ತೆರಿಗೆ ಹಿಂತೆಗೆತ ಭರವಸೆ : ಚಿನ್ನದ ಮುಷ್ಕರ ಅಂತ್ಯ

ಮೇ 11ರವರೆಗೆ ಅಬಕಾರಿ ತೆರಿಗೆ ಇಳಿಸುವ ಕುರಿತು ಚಿಂತಿಸುವುದಾಗಿ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಸಮಯಾವಕಾಶ ಕೇಳಿದ್ದಾರೆ. ಆದರೆ, ಚಿನ್ನದ ವ್ಯಾಪಾರಿಗಳು ಹೇಳುವುದೇನೆಂದರೆ ಚಿನ್ನದ ವ್ಯಾಪಾರದ ಮೇಲೆ ಅಬಕಾರಿ ಇಲಾಖೆಯ ನೆರಳೇ ಬೀಳಬಾರದು ಎಂಬುದು. ಬಿದ್ದರೆ ವ್ಯಾಪಾರ ಮುಚ್ಚಿಕೊಂಡು ಮನೆಗೆ ಹೋಗಬೇಕಾಗುತ್ತದೆ ಎಂಬುದು ಅವರ ಹೇಳಿಕೆ.
ಈ ಆಶಯದ ಹಿನ್ನೆಲೆಯಲ್ಲಿ, ಅನಿರ್ದಿಷ್ಟ ಕಾಲ ಮುಚ್ಚಿಕೊಂಡಿದ್ದ ಚಿನಿವಾರರು ಬಂಗಾರದ ಅಂಗಡಿಗಳನ್ನು ದೇಶದಾದ್ಯಂತ ಶನಿವಾರ ತೆರೆದಿದ್ದಾರೆ. ಇಂದು ಬೆಳಗಿನಿಂದಲೇ ದೇಶದ ಚಿನ್ನದಂಗಡಿ ಮಾಲಿಕರು ಅಂಗಡಿಗಳನ್ನು ತೆರೆದು ಬಂಗಾರ ಮಾರಾಟದಲ್ಲಿ ತೊಡಗಿದ್ದಾರೆ ಎಂದು ಅಖಿಲ ಭಾರತೀಯ ಸರಾಫ ಅಸೋಸಿಯೇಷನ್ ಅಧ್ಯಕ್ಷ ಶೀಲ ಚಂದ್ ಜೈನ್ ಹೇಳಿದ್ದಾರೆ.
ಈ ಮುಷ್ಕರದಿಂದಾಗಿ ದೇಶದಾದ್ಯಂತ ಚಿನ್ನದ ಉದ್ಯಮಿಗಳು 20 ಸಾವಿರ ಕೋಟಿ ರು.ಗಳನ್ನು ಕಳೆದುಕೊಂಡಿದ್ದರೆ, ಭಾರತದ ಬೊಕ್ಕಸಕ್ಕೆ 1,200 ಕೋಟಿ ರು.ನಷ್ಟು ನಷ್ಟವಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಈ ಮುಷ್ಕರಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದರೆ, ಕರ್ನಾಟಕದಲ್ಲಿ ಚಿನ್ನದ ಉದ್ಯಮಿಗಳಲ್ಲಿ ಒಗ್ಗಟ್ಟು ಅಷ್ಟೊಂದು ಇರದ ಕಾರಣ ಬೆಂಬಲ ಅಷ್ಟೊಂದು ವ್ಯಕ್ತವಾಗಿರಲಿಲ್ಲ.
ಬೆಂಗಳೂರಿನಲ್ಲಿ ಮುಷ್ಕರದಿಂದ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. 10 ಗ್ರಾಂ ಚಿನ್ನದ ಬೆಲೆ ಸದ್ಯಕ್ಕೆ 26,500 ರು. ಇದೆ. ಮುಷ್ಕರ ಕೊನೆಗೊಂಡಿದ್ದರಿಂದ ಬೆಲೆ ಹೆಚ್ಚುಕಡಿಮೆ ಆಗುವುದಿಲ್ಲ ಅಂತ ಹೇಳುತ್ತಾರೆ ಬೆಂಗಳೂರಿನ ಚಿನ್ನದ ವ್ಯಾಪಾರಿ ಸುನೀಲ್. ಒಂದು ವೇಳೆ ಚಿನ್ನದ ವ್ಯಾಪಾರವನ್ನು ಅಬಕಾರಿ ಇಲಾಖೆಯ ವ್ಯಾಪ್ತಿಯಿಂದ ಹಿಂತೆಗೆದುಕೊಳ್ಳದಿದ್ದರೆ ಮೇ 11ರ ನಂತರ ಮುಷ್ಕರ ಮತ್ತೆ ಮುಂದುವರಿಯುವ ಸಾಧ್ಯತೆಯಿದೆ.












Click it and Unblock the Notifications