ಯಡಿಯೂರಪ್ಪ ಬಲದಿಂದಲೇ ಅಧಿಕಾರ ಸಿಕ್ಕಿದ್ದು: ರೇಣುಕಾ
ಹಣ, ಜಾತಿ ಬಳಸಿ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಯಾವ ಕಾರಣಕ್ಕೆ, ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ಅವರ ಹೇಳಿಕೆಯಿಂದ ಹಲವಾರು ನಾಯಕರಿಗೆ ನೋವಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.
ಯಡಿಯೂರಪ್ಪ ಅವರ ನಾಯಕತ್ವವನ್ನು ಒಪ್ಪಿ ಮತದಾರರು ಜನಾದೇಶ ನೀಡಿದರು. 110 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯಗಳಿಸಲು ಯಡಿಯೂರಪ್ಪ ಅವರು ಕಾರಣ. ಸರ್ಕಾರ ರಚನೆಯಲ್ಲಿ ಪಕ್ಷೇತರರ ಬೆಂಬಲ ಪಡೆಯಲಾಯಿತು.
ನಂತರ ಸರ್ಕಾರ ಸುಭದ್ರಗೊಳಿಸಲು ಬಿಜೆಪಿ ತತ್ವ ಸಿದ್ಧಾಂತ ಒಪ್ಪಿ ಇತರೆ ಪಕ್ಷಗಳಿಂದ ನಾಯಕರು ನಮ್ಮ ಪಕ್ಷ ಸೇರಿದರು. ಇದು ರಾಜಕೀಯದಲ್ಲಿ ಸಹಜ ಪ್ರಕ್ರಿಯೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣದಿಂದ ಬೇಸತ್ತು ಹಲವಾರು ನಾಯಕರು ಬಿಜೆಪಿ ಸೇರಿದರು.
ಆದರೆ, ಅವರು ಯಾರು ಬೀದಿ ನಾಯಕರಲ್ಲ. ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಅವರ ಮಗ ಬಸವರಾಜಬೊಮ್ಮಾಯಿ, ಉಮೇಶ್ ಕತ್ತಿ, ಸಿಎಂ ಉದಾಸಿ, ಬಚ್ಚೇಗೌಡ, ಎಚ್ ಬಸವರಾಜು, ವಿ ಸೋಮಣ್ಣ, ಡಿ,ಬಿ. ಚಂದ್ರೇಗೌಡ ಮುಂತಾದ ನಾಯಕರು ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಅವರನ್ನು ನಮ್ಮ ಪಕ್ಷಕ್ಕೆ ಗೌರವದಿಂದ ಬರಮಾಡಿಕೊಳ್ಳಲಾಗಿದೆ. ಗೌರವದಿಂದ ಅವರನ್ನು ಕಾಣಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಶಾಸಕಾಂಗ ಸಭೆ ಕರೆಯುವಂತೆ ಮಾಡಿರುವ ಮನವಿಗೆ ಇನ್ನೂ ಯಾವುದೇ ಉತ್ತರ ಸಿಕ್ಕಿಲ್ಲ. ಆದರೆ, ಈ ಬಗ್ಗೆ ಸದಾನಂದ ಗೌಡ ಹಾಗೂ ಈಶ್ವರಪ್ಪ ಅವರ ನಿರ್ಧಾರವೆ ಅಂತಿಮ ಎಂದು ರೇಣುಕಾಚಾರ್ಯ ಹೇಳಿದ್ದಾರೆ.