ಬೆಂಗಳೂರಲ್ಲಿ ಮಧ್ಯಾಹ್ನ 1.30ರಿಂದ ಬಸ್ ಸಂಚಾರ ಆರಂಭ

ಕಳೆದ ರಾತ್ರಿ 1.30ರ ಹೊತ್ತಿಗೆ ನಾಲ್ಕು ಬಿಎಂಟಿಸಿ ಬಸ್ಸುಗಳನ್ನು ಕಿಡಿಗೇಡಿಗಳು ಹೊಸೂರು ರಸ್ತೆಯ ರೂಪೇನ ಅಗ್ರಹಾರದಲ್ಲಿ ಸುಟ್ಟು ಹಾಕಿದ್ದರಿಂದ ಬಿಎಂಟಿಸಿ ಬಸ್ಸುಗಳ ಸಂಚಾರವನ್ನು ತಕ್ಷಣ ಅಧಿಕಾರಿಗಳು ಸ್ಥಗಿತಗೊಳಿಸಿದ್ದರು. ಇದರಿಂದಾಗಿ ರೈಲಿನಿಂದ ಮತ್ತು ಪರ ಊರಿನಿಂದ ಬಸ್ಸಲ್ಲಿ ಇಲ್ಲಿ ಬಂದಿಳಿದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಗಿತ್ತು.
ಆಟೋಗಳು ಕೂಡ ಕೇವಲ ಹೊರವಲಯದಲ್ಲಿ ಮಾತ್ರ ಸಂಚರಿಸುತ್ತಿರುವುದರಿಂದ ಪ್ರಯಾಣಿಕರು ಸಾಕಷ್ಟು ಪರದಾಡಬೇಕಾಯಿತು. ಕೆಲವರು ಕಾಲ್ನಡಿಗೆಯಲ್ಲಿಯೇ ಮನೆ ತಲುಪಿದರೆ, ಉಳಿದವರು ಪರಿಸ್ಥಿತಿ ಸರಿಹೋಗುತ್ತದೆಂದು ಸಾಮಾನು ಸರಂಜಾಮುಗಳನ್ನು ಪಕ್ಕದಲ್ಲಿಟ್ಟುಕೊಂಡು ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕೆಲವರು ಅಧಿಕಾರಿಗಳಿಗೆ ಹೋಗಿ ಬಸ್ ಸಂಚಾರ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.
ನಗರದಾದ್ಯಂತ ಪೊಲೀಸರು ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಕೆಲ ಪ್ರದೇಶಗಳಲ್ಲಿ ಮಾತ್ರ ಕೆಲ ಅಹಿತಕರ ಘಟನೆಗಳು ನಡೆದಿರುವುದರಿಂದ, ಬಿಎಂಟಿಸಿ ಅಧಿಕಾರಿಗಳು ಮಧ್ಯಾಹ್ನ 1 ಗಂಟೆಯ ಕಾಲ ಮಾತ್ರ ಬಸ್ ಸಂಚಾರವನ್ನು ಶುರು ಮಾಡಲು ನಿರ್ಧರಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ಬಸ್ ಸಂಚಾರ ಮುಂದುವರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸಂಜೆಯ 5ರ ಪರಿಸ್ಥಿತಿ ಸಂಪೂರ್ಣ ತಿಳಿಯಾಗುವ ಆಶಯ ಅವರು ವ್ಯಕ್ತಪಡಿಸಲಿದ್ದಾರೆ.
ಬಿಎಂಟಿಸಿ ಬಸ್ ಸಂಚಾರ ಹೊರತುಪಡಿಸಿದರೆ ನಗರದಲ್ಲಿ ಜನಜೀವನ ಸಾಮಾನ್ಯವಾಗಿ ಇದೆ. ಜನರು ತಮ್ಮ ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಕೆಲ ಆಟೋಗಳು ಮತ್ತು ಖಾಸಗಿ ಬಸ್ಸುಗಳು ಕೂಡ ಸಂಚರಿಸುತ್ತಿವೆ. ಔಷಧಿ ಅಂಗಡಿಗಳು, ಸಣ್ಣ ಹೊಟೇಲುಗಳು, ಕ್ಷೌರದ ಅಂಗಡಿಗಳು, ಬೀಡಿ ಅಂಗಡಿಗಳು ತೆರೆದುಕೊಂಡಿದ್ದು, ಕೆಲ ಕಿರಾಣಿ ಅಂಗಡಿ ಮಾಲಿಕರು ಅರ್ಧ ಶಟರ್ ಮೇಲೇರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಕೆಂಗೇರಿಯಲ್ಲಿ ಫುಡ್ ವರ್ಲ್ಡ್ನಂಥ ಡಿಪಾರ್ಟ್ಮೆಂಟ್ ಸ್ಟೋರ್ಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
ಆದರೆ, ಮಡಿವಾಳ, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರ, ರೂಪೇನ ಅಗ್ರಹಾರ, ಜಯನಗರ 8ನೇ ಬ್ಲಾಕ್, ಜಿಗಣಿ ಮುಂತಾದೆಡೆಗಳಲ್ಲಿ ಬಂದ್ ಸಂಪೂರ್ಣವಾಗಿದೆ. ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮಾಲಿಕರು ಸ್ವಯಂಪ್ರೇರಿತರಾಗಿ ಮುಚ್ಚಿದ್ದಾರೆ. ರಸ್ತೆಗಳೆಲ್ಲ ಭಣಭಣ ಅನ್ನುತ್ತಿದ್ದು, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕರೆಯಲಾಗಿದ್ದ ಭಾರತ್ ಬಂದ್ ಕರೆಯ ನಿಮಿತ್ತ ಕಚೇರಿಯಿಂದ ರಜಾ ಪಡೆದಿರುವ ನೌಕರರು ಮಾತ್ರ ರಜಾವನ್ನು ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.












Click it and Unblock the Notifications