ಹಿರೇಮಠ್: ಅಕ್ರಮ ಗಣಿಗಾರಿಕೆಯ ತೊಡರುಗಲ್ಲು
ಹುಬ್ಬಳ್ಳಿ, ಮೇ 19: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ತೊಡರುಗಲ್ಲಾಗಿ, ಭ್ರಷ್ಟಾಚಾರದ ವಿರುದ್ಧ ನಾಡಿನ ಪ್ರಜ್ಞಾವಂತರ ಸಾಕ್ಷಿಪ್ರಜ್ಞೆಯಾಗಿರುವ ಈ ಹಿರೇಮಠ್ ಯಾರು? ಓ ಅವರಾ ಅದೇ ಹುಬ್ಬಳ್ಳಿ-ಧಾರವಾಡದಲ್ಲಿರುವ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷರು, ಅವರೊಬ್ಬ ನ್ಯಾಯವಾದಿ ಎಂದು ಯಾರೇ ಆಗಲಿ ಥಟ್ ಅಂತ ಹೇಳಬಹುದು. ಆದರೆ ಅವರ ಪೂರ್ವಾಪರದ ಬಗ್ಗೆ ಒಂದಷ್ಟು ಮಾಹಿತಿ ಬಯಸುವವರಿಗಾಗಿ ...
ಅದಕ್ಕೂ ಮುನ್ನ... ದಟ್ಸ್ ಕನ್ನಡ ಓದುಗರಾದ ಚಕ್ರಪಾಣಿ ಅವರು ಥಟ್ ಅಂತ ಹಿರೇಮಠ್ ಬಗ್ಗೆ ಹೀಗೆ ಹೇಳಿದ್ದಾರೆ- 'ಶ್ರೀ ಕೃಷ್ಣ ಹೇಳಿರುತ್ತಾನೆ ಪವಿತ್ರಾಣಾಯ ಸಾಧೂನಾಮ್ ವಿನಾಶಯಚ ದುಷ್ಕ್ರುತಾಂ ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ ಯುಗೇ ಯುಗೇ... ಅದರಂತೆ ಆ ರೂಪದಲ್ಲಿ ಈಗ ಹಿರೇಮಠ್'.
ಅವರು ಸಂಗಯ್ಯ ರಾಚಯ್ಯ ಹಿರೇಮಠ್, ಅದೇ ಕಣ್ರಿ ಎಸ್ ಆರ್ ಹಿರೇಮಠ್. ಜನಾರ್ದನ ರೆಡ್ಡಿ ಸೇರಿದಂತೆ ಇನ್ನಿತರೆ ಅಕ್ರಮ ಗಣಿವೀರರು ಕೊರೆದಿಟ್ಟಿರುವ ಗಣಿ ಪಾತಾಳದಿಂದಲೇ ಅಕ್ರಮ ಗಣಿಗಾರಿಕೆ ವಿರುದ್ಧ ಗಟ್ಟಿ ಧ್ವನಿ ಎತ್ತಿರುವ ಸಾದಾಸೀದಾ ಮನುಷ್ಯ ಈ ಹಿರೇಮಠ್.
ಹಿರೇಮಠ್ ಹುಟ್ಟು ಧಾರವಾಡದ ಬೆಳವಂಕಿಯಲ್ಲಿ 1944ರಲ್ಲಿ. ಶಿಕ್ಷಣ- ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರ. ಉನ್ನತ ವ್ಯಾಸಂಗ - 1969ರಲ್ಲಿ ಅಮೆರಿಕದಲ್ಲಿ ಎಂಎಸ್ ಜತೆಗೆ, ಎಂಬಿಎ.
ಮುಂದ: 10 ವರ್ಷಗಳ ಕಾಲ ಅಮೆರಿಕದಲ್ಲಿಯೇ ಸೇವೆ. ಆ ನಂತರ ತಾಯ್ನಾಡಿನ ಸೇವೆಗೆ ಮರಳಿದ ಹಿರೇಮಠ್, 1984ರಲ್ಲಿ ಧಾರವಾಡದಲ್ಲಿ 'ಸಮಾಜ ಪರಿವರ್ತನಾ ಸಮುದಾಯ'ವನ್ನು ಹುಟ್ಟುಹಾಕಿದರು. ತನ್ಮೂಲಕ ಪರಿಸರ, ಪಂಚಾಯತ್ ರಾಜ್ ಕ್ಷೇತ್ರಗಳಲ್ಲಿ ಹೋರಾಟ. ಅದಕ್ಕಾಗಿ, 1992ರಲ್ಲಿ ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರ ಮುಕುಟ. ಇದೀಗ ನಿಮಗೆಲ್ಲ ಗೊತ್ತಿರುವಂತೆ 'ಮೈನಿಂಗ್ ಮಾಫಿಯಾ' ವಿರುದ್ಧ ಅವರದು ಸುಪ್ರೀಂ ಹೋರಾಟ.