ಈ ಸಲ ಸಂಪುಟ ವಿಸ್ತರಣೆ ಗ್ಯಾರಂಟಿ: ಈಶ್ವರಪ್ಪ
ರಾಜ್ಯ ಯುವ ಮೋರ್ಚಾದ ವತಿಯಿಂದ ಅಯೋಜನೆಗೊಂಡಿರುವ ಯುವ ಜಾಗೃತಿ ಸಮಾವೇಶದ ಪೂರ್ವ ತಯಾರಿ ವೀಕ್ಷಣೆ ಬೆಳ್ಳಂಬೆಳ್ಳಿಗೆ ಆಗಮಿಸಿದ್ದ ಈಶ್ವರಪ್ಪ ಅವರು ಸಂಪುಟ ವಿಸ್ತರಣೆಯ ಬಗ್ಗೆ ಹೇಳಿದರು.
ಎಂಎಲ್ ಸಿ ಚುನಾವಣೆ ಬಳಿಕ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಕೂಡಾ ನಡೆಯಲಿದೆ. ವಿಧಾನ ಪರಿಷತ್ ಚುನಾವಣೆಯ ಆರು ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಆರೋಪ ಹೊತ್ತ ನಾಯಕರು ಪ್ರಚಾರಕ್ಕೆ ಬರದಿದ್ದರೂ ತೊಂದರೆ ಏನಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಕೆಣಕಿದರು.
ಸಂಪುಟ ವಿಸ್ತರಣೆ ಗೊಂದಲವಿಲ್ಲ: 11 ಮಂದಿ ಶಾಸಕರ ಸಂಭವನೀಯ ಪಟ್ಟಿಯನ್ನು ಅಂತಿಮಗೊಳಿಸಿ, ಧರ್ಮೇಂದ್ರ ಪ್ರಧಾನ್ ಅವರೊಂದೊಗೆ ಚರ್ಚಿಸಲಾಗಿದೆ. ಸಂಪುಟ ವಿಸ್ತರಣೆ ದಿನಾಂಕ ನಿಗದಿಪಡಿಸಿಲ್ಲ. ಹೈಕಮಾಂಡ್ ಸೂಚನೆ ಮೇರೆಗೆ ಶೀಘ್ರವೇ ದಿನಾಂಕ ಪ್ರಕಟಿಸಲಾಗುವುದು ಎಂದರು.
ಸದಾನಂದ ಗೌಡರ ತಲೆ ಮೇಲೆ 20ಕ್ಕೂ ಅಧಿಕ ಖಾತೆಗಳ ಹೊರೆ ಇರುವಾಗ 11 ಮಂದಿಗೆ ಮಾತ್ರ ಅದೃಷ್ಟ ಸಿಗುವುದಾದರೆ ಉಳಿದವರ ಪಾಡೇನು? ಎಂಬ ಪ್ರಶ್ನೆ ಎದ್ದಿದೆ. ಉಳಿದ ಖಾತೆಗಳಿಗೆ ಹೊಸಬರ ಬದಲಿಗೆ ಹಳೆಬರ ಖಾತೆ ಹಂಚಿಕೆ ಮಾಡಲಾಗುವುದೇ? ಸಿಟಿ ರವಿ ಕಾಮರಾಜ ಸೂತ್ರಕ್ಕೆ ಸದಾನಂದ ಗೌಡ ಹಾಗೂ ಹೈ ಕಮಾಂಡ್ ಬೆಲೆ ನೀಡುವುದೇ ಕಾದು ನೋಡಬೇಕಿದೆ.