ಕನ್ಯತ್ವ ಕಳೆದುಕೊಂಡವಳನ್ನು ಮದುವೆಯಾಗಲು ರೆಡಿನಾ?
ನಮ್ಮ ಊರು ಬೆಂಗಳೂರಿಗೆ ಎಷ್ಟು ಮುಖ, ಎಷ್ಟು ಬಣ್ಣಗಳಿವೆ ಬಲ್ಲವರಾರು? ವಾಸಿಸಲು ಬೆಂಗಳೂರು ಏಷ್ಯಾದ ಅತ್ಯುತ್ತಮ ನಗರ ಎಂದು ಒಂದು ಸಮೀಕ್ಷೆ ಹೇಳಿದ್ದರೆ, ಇನ್ನೊಂದು ಸಮೀಕ್ಷೆಯ ಪ್ರಕಾರ, ಬೆಂಗಳೂರು ಭಾರತದ ಅತ್ಯಂತ ದುಬಾರಿ ನಗರ! ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಹೇಳಿದ ಮುಂದಿನ ಎರಡು ದಿನ ರಣರಣ ಬಿಸಿಲು ಸುರಿಯುತ್ತಿರುತ್ತದೆ. ವೈಸ್ ವರ್ಸಾ. ವಾತಾವರಣಕ್ಕೆ ಸಂಬಂಧಿಸಿದಂತೆ ಹವಾಮಾನ ಇಲಾಖೆಯ ತಜ್ಞರ ಮಾತನ್ನು ಬೆಂಗಳೂರು ಯಾವತ್ತೂ ಕೇಳುವುದಿಲ್ಲ.
ಒಂದಾನೊಂದು ಕಾಲದಲ್ಲಿ ಹವಾನಿಯಂತ್ರಿತ ನಗರ ಎಂದು ಹೆಸರಾಗಿದ್ದ ಬೆಂಗಳೂರು ಈಗ ಬೇಸಿಗೆಯಲ್ಲಿ ಕುಕ್ಕರಿನ ಮುಚ್ಚಳ ತೆಗೆದಂತಾಗಿದೆ. ಕೆಲ ದಶಕಗಳ ಹಿಂದೆ ಗಿಡಮರಗಳಿಂದ ನಳನಳಿಸುತ್ತಿದ್ದ ನಗರಿ ಇಂದು ಫ್ಲೈಓವರುಗಳಿಂದ ಕಂಗೊಳಿಸುತ್ತಿದೆ. ಒನ್ಸ್ ಅಪಾನ್ ಎ ಟೈಮ್ ರಿಟೈರ್ಡ್ ವ್ಯಕ್ತಿಗಳ ಸ್ವರ್ಗವಾಗಿದ್ದ ಬೆಂಗಳೂರು ಈಗ ಸಿಟಿ ಆಫ್ ಮರ್ಡರ್ ಅಂಡ್ ಸೂಯಿಸೈಡ್.
ಬೆಂಗಳೂರಿನ ನಕ್ಷೆ ಬದಲಾಗಿದೆ, ಹವಾಮಾನ ಬದಲಾಗಿದೆ, ಜನರ ಅಭಿರುಚಿಗಳು ಬದಲಾಗಿವೆ. ಸಾಫ್ಟ್ವೇರ್ ಹಬ್ ಆದಂದಿನಿಂದ ಇಂಜಿನಿಯರುಗಳ ಜೇಬಲ್ಲಿ ರೊಕ್ಕ ತುಂಬಿ ತುಳುಕಾಡುತ್ತಿದೆ. ಹಣವೊಂದಿದ್ದರೆ ಈ ಜಗದಲ್ಲಿ ಏನು ಬೇಕಾದರೂ ಮಾಡಬಹುದು ಎಂಬಂತಹ ಮನೋಭಾವ ಜನರಲ್ಲಿ ಬೇರೂರುತ್ತಿದೆ. ಪ್ರೇಮಿಗಳ ದಿನ ಭಜರಂಗಿಗಳ ಕಾಟ, ಪಾರ್ಕುಗಗಳಲ್ಲಿ ಪ್ರೇಮಿಗಳ ನಡುವೆ ಖುಲ್ಲಂಖುಲ್ಲಾ ನಡೆಯುವ ಸರಸದಾಟದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಪರಿಸ್ಥಿತಿ ಹೀಗಿರುವಾಗ ಆರೋಗ್ಯಕರ ಮಾಹಿತಿ ನೀಡುವ ವೆಬ್ ಸೈಟೊಂದು 'ಕನ್ಯತ್ವಕ್ಕೆ' ಸಂಬಂಧಿಸಿದಂತೆ, ಹೊಸ ಸಂಸ್ಕೃತಿಗೆ ತೆರೆದುಕೊಂಡಿರುವ ಬೆಂಗಳೂರಿಗರು ಏನು ಅನ್ನುತ್ತಾರೆ ಎಂದು ಒಂದು ಸಮೀಕ್ಷೆ ನಡೆಸಿದೆ. ಮದುವೆ, ಸಂಗಾತಿ, ಕನ್ಯತ್ವಕ್ಕೆ ಸಂಬಂಧಿಸಿ ತಮ್ಮ ಅನಿಸಿಕೆಗಳನ್ನು ಯಾವುದೇ ಮುಜುಗರವಿಲ್ಲದೆ ಮುಕ್ತ ಮುಕ್ತ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇಂದಿನ ಪೀಳಿಗೆಯ ಬಿಂದಾಸ್ ಬೆಂಗಳೂರಿಗರಿಗೆ ಕೇಳಿದ್ದು ಒಂದೇ ಪ್ರಶ್ನೆ "ಕನ್ಯತ್ವ ಕಳೆದುಕೊಂಡವರನ್ನು ಮದುವೆಯಾಗಲು ರೆಡೀನಾ?"
20ರಿಂದ 30ರ ಹರೆಯದಲ್ಲಿರುವ ಪುರುಷರು ತಾವು ಕನ್ಯತ್ವ ಕಳೆದುಕೊಂಡವರನ್ನೇ ಮದುವೆಯಾಗಲು ಇಷ್ಟಪಡುವುದಾಗಿ ಹೇಳಿ ದಂಗುಬಡಿಸಿದ್ದಾರೆ. ಬೆಂಗಳೂರು ಮತ್ತು ಇಲ್ಲಿರುವ ಜನ ಎತ್ತ ಸಾಗುತ್ತಿದ್ದಾರೆ ಎಂಬುದಕ್ಕೆ ಈ ಉತ್ತರವೇ ದಿಕ್ಸೂಚಿ. ಈ ಉತ್ತರ, ಗಂಡ ಹೆಂಡತಿ ನಡುವಿನ ಸಂಬಂಧ, ಅನ್ಯೋನ್ಯತೆ, ನಂಬಿಕೆಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಏಳುವಂತೆ ಮಾಡಿದೆ. ಹಾಗೆಯೆ, ತಾವು ಕನ್ಯತ್ವ ಇರುವವಳನ್ನೇ ಮದುವೆಯಾಗುವುದಾಗಿಯೂ ಹೇಳಿದ್ದಾರೆ. ಆಕೆಯ ಜೀವನದಲ್ಲಿ ಏನು ನಡೆದಿದೆ ಎಂದು ನಾನು ಕೇಳುವುದಿಲ್ಲ, ನನ್ನ ಬಗ್ಗೆಯೂ ಆಕೆ ಕೇಳಬಾರದು ಎಂಬುದು ಇಬ್ಬರೂ ಪರಸ್ಪರ ಒಪ್ಪಿಕೊಂಡ ಸತ್ಯವಾಗಿದೆ. ಇಂದಿನ ಧಾವಂತದ ಜೀವನದಲ್ಲಿ ಸಂಭೋಗ ನಡೆಸದೆಯೂ ಕನ್ಯಾ ಪೊರೆ ಹರಿದುಹೋಗುವ ಸಾಧ್ಯತೆ ಹೆಚ್ಚು ಎಂಬುದು ತಿಳಿದ ಸಂಗತಿ.
ಕಳೆದೊಂದು ದಶಕದಲ್ಲಿ ಬೆಂಗಳೂರು ಸಾಕಷ್ಟು ಬದಲಾವಣೆ ಕಂಡಿದೆ. ಹಳೆ ನೀರು ವೃಷಭಾವತಿಯಲ್ಲಿ ಕೊಚ್ಚಿಹೋಗಿ ಹೊಸ ನೀರು ಚರಂಡಿಗಳಲ್ಲಿ ಹರಿದುಬರುತ್ತಿದೆ. ಹದಿಹರೆಯಕ್ಕೆ ಬಂದ ಹುಡುಗ ಹುಡುಗಿಯರಲ್ಲಿ ಲೈಂಗಿಕ ಸಂಬಂಧ, ಮದುವೆಗೆ ಮುಂಚೆ ನಡೆಯಬಾರದ ಕ್ರಿಯೆಯಾಗಿ ಉಳಿದಿಲ್ಲ. ಪಾಶ್ಚಾತ್ಯ ಸಂಸ್ಕೃತಿ ಬೆಂಗಳೂರಿನಲ್ಲಿ ಹಾಸುಹೊಕ್ಕಾಗಿದೆ. ಕಚೇರಿಗಳಲ್ಲಿ ಗಂಡು ಹೆಣ್ಣುಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ, ಪಾರ್ಟಿ ಪಬ್ಬುಗಳಲ್ಲಿ ಭಿಡೆಯಿಲ್ಲದೆ ಭಾಗವಹಿಸುತ್ತಿದ್ದಾರೆ. ಮಹಿಳೆಯರು ಸಿಗರೇಟು ಸೇದುವುದು, ಗುಂಡು ಹಾಕುವುದು ಆಶ್ಚರ್ಯವೆಂಬತೆ ಕಾಣುತ್ತಿಲ್ಲ.
ಝಗಮಗಿಸುವ ಮಾಲ್ಗಳಲ್ಲಿ, ಮಿಣುಕು ದೀಪಗಳ ಮಲ್ಟಿಪ್ಲೆಕ್ಸುಗಳಲ್ಲಿ, ನಶೆಯೇರಿಸುವ ಪಬ್ಬುಗಳಲ್ಲಿ, ಕಾಲೇಜು ಮುಂದಿನ ರಸ್ತೆಗಳಲ್ಲಿ, ಕಾಫಿ ಶಾಪುಗಳಲ್ಲಿ, ಬೌಂಡರಿ ಇಲ್ಲದ ಪಾರ್ಕುಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿ, ನಾನ್ ವೆಜ್ ಹೋಟೆಲುಗಳಲ್ಲಿ, ಅಪ್ಪ ಅಮ್ಮನ ಎದುರಲ್ಲಿ ಹದಿಹರೆಯದ ಗಂಡು ಹೆಣ್ಣುಗಳು ಕೈಕೈ ಹಿಡಿದು ಓಡಾಡುವುದು, ಗಂಟೆಗಟ್ಟಲೆ ಕುಳಿತು ಬೆಂಚಿನ ಮೇಲ್ಮೈಯನ್ನು ಬೆಚ್ಚಗೆ ಮಾಡುವುದು, ಮುಜುಗರವಿಲ್ಲದೆ ತಬ್ಬಿಕೊಳ್ಳುವುದು, ಇಬ್ಬರೂ ಇಷ್ಟಪಟ್ಟರೆ ಗಲ್ಲಕ್ಕೆ ಮುತ್ತುಕೊಡುವುದು ಈಗಿನ 'ಸಂಪ್ರದಾಯ'ವೇ ಆಗಿದೆ. ನಿಮ್ಮ ಅಭಿಪ್ರಾಯವೇನು? [ಮೂಲ ಲೇಖನ]