ಸಾರ್ವಜನಿಕರಿಗೆ ಮುಂಡಾಯಿಸಿ ಬ್ಲೇಡ್ ಕಂಪೆನಿ ಪರಾರಿ

ಮಂಗಳೂರು ಮಹಾನಗರ ಪಾಲಿಕೆಯಿಂದ ಅನುಮತಿ ಪತ್ರ ಪಡೆದ ತಮಿಳುನಾಡು ಮೂಲದ ಕುಮಾರೇಶನ್ ಹೆಸರಿನ ವ್ಯಕ್ತಿ ಕಟ್ಟಡ ಮಾಲೀಕರಿಗೆ 7500 ರೂಪಾಯಿ ಬಾಡಿಗೆ ನಿಗದಿಪಡಿಸಿ 30ಸಾವಿರ ಮುಂಗಡ ಹಣ ನೀಡಿ ಮೂರು ಕೊಠಡಿಗಳಲ್ಲಿ ವ್ಯವಹಾರ ಆರಂಭಿಸಿದ್ದನು. ಗೃಹೋಪಯೋಗಿ ವಸ್ತುಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಒದಗಿಸಲಾಗುವುದು ಎಂದು ಗ್ರಾಹಕರನ್ನು ಆಕರ್ಷಿಸಿ, ಅರ್ಧದಷ್ಟು ಹಣ ಪಾವತಿಸಿ 10 ದಿನಗಳ ಬಳಿಕ ವಸ್ತುಗಳನ್ನು ನೀಡಲಾಗುವುದು ಎಂದು ಜನರನ್ನು ನಂಬಿಸಿದ್ದನು.
ಸ್ಥದಲ್ಲಿಯೇ ಹಣ ಪಾವತಿಸಿದರೆ ಆಕರ್ಷಕ ರಿಯಾಯಿತಿ ನೀಡಲಾಗುವುದು, ಒಂದು ತೆಗೆದುಕೊಂಡರೆ ಇನ್ನೊಂದು ಫ್ರೀ ಎಂದು ರಂಗುರಂಗಿನ ಆಕರ್ಷಕ ಆಫರ್ ನೀಡುತ್ತಿದ್ದನು. ಶೇ.50ನ್ನು ಮಂಗಡ ಪಾವತಿ ಮಾಡಬೇಕು ಹಾಗೂ ಪಾವತಿ ಮಾಡಿದ 10 ದಿನದಲ್ಲಿ ಗ್ರಾಹಕರಿಗೆ ವಸ್ತು ನೀಡಲಾಗುವುದು ಎಂದು ಪ್ರಕಟಿಸುತ್ತಿದ್ದನು.
ವ್ಯವಹಾರ ಅರಂಭಿಸಿದ 10 ದಿನಗಳ ಬಳಿಕ ಏಪ್ರಿಲ್ 4, 5ರಂದು ಹಣ ಪಾವತಿಸಿದ್ದ ಕೆಲವರಿಗೆ ವಸ್ತುಗಳನ್ನು ಒದಗಿಸಿದ್ದು ಜನರಲ್ಲಿ ಇವನ ವ್ಯವಹಾರದ ಮೇಲೆ ನಂಬಿಕೆ ಮೂಡಿತು. ಇದಾದ ಬಳಿಕ ಗ್ರಾಹಕರು ನಾಮುಂದು ತಾಮುಂದು ಎಂದು ಈ ಕಂಪೆನಿಯ ಜೊತೆ ವ್ಯವಹಾರಕ್ಕೆ ಮುಗಿಬೀಳಲಾರಂಭಿಸಿದರು. ಸಾಕಷ್ಟು ಹಣ ಪಾವತಿ ಮಾಡಿ ಆರ್ಡರ್ ಕೊಟ್ಟು ಕಾಯತೊಡಗಿದರು.
ಉದಯವಾಣಿ ಪತ್ರಿಕೆ ಈ ಕಂಪೆನಿಯ ಸಾಚಾತನದ ಬಗ್ಗೆ ವರದಿಯನ್ನು ಪ್ರಕಟಿಸಿತ್ತು. ವರದಿಯನ್ನು ಆದರಿಸಿ ಸುರತ್ಕಲ್ ಪೊಲೀಸರು ಕಟ್ಟಡದ ಮಾಲೀಕರಿಗೂ ಮತ್ತು ಮಂಜು ಏಜೆನ್ಸಿಸ್ನ ಮುಖ್ಯಸ್ಥರಿಗೂ ಎಚ್ಚರಿಕೆ ನೀಡಿದ್ದರು. ಸೋಮವಾರ ( ಏ 9) ಅಂಗಡಿಗೆ ವಾರದ ರಜೆಯಾಗಿದ್ದು, ಅಂದು ರಾತ್ರಿ ಕುಮಾರೇಶನ್ ಕಟ್ಟಡದ ಮಾಲೀಕನಿಗೆ ದೂರವಾಣಿ ಮೂಲಕ ಕರೆ ಮಾಡಿ ನಾನು ಕಟ್ಟಡವನ್ನು ಬಿಟ್ಟು ತಮಿಳುನಾಡಿಗೆ ಹೋಗಿದ್ದೇನೆ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಹಣ ಪಾವತಿಸಿದ 10 ದಿನಗಳ ಬಳಿಕ ವಸ್ತು ನೀಡುವ ಬಗ್ಗೆ ಕರಾರಿನಲ್ಲಿ ತಿಳಿಸಿರುವುದರಿಂದ ನಷ್ಟದ ಪೂರ್ತಿ ಲೆಕ್ಕಾಚಾರ ಇನ್ನಷ್ಟೇ ತಿಳಿಯಬೇಕಿದೆ ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ. ಅತ್ಯಂತ ಸೋಜಿಗದ ವಿಷಯವೇನೆಂದರೆ ಸುರತ್ಕಲ್ ಪರಿಸರದಲ್ಲಿ ಒಂದು ವರ್ಷದ ಅವಧಿಯಲ್ಲಿ ನಡೆದ 10ನೇ ಗೋಲ್ಮಾಲ್ ಪ್ರಕರಣ ಇದಾಗಿದೆ ಎಂದು ಉದಯವಾಣಿ ಪತ್ರಿಕೆ ವರದಿ ಮಾಡಿದೆ.












Click it and Unblock the Notifications