ದುಬೈ: 24 ಭಾರತೀಯ ಮಂತ್ರವಾದಿಗಳ ಬಂಧನ
ಕ್ಷಿಪ್ರ ದಾಳಿ ನಡೆಸಿದ ಪೊಲೀಸರು ತಲೆಬುರುಡೆಗಳು, ಮೂಳೆಗಳು, ಮಾಂತ್ರಿಕ ಕಲ್ಲುಗಳು ಮತ್ತು ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಮುತ್ರಾ ಪ್ರದೇಶದಲ್ಲಿ ವಾಸವಾಗಿದ್ದ ಈ ಮಾಂತ್ರಿಕರು ಜನರಿಗೆ ಭವಿಷ್ಯ ಹೇಳಿ, ಅವರ ಸಂಕಷ್ಟಗಳಿಗೆ ಪರಿಹಾರ ಸೂಚಿಸುವ ನೆಪದಲ್ಲಿ ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
'ವ್ಯಾಪಾರ' ಮಾಡುತ್ತೇವೆಂದು ಹೇಳಿಕೊಂಡು ಅಲ್ಪಾವಧಿ ಕಾಲದ ವೀಸಾ ಪಡೆದು ಒಮಾನಿನಲ್ಲಿ ಈ ಆರೋಪಿಗಳು ವಾಸಿಸುತ್ತಿದ್ದರು ಎನ್ನಲಾಗಿದೆ. ಮೋಸಹೋದ ಗ್ರಾಹಕನೊಬ್ಬ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಈ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಾಯಾಜಾಲ ಅಲ್ಲ ಮೋಸದ ಜಾಲ!: ನಮ್ಮ ಬಳಿ ಮಂತ್ರಿಸಿದ ಕಲ್ಲುಗಳು ಇವೆ. ಅದು ಮಾಯಾಜಾಲ ಸೃಷ್ಟಿಸುತ್ತದೆ. ಅದನ್ನು ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂದು ನನ್ನ ಗೆಳೆಯನೊಬ್ಬನನ್ನು ಆ ಮಾಂತ್ರಿಕರು ಪುಸಲಾಯಿಸಿದ್ದರು. ಅದರಂತೆ ಅವನು ಅವರು ವಾಸಿಸುತ್ತಿರುವ ಸ್ಥಳಕ್ಕೆ ಹೋದಾಗ 2,250 ಒಮಾನಿ ರಿಯಲ್ಸ್ ಹಣ ನೀಡುವಂತೆ ಅವರು ಪುಸಲಾಯಿಸಿದರು.
ಹಣ ನೀಡಿದ ಗೆಳೆಯನಿಗೆ ಆ ನಂತರ ಅದೆಲ್ಲ ಮೋಸದ ಜಾಲ ಎಂಬುದು ಅರಿವೆಗೆ ಬಂತು. ಆಗ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಬಾಧಿತ ವ್ಯಕ್ತಿಯ ಸ್ನೇಹಿತರೊಬ್ಬರು ವಿವರಿಸಿದ್ದಾರೆ.
ಭಾರತದಲ್ಲಿ ಪವಿತ್ರ ಸ್ಥಳಗಳಲ್ಲಿ ಕಲ್ಲುಗಳನ್ನು ಆರಿಸಿಕೊಂಡು ಬಂದಿದ್ದೇವೆ. ಅವುಗಳಿಗೆ ಮಾಯಾಶಕ್ತಿ ಇದೆ ಎಂದು ಆರೋಪಿಗಳು ಜನರನ್ನು ವಂಚಿಸುತ್ತಿದ್ದರು. ಆರೋಪಿಗಳ ಪಾಸ್ ಪೋರ್ಟ್ ಗಳನ್ನು ಪರಿಶೀಲಿಸಿದಾಗ ಅವರೆಲ್ಲ ಸಿಂಗಾಪುರ, ಖರಾತ್, ಚೀನಾ ಮತ್ತಿತರ ದೇಶಗಳಿಗೂ ಭೇಟಿ ನೀಡಿರುವುದು ಪತ್ತೆಯಾಗಿದೆ.