ನಾನಾಗಿದ್ರೆ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದೆ : ಈಶ್ವರಪ್ಪ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐನಿಂದ ತನಿಖೆಯನ್ನು ಯಡಿಯೂರಪ್ಪ ಎದುರಿಸುತ್ತಿರುವುದಕ್ಕೆ ಭಾನುವಾರ ಪ್ರತಿಕ್ರಿಯಿಸುತ್ತಿದ್ದ ಅವರು, "ಇಂಥ ಆರೋಪಗಳನ್ನು ಎದುರಿಸುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು" ಎಂದು ಹೇಳಿ ತಮ್ಮದೇ ಶಿವಮೊಗ್ಗ ಜಿಲ್ಲೆಯವರಾದ ಮಾಜಿ ಮುಖ್ಯಮಂತ್ರಿಯನ್ನು ಮತ್ತೆ ಕೆಣಕಿದ್ದಾರೆ.
ಅವರಿದ್ದ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಯಡಿಯೂರಪ್ಪನವರನ್ನು ತಿವಿಯುತ್ತಲೇ, ಮಾಜಿ ಮುಖ್ಯಮಂತ್ರಿ ಭಾರೀ ಗಟ್ಟಿ ಮನುಷ್ಯ. ಇಂತಹ ಅನೇಕ ಅಡೆತಡೆಗಳನ್ನು ಎದುರಿಸುವ ತಾಕತ್ತು ಅವರಿಗಿದೆ. ಎಲ್ಲ ತನಿಖೆಗಳನ್ನು ಎದುರಿಸಿ ಜಯಶಾಲಿಯಾಗಿ ಹೊರಬರುತ್ತಾರೆ ಎಂದು ವಿಶ್ವಾಸವನ್ನು ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ವೈಮನಸ್ಯ ಎಲ್ಲರಿಗೂ ತಿಳಿದ ಸಂಗತಿ. ಅಕ್ರಮ ಗಣಿಗಾರಿಕೆ ವರದಿಯಲ್ಲಿ ಯಡಿಯೂರಪ್ಪ ಹೆಸರು ಕೇಳಿಬಂದಾಗ, ಆರೋಪ ಎದುರಿಸುತ್ತಿರುವ ವ್ಯಕ್ತಿ ಎಂಥದೇ ಸ್ಥಾನದಲ್ಲಿದ್ದರೂ ತನಿಖೆ ಎದುರಿಸಲೇಬೇಕು ಎಂದು ಹೇಳಿ ಈಶ್ವರಪ್ಪ ಯಡಿಯೂರಪ್ಪ ವೈಮನಸ್ಯ ಕಟ್ಟಿಕೊಂಡಿದ್ದರು. ಯಡಿಯೂರಪ್ಪ ಜೈಲಿಗೆ ಹೋದಾಗ ಇದಕ್ಕೆಲ್ಲ ಈಶ್ವರಪ್ಪ ಅವರೇ ಕಾರಣ ಎಂದು ಹೇಳಿ ಯಡಿಯೂರಪ್ಪ ತಮ್ಮ ಕ್ರೋಧವನ್ನು ಈಶ್ವರಪ್ಪ ವಿರುದ್ಧ ವ್ಯಕ್ತಪಡಿಸಿದ್ದರು.
ಹೈಕಮಾಂಡ್ ವಿರುದ್ಧ ಯಡಿಯೂರಪ್ಪ ಕಿಡಿ : ಬಿಜೆಪಿ ಹೈಕಮಾಂಡ್ ಎಂಬುದು ಬೆನ್ನೆಲುಬಿಲ್ಲದ ಸಂಸ್ಥೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯ ಹಿರಿಯ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಹೊರತುಪಡಿಸಿ ಯಾವ ನಾಯಕನಿಗೂ ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಮುನ್ನಡೆಸಬಲ್ಲ ತಾಕತ್ತು ಇಲ್ಲವೆಂದು ಹೇಳಿಕೆ ಯಡಿಯೂರಪ್ಪ ನೀಡಿದ್ದಾರೆ. ಗುಜರಾತ್, ರಾಜಸ್ತಾನ ಮತ್ತು ಕರ್ನಾಟಕದಲ್ಲಿ ಎದ್ದಿರುವ ಭಿನ್ನಮತ ಹತ್ತಿಕ್ಕಲು ಹಿರಿಯ ನಾಯಕರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಮಟ್ಟದ ಒಬ್ಬ ನಾಯಕನಿಂದ ಇಷ್ಟೊಂದು ತೆಗಳಿಕೆಗಳನ್ನು ಎದುರಿಸಿರುವ ಹಿರಿಯ ನಾಯಕರು ಯಡಿಯೂರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಒತ್ತಟ್ಟಿಗಿರಲಿ, ಕನಿಷ್ಠಪಕ್ಷ ಎಚ್ಚರಿಕೆಯನ್ನು ನೀಡಲು ಕೂಡ ಹಿಂಜರಿಯುತ್ತಿದೆ. ಯಡಿಯೂರಪ್ಪನವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ ಮತ್ತು ಅದೇ ಸಮಯದಲ್ಲಿ ಅವರು ಪಕ್ಷದಿಂದ ತೊಲಗಲು ಕೂಡ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ದಿನಗಳ ಹಿಂದೆ, ಯಡಿಯೂರಪ್ಪನವರು ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿದ್ದು, ಕ್ರಮ ತೆಗೆದುಕೊಳ್ಳಬೇಕೆಂದು ಈಶ್ವರಪ್ಪ ಮತ್ತು ಡಿವಿ ಸದಾನಂದ ಗೌಡ ಹೌಕಮಾಂಡಿಗೆ ದೂರಿದ್ದರು. ದೂರು ಕಸದಬುಟ್ಟಿ ಸೇರಿಕೊಂಡಿದೆ.












Click it and Unblock the Notifications