ಮತ್ತೆ ತೆರೆದುಕೊಂಡ ನೀಲಿ ಚಿತ್ರ ವೀಕ್ಷಣೆ ಪ್ರಕರಣ

ಸದನ ಸಮಿತಿಯಿಂದ ಕ್ಲೀನ್ ಚಿಟ್ ಪಡೆದು, ಮ್ಯಾಜಿಸ್ಟ್ರೇಟ್ರಿಂದಲೂ ಬಚಾವಾಗಿ, ಎಲ್ಲ ಮುಗಿಯಿತಲ್ಲ ಎಂದು ಹಾಯಾಗಿದ್ದ ಮೂವರು ಸಚಿವರ ವಿರುದ್ಧ ತ್ವರಿತ ಗತಿ ಸೆಷನ್ಸ್ ಕೋರ್ಟಿನಲ್ಲಿ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಆನಂದ ಯದವಾಡ, ದೀಪಕ್ ಸಿಎನ್, ಫಣಿ ಸಾಯಿ, ಮಂಜುನಾಥ ಕೆ ಎಂಬುವವರು ಮೂವರು ಕಳಂಕಿತ ಸಚಿವರ ವಿರುದ್ಧ ಸೆಷನ್ಸ್ ಕೋರ್ಟಿನಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.
1ನೇ ಎಸಿಎಂಎಂ ನ್ಯಾಯಾಧೀಶ ವೆಂಕಟೇಶ ಹುಲಗಿ ಹೇಳಿದ್ದೇನೆಂದರೆ, ಸಚಿವರು ವಿಧಾನಸಭೆಯಲ್ಲಿ ಏನೇ ಮಾಡಿದರೂ ಸಂವಿಧಾನಾತ್ಮಕ ರಕ್ಷಣೆ ದೊರೆಯುವುದರಿಂದ ಅವರ ಮೇಲೆ ಕ್ರಿಮಿನಲ್ ಕೇಸು ನಿಲ್ಲುವುದಿಲ್ಲ. ಈ ಆದೇಶದ ವಿರುದ್ಧದ ಮೇಲ್ಮನವಿ ಈಗ ನೆಷನ್ಸ್ ನ್ಯಾಯಾಧೀಶ ಎಸ್.ಕೆ. ಒಂಟಿಗೋಡಿ ಅವರ ಮುಂದೆ ಮೇ 29ರಂದು ವಿಚಾರಣೆಗೆ ಬರಲಿದೆ.
ನಾಲ್ವರು ಫಿರ್ಯಾದುದಾರರು ವಾದಿಸುವುದೇನೆಂದರೆ, ಕರ್ನಾಟಕ ವಿಧಾನಸಭೆಯಲ್ಲಿ ಮೂವರು ಸಚಿವರು ನೀಲಿ ಚಿತ್ರ ಬಳಸಿದ್ದು ಸಾಧಾರಣ ಕ್ರೈಂ ಆಗಿದ್ದು, ಅದಕ್ಕೆ ಸಂವಿಧಾನಾತ್ಮಕವಾಗಿ ರಕ್ಷಣೆ ಸಿಗುವುದಿಲ್ಲ. ಆದ್ದರಿಂದ ಅವರ ವಿರುದ್ಧ ಪೊಲೀಸರಿಂದ ಕ್ರಮ ಜರುಗಿಸಬೇಕು. ಸಚಿವರ ವಿರುದ್ಧ ಎಫ್ಐಆರ್ ದಾಖಲು ಮಾಡಲು ಪೊಲೀಸರು ನಿರಾಕರಿಸುತ್ತಿರುವುದರಿಂದ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಪ್ರಕರಣದಲ್ಲಿ ಸಾಂವಿಧಾನಾತ್ಮಕ ರಕ್ಷಣೆಯನ್ನು ಸರಿಯಾಗಿ ಅರ್ಥೈಸಲಾಗಿಲ್ಲ ಎಂದು ಹೇಳಿರುವ ಫಿರ್ಯಾದುದಾರರು, ಸಮಾಜದ ಒಳಿತಿಗಾಗಿ ಮೂವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ. ಅವರ ಪರವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕೆ.ವಿ. ಧನಂಜಯ ಅವರು ವಾದಿಸುತ್ತಿದ್ದಾರೆ.
ಅಶ್ಲೀಲ ಚಿತ್ರ ಹೊಂದಿ, ನೋಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ, 1860ಯ ಸೆಕ್ಷನ್ 292ರ ಅಡಿಯಲ್ಲಿ, ಅಶ್ಲೀಲ ಚಿತ್ರ ಎಂದು ಗೊತ್ತಿದ್ದರೂ ಇತರರಿಗೆ ಹಂಚಿದ್ದಕ್ಕಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ಯ ಸೆಕ್ಷನ್ 67ರ ಅಡಿಯಲ್ಲಿ ಮತ್ತು ಮಹಿಳೆಯರನ್ನು ಅತ್ಯಂತ ಕೀಳುಮಟ್ಟದಲ್ಲಿ ನೋಡಿದ್ದಕ್ಕಾಗಿ ಮತ್ತು ಪ್ರತಿಬಿಂಬಿಸಿದ್ದಕ್ಕಾಗಿ ಇನ್ಡೀಸೆಂಟ್ ರೆಪ್ರೆಸೆಂಟೇಷನ್ ಆಫ್ ವಿಮೆನ್ (ಪ್ರಾಹಿಬಿಷನ್) ಆಕ್ಟ್ ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಮನವಿ ಮಾಡಲಾಗಿದೆ.











Click it and Unblock the Notifications