ಕುಂ ವೀರಭದ್ರಪ್ಪ ಹೊಸ ಕಾದಂಬರಿ ಹೆಸರಿನ ವಿವಾದ
ಕಾದಂಬರಿಯಲ್ಲಿ ಹೇಮರೆಡ್ಡಿ ಮಲ್ಲಮ್ಮನ ಕುರಿತಾಗಿ ಅನೇಕ ಆಕ್ಷೇಪಾರ್ಹ ಸಂಗತಿಗಳಿದ್ದು, ಕಾದಂಬರಿಗೂ ಹೇಮರೆಡ್ಡಿ ಮಲ್ಲಮ್ಮನ ಚರಿತ್ರೆಗೂ ತಾಳ ಮೇಳವಿಲ್ಲ. ಪ್ರಚಾರದ ಭರದಲ್ಲಿ ಇತ್ತೀಚಿಗೆ ಸಾಹಿತಿಗಳೆನಿಸಿಕೊಂಡವರು ಮಹಾನ್ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ಬರೆಯುವದನ್ನು ರೂಢಿಸಿಕೊಂಡಿದ್ದಾರೆ. ಇವರ ಇಂತಹ ನಡವಳಿಕೆಗಳಿಂದ ಕೋಟ್ಯಂತರ ಅನುಯಾಯಿಗಳಿಗೆ ನೋವಾಗುತ್ತದೆ ಎನ್ನುವ ಪರಿಜ್ಞಾನವೂ ಇಲ್ಲದಿರುವುದು ದುರಂತದ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಮರೆಡ್ಡಿ ಮಲ್ಲಮ್ಮನ ಕಥೆಯು ಎಂಬ ಶೀರ್ಷಿಕೆಯುಳ್ಳ ಪುಸ್ತಕದಲ್ಲಿ ಹೇಮರೆಡ್ಡಿ ಕುಟುಂಬವನ್ನು ಕೊಲೆಗಡುಕರ ಕುಟುಂಬವೆಂಬಂತೆ ಚಿತ್ರಿಸಲಾಗಿದ್ದು, ಈ ಮೂಲಕ ಹೇಮರೆಡ್ಡಿ ಮಲ್ಲಮ್ಮ ಹಾಗೂ ರೆಡ್ಡಿ ಜನಾಂಗವನ್ನು ಅವಮಾನ ಮಾಡಿದ್ದಾರೆ. ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುವ ಹಕ್ಕು ಯಾರಿಗೂ ಇಲ್ಲ. ಆದ್ದರಿಂದ ಸರಕಾರ ಮೇ 12ರಂದು ನಡೆಯಲಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರದ್ದುಪಡಿಸಿ ಶೀರ್ಷಿಕೆ ಬದಲಿಸಿದ ನಂತರವೇ ಪುಸ್ತಕದ ಬಿಡುಗಡೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಅಭಿವ್ಯಕ್ತಿ ಸ್ವತಂತ್ರ್ಯ ಸರ್ವರ ಹಕ್ಕು. ಆದರೆ ಡಾ.ಕುಂ.ವೀರಭದ್ರಪ್ಪನವರು ತಮ್ಮ ಕಾದಂಬರಿಗೆ ಸಂಬಂಧವೇ ಇಲ್ಲದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನ ಹೆಸರನ್ನು ಇಟ್ಟಿದ್ದು ಅಕ್ಷಮ್ಯ ಅಪರಾಧ. ಕೂಡಲೇ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿರುವ ರೆಡ್ಡಿ ಜನಾಂಗವನ್ನು ಸಂಘಟಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಬಿಡುಗಡೆ ಎಲ್ಲಿ, ಎಂದು? : ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಮೇ 12ರಂದು ಬೆಳಿಗ್ಗೆ 10.30ಕ್ಕೆ ಪುಸ್ತಕ ಬಿಡುಗಡೆಯಾಗುತ್ತಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರರು ಬಿಡುಗಡೆ ಮಾಡುತ್ತಿದ್ದಾರೆ. ಅಧ್ಯಕ್ಷರಾಗಿ ವಿಮರ್ಶಕರಾದ ಡಾ. ಸಿಎನ್ ರಾಮಚಂದ್ರನ್ ಮತ್ತು ಮುಖ್ಯ ಅತಿಥಿಯಾಗಿ ಡಾ. ಕಮಲಾ ಹಂಪನಾ ಭಾಗವಹಿಸುತ್ತಿದ್ದಾರೆ. ವಿಮರ್ಶಕ ಡಾ. ಓ.ಎಲ್. ನಾಗಭೂಷಣ ಸ್ವಾಮಿಯವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಪುಸ್ತಕವನ್ನು ಸಪ್ನ ಬುಕ್ ಹೌಸ್ ಪ್ರಕಟಿಸಿದೆ.