ಬಿಜೆಪಿ ಗೆಲುವು, ಸಿಬಿಐ ಭೀತಿವಾದ: ದಿಕ್ಕೆಟ್ಟ ಯಡಿಯೂರಪ್ಪ

ಮೇಲ್ಮನೆ ಚುನಾವಣೆ ನೆಪದಲ್ಲಿ ವಿರೋಧಿ ಪಾಳಯದ ಸದಾನಂದ ಗೌಡರನ್ನು ಅಡಕತ್ತರಿಗೆ ಸಿಕ್ಕಿಸುವ ಭರದಲ್ಲಿ ಸ್ವತಃ ಯಡಿಯೂರಪ್ಪನವರೇ ಈಗ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದಾರೆ. ಇದರ ಫಲಶ್ರುತಿಯೋ ಎಂಬಂತೆ ಸದಾನಂದ ಗೌಡರ ಮುಖ್ಯಮಂತ್ರಿ ಖುರ್ಚಿ ಮತ್ತಷ್ಟು ಸುಭದ್ರವಾಗಿದೆ.
ಅದಕ್ಕಿಂತ ಮುಖ್ಯವಾಗಿ ಯಡಿಯೂರಪ್ಪಗೆ ಸಿಬಿಐ ಭೀತಿವಾದ ಮತ್ತೆ ಕಾಡತೊಡಗಿದೆ. ನಿನ್ನೆ ಸಿಬಿಐ ಕೋರ್ಟಿನಲ್ಲಿ ಯಡಿಯೂರಪ್ಪನವರ ಜಾಮೀನು ಅರ್ಜಿ ಬಿದ್ದುಹೋಗುತ್ತಿದ್ದಂತೆ 10 ತಿಂಗಳಿಂದ ಬಿಜೆಪಿಯಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿರುವ ಯಡಿಯೂರಪ್ಪ ಸಂಪೂರ್ಣವಾಗಿ ಧರಾಶಾಹಿಯಾಗಿದ್ದಾರೆ. ಸಮಯ ಸಿಕ್ಕಿದಾಗಲೆಲ್ಲ ಸಿಎಂ ಕುರ್ಚಿಯ ಮೇಲೆ ಬಂಡಾಯದ ಬಾವುಟ ಹಾಕುತ್ತಿದ್ದ ಯಡಿಯೂರಪ್ಪಗೆ ಈಗ ಬೆವರೊರಿಸಿಕೊಳ್ಳುವಂತಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿ, ಸಿಬಿಐ ಕೋರ್ಟು ಜಾಮೀನು ಕರುಣಿಸಿದ್ದಿದ್ದರೆ ಯಡಿಯೂರಪ್ಪನವರ ಕಥೆಯೇ ಬೇರೆ ಆಗುತ್ತಿತ್ತು. ಅವರ ಖದರು ಬೇರೆಯೇ ಇರುತ್ತಿತ್ತು. ಆದರೆ ಈಗ ತೆಪ್ಪಗಾಗಿದ್ದಾರೆ.
ಹಾಗೆ ನೋಡಿದರೆ ಸಿಬಿಐ ಭೀತಿವಾದ ಯಡಿಯೂರಪ್ಪಗೆ ನಿರೀಕ್ಷತವೇ ಆದರೆ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿದೆ ಎಂಬುದು ಖಾತ್ರಿಯಾಗುತ್ತಿದ್ದಂತೆ ಮತ್ತೆ ಆಟ ಶುರುವಿಟ್ಟುಕೊಳ್ಳಲು ಯಡಿಯೂರಪ್ಪ ಸನ್ನದ್ಧರಾಗಿದ್ದರು. ಸದಾನಂದ ಗೌಡರ ಆಡಳಿತ ವೈಖರಿಯಿಂದ ಬೇಸತ್ತು ಬಿಜೆಪಿ ಮಂದಿ ಇಂತಹ ಅಡ್ಡ ಮತಕ್ಕೆ ಮುಂದಾಗಿದ್ದಾರೆ ಎಂದು ವರಿಷ್ಠರ ಮುಂದೆ ಕಥೆ ಕಟ್ಟುವುದು ಯಡಿಯೂರಪ್ಪನವರ ಎಣಿಕೆಯಾಗಿತ್ತು.
ಆದರೆ ಅದಕ್ಕೆಲ್ಲ ಅವಕಾಶವೇ ಇಲ್ಲದಂತೆ ಬಿಜೆಪಿ ನಿರೀಕ್ಷಿತ ಜಯ ಸಾಧಿಸಿದೆ. ತನ್ಮೂಲಕ ಯಡಿಯೂರಪ್ಪ ಸೋತಿದ್ದಾರೆ. ಯಡಿಯೂರಪ್ಪಗೆ ರಾಜಕೀಯವಾಗಿ ಮುಂದೇನಾಗುವುದೋ, ಅದಕ್ಕೆ ಪೂರಕವಾಗಿ, ಹೈಕೋರ್ಟಿನಲ್ಲಿ ಇಂದೇನಾಗುವುದೋ ರಾಜ್ಯದ ಜನತೆಗೆ ಕುತೂಹಲದಿಂದ ಕಾಯುವಂತಾಗಿದೆ. ಕಂಗೆಟ್ಟ ಯಡಿಯೂರಪ್ಪ ಬೆಂಬಲಿಗರು ತಮ್ಮ ನಾಯಕನ ಬಂಧನಕ್ಕೆ ಸಾಕ್ಷಿಯಾಗಲು ಸಾಲುಸಾಲಾಗಿ ಯಡಿಯೂರಪ್ಪ ನಿವಾಸದತ್ತ ಧಾವಂತದಿಂದ ಹೆಜ್ಜೆಹಾಕುತ್ತಿದ್ದಾರೆ.












Click it and Unblock the Notifications