ರೆಡ್ದಿಗೆ ಕೊನೆಗೂ ಸಿಕ್ತು ಬೇಲು- ಯಡಿಯೂರಪ್ಪಗೆ ಜೈಲು?
ಇತ್ತೀಚೆಗೆ ಸಿಬಿಐ ನ್ಯಾಯಾಲಯ ಜಾಮೀನು ನಿರಾಕರಿಸಿದ್ದಾಗ ಗಾಲಿ ರೆಡ್ಡಿ, ನಾನು ಮತ್ತೊಮ್ಮೆ ಹೈದರಾಬಾದಿನ ಚಂಚಲಗೂಡ ಜೈಲಿಗೆ ಕಾಲಿಡುವುದಿಲ್ಲ ಎಂದಿದ್ದರು. ಅದು ಭವಿಷ್ಯವಾಣಿಯೋ, ಬೇಸರದ ನುಡಿಯೋ ಗೊತ್ತಿಲ್ಲ. ಬಾಡಿವಾರೆಂಟ್ ಮೇಲೆ ಬೆಂಗಳೂರಿಗೆ ಬಂದ ಮೇಲೆ ಗಾಲಿ ರೆಡ್ಡಿ ಮಾನಸಿಕವಾಗಿ ಗೆಲುವಾಗಿರುವುದು ಗಮನಾರ್ಹ ಸಂಗತಿ.
ಹೈದರಾಬಾದಿನ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಓಬುಳಾಪುರಂ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಒಡೆಯ ಗಾಲಿ ರೆಡ್ಡಿ ಹಾಗೂ ಎಂಡಿ ಶ್ರೀನಿವಾಸ್ ರೆಡ್ಡಿ ಅವರಿಗೆ ಜಾಮೀನು ನೀಡಿರುವುದು ಸಿಬಿಐಗೆ ಭಾರಿ ಹೊಡೆತ ಕೊಡುವ ಸಾಧ್ಯತೆಯಿದೆ.
ಸೆ.5, 2011ರಂದು ಜನಾರ್ದನ ರೆಡ್ಡಿಯನ್ನು ಬಳ್ಳಾರಿಯ ನಿವಾಸದಲ್ಲಿ ಉಟ್ಟ ಬಟ್ಟೆ ಉಟ್ಟಂತೆ ಸಿಬಿಐ ತಂಡ ಬಂಧಿಸಿ ಹೈದರಾಬಾದಿಗೆ ಕರೆದೊಯ್ಯಲಾಗಿತ್ತು. ಐಎಎಸ್ ಅಧಿಕಾರಿ ರಾಜಗೋಪಾಲ್, ದಿವಂಗತ ಲಿಂಗಾ ರೆಡ್ಡಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರು ಅಕ್ರಮವಾಗಿ ಓಎಂಸಿ ಕಂಪನಿಗೆ 68.5 ಹಾಗೂ 39.5 ಹೆಕ್ಟೇರು ಭೂಮಿ ಮಂಜೂರು ಮಾಡಿದ ಆರೋಪವಿದೆ.
ರೆಡ್ಡಿಗೆ ಜಾಮೀನು ಸಿಗದ ಕಾರಣ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿಗೂ ಬೇಲ್ ಸಿಗುತ್ತಿರಲಿಲ್ಲ. ಈಗ ಶ್ರೀಲಕ್ಷ್ಮಿಗೆ ಜಾಮೀನು ಸರಾಗವಾಗಿ ಸಿಗುವ ಸಾಧ್ಯತೆಯಿದೆ. ಶ್ರೀಲಕ್ಷ್ಮಿ ಮೇಲೆ ಅಕ್ರಮ ಆಸ್ತಿ ಆರೋಪ ಹೊರೆಸಿ ದಾಳಿ ನಡೆಸಲು ಮುಂದಾಗಿದ್ದ ಸಿಬಿಐಗೆ ಇದರಿಂದ ಭಾರಿ ಹಿನ್ನೆಡೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.
ಮೇ.23ರ ತನಕ ಜನಾರ್ದನ ರೆಡ್ಡಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರಬೇಕಾಗಿದ್ದು, ನಂತರ ಮತ್ತೊಮ್ಮೆ ಜಾಮೀನಿಗೆ ಯತ್ನಿಸಲಿದ್ದಾರೆ. ಏನಾಗುವುದೋ ಕಾದು ನೋಡೋಣ...
ಯಡಿಯೂರಪ್ಪಗೆ ಜೈಲು ಭೀತಿ: ಮಕ್ಕಳು ಮಾಡಿದ ತಪ್ಪಿಗೆ ಇಳಿ ವಯಸ್ಸಿನಲ್ಲಿ ಮತ್ತೊಮ್ಮೆ ಜೈಲುವಾಸ ಅನುಭವಿಸುವ ಭೀತಿಯನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎದುರಿಸುತ್ತಿದ್ದಾರೆ.
ಗಣಿ ಲಂಚ ಹಾಗೂ ರಾಚೇನಹಳ್ಳಿಯ ಕಾನೂನುಬಾಹಿರ ಡಿನೋಟಿಫಿಕೇಶನ್ ಪ್ರಕರಣಗಳ ಕುರಿತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಶುಕ್ರವಾರ(ಮೇ.11) ಆದೇಶಿಸಿದೆ.
ಯಡಿಯೂರಪ್ಪ ಕುಟುಂಬ ವರ್ಗಕ್ಕೆ ಸೇರಿದ ಪ್ರೇರಣಾ ಶಿಕ್ಷಣ ಟ್ರಸ್ಟ್, ಭಗತ್ ಹೋಂ, ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಸಂಸ್ಥೆಗಳು ಗಣಿ ಗುತ್ತಿಗೆ ನೀಡಲು ಜಿಂದಾಲ್ ಸ್ಟೀಲ್ ವರ್ಕ್ ಮತ್ತು ಸೌತ್ ವೆಸ್ಟ್ ಮೈನಿಂಗ್ ಕಂಪನಿಯಿಂದ ಪಡೆದ ಲಂಚ ಈಗ ಯಡಿಯೂರಪ್ಪಗೆ ಮುಳುವಾಗಿದೆ.
ಯಡಿಯೂರಪ್ಪ ಅವರನ್ನು ರೆಡ್ಡಿಯನ್ನು ಬಂಧಿಸಿದ ರೀತಿಯಲ್ಲೇ ವಶಕ್ಕೆ ತೆಗೆದುಕೊಳ್ಳಲಾಗುತ್ತದೆಯೇ? ಬಂಧನವಿಲ್ಲದೆ ತನಿಖೆ ಸಾಧ್ಯತೆ? ಯಡಿಯೂರಪ್ಪ ವಿಚಾರಣೆ ಹೇಗೆ ನಡೆಯುತ್ತದೆ? ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಪಡೆದರೆ ಬಚಾವಾಗಬಹುದೇ? ಈ ಬಗ್ಗೆ ಸಮಗ್ರ ಲೇಖನ ನಿರೀಕ್ಷಿಸಿ...ಸದ್ಯಕ್ಕೆ ಯಡಿಯೂರಪ್ಪ ಹಾಗೂ ಕುಟುಂಬಕ್ಕೆ ಅವರಿಗೆ ಸಿಬಿಐ ಗುಮ್ಮನ ಭಯ ಮಾತ್ರ ಇದೆ.