ಬಿಎಸ್ವೈ: ಶಿವಮೊಗ್ಗದಲ್ಲಿ ಸಿಬಿಐ ಪರಿಶೀಲನೆ ಅಂತ್ಯ
ಉದಯ್ ಕುಮಾರ್ ಅವರು ಯಡಿಯೂರಪ್ಪ ಅವರ ದ್ವಿತೀಯ ಪುತ್ರಿ ಅರುಣಾ ದೇವಿ ಅವರ ಪತಿ. ಸಿಬಿಐ, ಉದಯ್ ಅವರನ್ನು ಶಿವಮೊಗ್ಗದಲ್ಲಿ ಬೇರೆ ಬೇರೆ ಕಚೇರಿಗಳಿಗೆ ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದಿದ್ದರು. ವಿವಿಧ ಬ್ಯಾಂಕುಗಳಲ್ಲಿ ಕುಟುಂಬಕ್ಕೆ ಸಂಬಂಧಪಟ್ಟ ಖಾತೆ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಉದಯ್ ಕುಮಾರ್ ಅವರನ್ನು ಅವರ ನಿವಾಸಕ್ಕೆ ವಾಪಸ್ ಕರೆತಂದು ಬಿಟ್ಟಿದ್ದಾರೆ. ಸಿಬಿಐ ತಂಡ ಬೆಂಗಳೂರಿಗೆ ವಾಪಸಾಗಿದೆ.
ಗಮನಾರ್ಹವೆಂದರೆ ಯಡಿಯೂರಪ್ಪ ಸೇರಿದಂತೆ ಪ್ರಕರಣದಲ್ಲಿ ಬೇರೆ ಯಾವುದೇ ಆರೋಪಿಯನ್ನು ಸಿಬಿಐ ಬಂಧಿಸಿಲ್ಲ. ಈ ಮಧ್ಯೆ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಅವರನ್ನು ಇಂದು ಸಂಜೆ ಅಥವಾ ನಾಳೆ ಗುರುವಾರ ಬಂಧನಕ್ಕೊಳಗಾಗುವ ಲಕ್ಷಣಗಳಿವೆ.
ಬಂಧನವಿಲ್ಲ; ವಿಚಾರಣೆ ಅಷ್ಟೇ: ತಮ್ಮ ಪತಿ ಉದಯ್ ಅವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿಲ್ಲ. ಕೇವಲ ವಿಚಾರಣೆಗಾಗಿ ಅವರನ್ನು ತಮ್ಮ ಜತೆಗೆ ಕರೆದುಕೊಂಡು ಹೋಗಿದ್ದಾರೆ. ಸಿಬಿಐ ಅಧಿಕಾರಿಗಳು ಇದನ್ನು ತಮಗೆ ಸ್ಪಷ್ಟಪಡಿಸಿದ್ದಾರೆ ಎಂದು ಅರುಣಾದೇವಿ ಶಿವಮೊಗ್ಗದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.