ಹೊಸ ಖಾತೆ ಇಲ್ಲ, ಖಾತೆ ಮರುಹಂಚಿಕೆ ಮಾತ್ರ : ಈಶ್ವರಪ್ಪ
ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ಖಾತೆಗಳ ಮರುಹಂಚಿಕೆ ಮಾಡುವ ಅಗತ್ಯತೆಯಿದ್ದು, ಶೀಘ್ರವೇ ಈ ಕಾರ್ಯವನ್ನು ನಡೆಸಲಾಗುವುದು ಎಂದು ಶನಿವಾರ(ಏ.21) ತಡ ರಾತ್ರಿ ನಡೆದ ಹಿರಿಯ ನಾಯಕರ ಸಭೆಯ ಬಳಿಕ ಈಶ್ವರಪ್ಪ ಹೇಳಿದರು.
ಯಡಿಯೂರಪ್ಪ ಏಕಾಂಗಿಯಲ್ಲ : ಮಾಜಿ ಸಿಎಂ ಯಡಿಯೂರಪ್ಪರ ವಿರುದ್ಧ ಸಿಇಸಿ ಸಿಬಿಐ ತನಿಖೆಗೆ ಶಿಫಾರಸು ಮಾಡಿರುವ ಹಿಂದೆ ಹಲವರ ಷಡ್ಯಂತ್ರವಿದೆ. ಈ ಕುತಂತ್ರಕ್ಕೆ ಯಾರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ಸದ್ಯದಲ್ಲಿಯೇ ಬಹಿರಂಗಗೊಳಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.
'ಯಡಿಯೂರಪ್ಪರಿಗೆ ನೈತಿಕಸ್ಥೈರ್ಯ ತುಂಬಲಾಗಿದೆ. ಅವರ ಬೆನ್ನಿಗೆ ಪಕ್ಷವಿದೆ. ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ಅವರು ಆರೋಪದಿಂದ ಮುಕ್ತರಾಗುತ್ತಾರೆ. ಬಿಜೆಪಿ ಬಿಕ್ಕಟ್ಟು, ಸದಾನಂದ ಗೌಡ, ಯಡಿಯೂರಪ್ಪ ನಡುವೆ ತಿಕ್ಕಾಟ ಎಲ್ಲವೂ ಮಾಧ್ಯಮ ಸೃಷ್ಟಿ ಎಂದು ಈಶ್ವರಪ್ಪ ತಿಳಿಸಿದರು.
ಸಚಿವ ಸ್ಥಾನದ ಆಕಾಂಕ್ಷಿಗಳು: ತುಮಕೂರು ಭಾಗದಿಂದ ಸೊಗಡು ಶಿವಣ್ಣ, ಕೊಡಗಿನಿಂದ ಅಪ್ಪಚ್ಚು ರಂಜನ್, ಚಿಕ್ಕಮಗಳೂರು ಭಾಗದಿಂದ ಸಿ.ಟಿ. ರವಿ, ಜೀವರಾಜ್, ಎಂಪಿ ಕುಮಾರಸ್ವಾಮಿ...
ಮಂಗಳೂರು ಭಾಗದಿಂದ ಅಂಗಾರ, ಉಡುಪಿಯಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬಳ್ಳಾರಿಯಿಂದ ಆನಂದ್ ಸಿಂಗ್, ಬಿಜಾಪುರದಿಂದ ಅಪ್ಪು ಪಟ್ಟಣಶೆಟ್ಟಿ, ಬೆಂಗಳೂರಿನಿಂದ ಅರವಿಂದ ಲಿಂಬಾವಳಿ ಅಥವಾ ಎಂ. ಶ್ರೀನಿವಾಸ್ ಈ ಬಾರಿಯ ಮಂತ್ರಿ ಸ್ಥಾನ ಗಿಟ್ಟಿಸುವ ನಿರೀಕ್ಷೆ ಹೊಂದಿದ್ದಾರೆ. ಇವರೆಲ್ಲರ ಜೊತೆಗೆ ಬೇಳೂರು ಗೋಪಾಲಕೃಷ್ಣ ಕೂಡಾ ರೇಸ್ ನಲ್ಲಿದ್ದು, ಸಚಿವ ಸ್ಥಾನ ಸಿಕ್ಕರೆ ಯಾವ ತ್ಯಾಗಕ್ಕೂ ಸಿದ್ಧ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.