ರೆಡ್ಡಿ ಅಕ್ರಮ: IFS ಮುತ್ತಯ್ಯ ಕೊನೆಗೂ ಬಂಧನ

ಇದರೊಂದಿಗೆ, ಎಎಂಸಿ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಕರ್ನಾಟಕ ಸಿಬಿಐ ಪ್ರಕರಣದ ಸಂಬಂಧ ಇದುವರೆಗೂ ಒಟ್ಟು ನಾಲ್ವರನ್ನು ಬಂಧಿಸಿದಂತಾಗಿದೆ. ಉಳಿದಿಬ್ಬರು ಅಂದರೆ ಮೊದಲ ಆರೋಪಿ ಜನಾರ್ದನ ರೆಡ್ಡಿ ಮತ್ತು ಆತನ ಬಲಗೈ ಬಂಟ ಅಲಿಖಾನ್. ಪ್ರಕರಣದ ವೇಳೆ ಸಿಬಿಐ ಪೊಲೀಸರು ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ.
ರೆಡ್ಡಿ ಜತೆ ಸಂಧಿ ಕಾಲ: ಮುತ್ತಯ್ಯ ಮತ್ತು ರಾಜು ಅವರನ್ನು ಬಳ್ಳಾರಿಯಲ್ಲಿ ಬಂಧಿಸಲಾಗಿದೆ. ಇವರಿಬ್ಬರನ್ನು ಇಂದು ಸಂಜೆ ಬೆಂಗಳೂರಿನ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಬಳಿಕ ಅವರಿಗೆ ನ್ಯಾಯಾಂಗ ಬಂಧನವಾದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗಾಗಲೇ ಠಿಕಾಣಿ ಹೂಡಿರುವ ಜನಾ ರೆಡ್ಡಿಯನ್ನು ಸಂಧಿಸಬಹುದು. ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಯಲ್ಲೂ ಈ ಇಬ್ಬರ ಹೆಸರು ಪ್ರಮುಖವಾಗಿ ದಾಖಲಾಗಿತ್ತು.
2003-2005ರವರೆಗೆ ಬಳ್ಳಾರಿಯಲ್ಲಿ ಅರಣ್ಯಾಧಿಕಾರಿಯಾಗಿದ್ದ ಮುತ್ತಯ್ಯ ಅರಣ್ಯ ಒತ್ತುವರಿಗೆ ಅವಕಾಶ ಕಲ್ಪಿಸಿ, ಎಎಂಸಿ ಕಂಪನಿಯ ಅಕ್ರಮ ಗಣಿಗಾರಿಕೆಗೆ ನೆರವಾಗಿದ್ದರು. ಮುತ್ತಯ್ಯ ತೋರಿದ ಸ್ವಾಮಿನಿಷ್ಠೆಯಿಂದಾಗಿ ಅವರನ್ನೇ ಅಂದಿನ ಜಿಲ್ಲಾ ಸಚಿವ ರೆಡ್ಡಿ ಮತ್ತೆ ಬಳ್ಳಾರಿಗೆ ವರ್ಗ ಮಾಡಿಸಿಕೊಂಡು ತಮ್ಮ ಅಕ್ರಮಗಳಿಗೆ ನೆರವು ಪಡೆದಿದ್ದರು. ಅಷ್ಟೇ ಅಲ್ಲದೆ ಮುತ್ತಯ್ಯ ಜಿಲ್ಲಾ ಪಂಚಾಯತ್ ಇಲಾಖೆಗೆ ವರ್ಗವಾದರೂ ಅರಣ್ಯ ಇಲಾಖೆಯ ಮೇಲೆ ಹಿಡಿತ ಸಾಧಿಸಿ, ರೆಡ್ಡಿ ಅಕ್ರಮಗಳಿಗೆ ರಹದಾರಿ ನೀಡಿದ್ದರು. ರಾಜು ಸಹ ರೆಡ್ಡಿ ಅಕ್ರಮಗಳಿಗೆ ನೆರವಾಗಿದ್ದರು ಎಂದು ಸಿಬಿಐ ಮೂಲಗಳು ಹೇಳಿವೆ.












Click it and Unblock the Notifications