ಮೊದಲಿಗೆ ಸಚಿವರ ವಿರುದ್ಧ ಪ್ರಕರಣ ದಾಖಲಿಸಲ ಠಾಣಾಧಿಕಾರಿಗಳು ನಿರಾಕರಿಸಿದರು. ನಂತರ ಎರಡು ಗಂಟೆಗಳ ಕಾಲ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ ಮೇಲೆ ಸಚಿವ ನಿರಾಣಿ ಮೇಲೆ ಹಲ್ಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿರಾಣಿ ಅವರನ್ನು ಕೂಡಲೇ ಬಂಧಿಸುವಂತೆ ರೈತರು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಈ ನಡುವೆ ರಾಜ್ಯ ಕೃಷಿ ಸಚಿವ ಉಮೇಶ್ ಕತ್ತಿ ಅವರ ಪುತ್ರ ನಿಖಿಲ್ ಅವರು ಹುಬ್ಬಳ್ಳಿ ಗೋಕುಲ ರಸ್ತೆ ಬೈಪಾಸ್ ಬಳಿ ಅಪಘಾತಕ್ಕೀಡಾಗಿದ್ದಾರೆ. ನಿಖಿಲ್ ಭುಜದ ಮೂಳೆ ಮುರಿದಿದ್ದು, ಕೆಎಲ್ ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.