HP ಟೆಕ್ಕಿ, ಡಿವೈಎಸ್ಪಿ ಪುತ್ರಿ ಮಾನಸ ನೇಣಿಗೆ
ಹುಳಿಮಾವುನಲ್ಲಿರುವ ಸಂತೃಪ್ತಿ ನಗರದಲ್ಲಿ ವಾಸವಾಗಿದ್ದ ಮಾನಸ (26) ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆಯ ಭೂ ಒತ್ತುವರಿ ತೆರವು ಘಟಕದ ಡಿವೈಎಸ್ಪಿಯಾಗಿರುವ ಗೆಜ್ಜೆಪ್ಪ ಹಾಗೂ ಗೀತಾ ಅವರ ಪುತ್ರಿ ಮಾನಸ, 2 ವರ್ಷದ ಹಿಂದೆ ಮೈಸೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಮೋಹನ್ ಕುಮಾರ್ ಜತೆ ವಿವಾಹವಾಗಿತ್ತು.
ಕೆಲ ತಿಂಗಳ ಹಿಂದೆ ಕೆಲಸದ ನಿಮಿತ್ತ ಪತಿ ಮೋಹನ್ ಕುಮಾರ್ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಅವರ ಜತೆ ಮಾನಸ ಸಹ ಹೋಗಿದ್ದರು. ಕೆಲ ತಿಂಗಳ ಹಿಂದೆ ಆಸ್ಟ್ರೇಲಿಯಾದಿಂದ ವಾಪಸಾದ ಮಾನಸ, ಪೋಷಕರೊಂದಿಗೆ ವಾಸವಾಗಿದ್ದರು.
ಗೆಜ್ಜೆಪ್ಪ ದಂಪತಿ ಶಿರಾದಲ್ಲಿರುವ ತೋಟದ ಮನೆಗೆ ವಾರಾಂತ್ಯ ತೆರಳಿದ್ದರು. ಅವರನ್ನು ಕರೆತರಲು ಮಾನಸ ಸೋದರ ಉಲ್ಲಾಸ ಶನಿವಾರ ಹೋಗಿದ್ದರು. ಆ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮಾನಸ ಈ ಕೃತ್ಯವೆಸಗಿದ್ದಾರೆ. ಸಾವಿಗೆ ಮುನ್ನ ಮಾನಸ ತನ್ನ ಕೆಲ ಸಂಬಂಧಿಕರು, ಸ್ನೇಹಿತರಿಗೆ today is my last day ಎಂದು ಎಸ್ಎಂಎಸ್ ಕಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮಾನಸ ಮರಣ ಪತ್ರ ಬರೆದಿದ್ದು, ಅದರಲ್ಲಿ ತನ್ನನ್ನು ಪೋಷಕರು ತುಂಬಾ ಚೆನ್ನಾಗಿ ಸಾಕಿ ಸಲುಹಿದ್ದಾರೆ. ನನ್ನ ನಿರ್ಧಾರಕ್ಕೆ ಯಾರೂ ಕಾರಣರಲ್ಲ. ನನಗೆ ಬದುಕು ಬೇಸರವಾಗಿದೆ ಎಂದು ಬರೆದಿದ್ದಾರೆ.
ಮಾನಸ ಕಳಿಸಿದ್ದ ಎಸ್ಎಂಎಸ್ ಅನ್ನು ಭಾನುವಾರ ಬೆಳಗ್ಗೆ ಗಮನಿಸಿದ ಸ್ನೇಹಿತೆ ಕವಿತಾ ತಕ್ಷಣ ಮನೆಗೆ ಬಂದು ನೋಡಿದಾಗ ಮಾನಸ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.