ಆರೋಪ ಸಾಬೀತಾದರೆ ನಿವೃತ್ತಿ : ಅಣ್ಣಾಗೆ ಪ್ರಧಾನಿ ಸವಾಲ್

ಮ್ಯಾನ್ಮಾರ್ದಿಂದ ಮಂಗಳವಾರ ಭಾರತಕ್ಕೆ ವಾಪಸಾದ ಮೇಲೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವುದು ಬೇಜವಾಬ್ದಾರಿಯುತವಾದದ್ದು ಮತ್ತು ದುರದೃಷ್ಟಕರವಾದದ್ದು ಎಂದು ಖೇದ ವ್ಯಕ್ತಪಡಿಸಿದರು.
ಪ್ರಧಾನಿಯನ್ನು 'ಶಿಖಂಡಿ' ಎಂದು ಕರೆದಿಲ್ಲ ಎಂದು ತಮ್ಮ ಹಿಂದಿನ ಹೇಳಿಕೆಯನ್ನು ಅಲ್ಲಗಳೆದಿರುವ ಟೀಂ ಅಣ್ಣಾ ಸದಸ್ಯ, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು, ಅವರ ಕಣ್ಣೆದುರಿಗೇ ಭ್ರಷ್ಟಾಚಾರ ಅವ್ಯಾಹತವಾಗಿ ನಡೆದಿರುವಾಗ, ಅವರ ವೈಯಕ್ತಿಕ ಪ್ರಾಮಾಣಿಕತೆಯನ್ನು ತೆಗೆದುಕೊಂಡು ಏನು ಮಾಡುವುದು ಎಂದಿದ್ದಾರೆ. ಪ್ರಧಾನಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಶಿಖಂಡಿ ಯುದ್ಧ ಮಾಡುತ್ತಿದೆ ಎಂದು ಭೂಷಣ್ ಹೇಳಿದ್ದರು.
ಅಣ್ಣಾ ಟೀಂ ವಿರುದ್ಧ ತಿರುಗಿಬಿದ್ದ ಸಂತೋಷ್ ಹೆಗ್ಡೆ : ಆದರೆ, ಪ್ರಧಾನಿಯನ್ನು 'ಶಿಖಂಡಿ' ಎಂದು ಲೇವಡಿ ಮಾಡಿರುವುದನ್ನು ಟೀಂ ಅಣ್ಣಾ ಸದಸ್ಯರಾಗಿರುವ ನ್ಯಾ. ಸಂತೋಷ್ ಹೆಗ್ಡೆ ಅವರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನಿಯನ್ನು ಅಸಭ್ಯವಾಗಿ ಸಂಬೋಧಿಸುತ್ತಿರುವ ಅಣ್ಣಾ ತಂಡವನ್ನು ನಾನು ಬೆಂಬಲಿಸುವುದಿಲ್ಲ ಎಂದು ಮಾಜಿ ಲೋಕಾಯುಕ್ತ ಖಡಾಖಂಡಿತವಾಗಿ ಹೇಳಿದ್ದಾರೆ. ಅವರು ದೇಶದ ಪ್ರಧಾನಿಯಾಗಿದ್ದಾರೆ. ಅವರು ವಿರುದ್ಧ ಇಂಥ ಭಾಷೆಯ ಬಳಕೆ ಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಪ್ರಧಾನಿ ಮತ್ತು ಅವರ ಕ್ಯಾಬಿನೆಟ್ ಸಚಿವರ ವಿರುದ್ಧ ಅಣ್ಣಾ ಟೀಂ ಸಲ್ಲಿಸಿರುವ ಚಾರ್ಜ್ ಶೀಟ್ ನಾನು ನೋಡಿಲ್ಲ. ಅವರ ಆರೋಪ ಸಾಧಿಸುವಷ್ಟು ದಾಖಲೆಗಳಲ್ಲಿ ಹುರುಳಿದ್ದರೆ ನನ್ನ ಅಭ್ಯಂತರವಿಲ್ಲ. ಇಲ್ಲದಿದ್ದರೆ, ಬರೀ ಆರೋಪದ ಆಧಾರದ ಮೇಲೆ ನಾನು ಅಣ್ಣಾ ತಂಡವನ್ನು ಬೆಂಬಲಿಸುವುದಿಲ್ಲ" ಎಂದು ಕಡ್ಡಿ ತುಂಡು ಮಾಡಿದಂತೆ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ. ಹೆಗ್ಡೆ ಅವರ ಖಾರವಾದ ಪ್ರತಿಕ್ರಿಯೆಯಿಂದ ಪ್ರಶಾಂತ್ ಭೂಷಣ್ ಕೂಡ ತಣ್ಣಗಾಗಿದ್ದಾರೆ.
ತಮ್ಮ ಕಣ್ಣ ಮುಂದೆಯೇ ಎಷ್ಟೊಂದು ಭ್ರಷ್ಟಾಚಾರಗಳು ನಡೆಯುತ್ತಿದ್ದರೂ ಮನಮೋಹನ ಸಿಂಗ್ ಅವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷ ಸಿಂಗ್ ಅವರನ್ನು ಶಿಖಂಡಿಯಂತೆ ಬಳಸಿಕೊಳ್ಳುತ್ತಿದೆ. ಅವರು ಮಿ. ಕ್ಲೀನ್ ಆಗಿದ್ದರೆ, ಅವರ ಕ್ಯಾಬಿನೆಟ್ ಕೂಡ ಕ್ಲೀನ್ ಆಗಿಯೇ ಇರಬೇಕು ಎಂದು ಪ್ರಶಾಂತ್ ಭೂಷಣ್ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಲೇವಡಿ ಮಾಡಿದ್ದರು.
ಪ್ರಧಾನಿ ವಿರುದ್ಧ ಪ್ರಶಾಂತ್ ಭೂಷಣ್ ಮಾಡಿರುವ ಆರೋಪವನ್ನು ಆರ್ಜೆಡಿ ಪಕ್ಷದ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ಕೂಡ ತೀವ್ರವಾಗಿ ಟೀಕಿಸಿದ್ದಾರೆ. ಪ್ರಧಾನಿ ಕೇವಲ ಪ್ರಧಾನಿಯಲ್ಲ, ಅವರೊಬ್ಬ ನಾಯಕ ಕೂಡ. ಅತ್ಯಂತ ಕ್ಲೀನ್ ಇಮೇಜ್ ಇರುವ ಪ್ರಧಾನಿ ವಿರುದ್ಧ ಮಾಡಿರುವ ಆರೋಪಗಳು ನಿಜಕ್ಕೂ ಅಂತಹ ವ್ಯಕ್ತಿಗೆ ಅಗೌರವ ತರುವಂಥದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ವಿರುದ್ಧ 'ಶಿಖಂಡಿ' ಎಂಬ ಪದ ಬಳಿಸಿದ್ದಕ್ಕೆ ನಿಮ್ಮ ಅಭಿಪ್ರಾಯವೇನು?












Click it and Unblock the Notifications