ನೂತನ ಮುಖ್ಯಮಂತ್ರಿಯಾಗಿ ಶೋಭಾ ಕರಂದ್ಲಾಜೆ!
ಈ ವಿನೂತನ ಬೆಳವಣಿಗೆ ಯಡಿಯೂರಪ್ಪನವರ ಬೆಂಬಲಿಗ ಪಾಳಯದಲ್ಲಿ ಹರ್ಷದ ಹೊನಲನ್ನು ಹರಿಸಿದ್ದರೆ, ಅವರ ವಿರೋಧಿ ಬಣಕ್ಕೆ ಊಹಿಸಿಕೊಳ್ಳಲಾಗದ ಶಾಕ್ ನೀಡಿದೆ. ಯಡಿಯೂರಪ್ಪನವರ ಬಣ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂತಸ ಹಂಚಿಕೊಳ್ಳುತ್ತಿದ್ದರೆ, ಅವರ ಕಟ್ಟಾ ವಿರೋಧಿಗಳು ಯಾವ ಪ್ರತಿಕ್ರಿಯೆಗಳಿಗೂ ಸಿಗುತ್ತಿಲ್ಲ.
ಇದರಿಂದಾಗಿ ಒಂದೇ ಸರಕಾರದಲ್ಲಿ ಐದು ವರ್ಷಗಳಲ್ಲಿ ಕರ್ನಾಟಕದ ಜನತೆ ಮೂವರು ಮುಖ್ಯಮಂತ್ರಿಗಳನ್ನು ಕಂಡಂತಾಗಿದೆ. ಹಾಗೆಯೆ, ಮೊತ್ತಮೊದಲ ಬಾರಿಗೆ ಮೊದಲ ಮಹಿಳಾ ಮುಖ್ಯಮಂತ್ರಿಯನ್ನು ಪಡೆದ ಸಂತಸ ಜನತೆಯದ್ದು. ಹಾಗೆಯೆ, ಯಶವಂತಪುರದಿಂದ ವಿಧಾನಸಭೆಗೆ ಆಯ್ಕೆಯಾದ ಮೊದಲ ಬಾರಿಯೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಹೆಗ್ಗಳಿಕೆಯೂ 'ಕರ್ನಾಟಕದ ಕ್ಲಿಯೋಪಾತ್ರ' ಶೋಭಾ ಕರಂದ್ಲಾಜೆ ಅವರದು.
ಸದಾನಂದ ಗೌಡರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಪ್ರತಿಬಾರಿ ಪ್ರಶ್ನೆ ಎದ್ದಾಗ ಉತ್ತರಿಸುತ್ತಿದ್ದ ದೆಹಲಿಯ ಬಿಜೆಪಿ ಹಿರಿಯ ನಾಯಕರು, ಯಡಿಯೂರಪ್ಪನವರ ಬೇಡಿಕೆಗೆ ಬಗ್ಗಿದ್ದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೂ ಆಶ್ಚರ್ಯ ತಂದಿದೆ. ಮುಖ್ಯಮಂತ್ರಿ ಪಟ್ಟ ನಿರೀಕ್ಷಿಸದಿದ್ದ ಶೋಭಾ ಅವರಿಗೂ ಇದು ಹಿತವಾದ ಶಾಕ್ ಕೂಡ.
ಅನೇಕ ಹಗರಣಗಳಿಂದ ಹೊರಬರದ ಹೊರತು ಮುಖ್ಯಮಂತ್ರಿ ಪದವಿ ದೊರೆಯುವುದಿಲ್ಲ ಎಂಬುದು ಅರಿವಿಗೆ ಬಂದಿದ್ದೇ, ಶೋಭಾ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಯಡಿಯೂರಪ್ಪನವರು ಬೇಡಿಕೆ ಇಟ್ಟಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ಹೆಸರು ಕೇಳಿ ಬಂದಾಗ ಅಧಿಕಾರ ತ್ಯಾಗ ಮಾಡಿದ ಸಂದರ್ಭದಲ್ಲಿಯೂ ಶೋಭಾ ಕರಂದ್ಲಾಜೆ ಅವರೇ ಮುಖ್ಯಮಂತ್ರಿ ಆಗಬೇಕೆಂದು ಪಟ್ಟುಹಿಡಿದಿದ್ದರು. ಕೊನೆಗೂ ಯಡಿಯೂರಪ್ಪನವರ ಹಠವೇ ಗೆದ್ದಂತಾಗಿದೆ. ಇದರ ಬೆನ್ನಹಿಂದೆಯೇ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆಎಸ್ ಈಶ್ವರಪ್ಪ ಅವರು ಕೂಡ ರಾಜೀನಾಮೆ ಬಿಸಾಕಿದ್ದಾರೆ.
ಕರ್ನಾಟಕದಲ್ಲಿ ಪಕ್ಷದ ಅಸ್ತಿತ್ವ ಉಳಿಯಬೇಕಿದ್ದರೆ ಯಡಿಯೂರಪ್ಪನವರ ಬೇಡಿಕೆಗೆ ಮನ್ನಿಸದೆ ಬಿಜೆಪಿ ಹೈಕಮಾಂಡಿಗೆ ಬೇರೆ ದಾರಿಯೇ ಇರಲಿಲ್ಲ ಎಂದು ಹೆಸರು ಹೇಳದ ಹಿರಿಯ ರಾಜಕಾರಣಿಯೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಸದಾನಂದ ಗೌಡರು ಈ ಬೆಳವಣಿಗೆಯ ನಂತರ ಅಜ್ಞಾತ ಸ್ಥಳಕ್ಕೆ ತೆರಳಿದ್ದರೆ, ಮೇಲುಕೋಟೆ ವೈರಮುಡಿ ಉತ್ಸವದಂದೇ ಚೆಲುವನಾರಾಯಣ ಕೃಪೆಗೆ ಪಾತ್ರರಾಗಿರುವ ಶೋಭಾ ಕರಂದ್ಲಾಜೆ ಅವರು 'ಚೆಲುವಿನ ಚಿತ್ತಾರ' ಚಿತ್ರದ 'ಕನಸೋ ಇದು ನನಸೋ ಇದು' ಎಂಬ ಹಾಡನ್ನು ಹಾಡಿಕೊಳ್ಳುತ್ತಿದ್ದಾರೆ.
ಏಪ್ರಿಲ್ 1, ಭಾನುವಾರದಂದು ಸಂಜೆ ವಿಧಾನಸೌಧದ ಮುಂಭಾಗದಲ್ಲಿ 27ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಕುಮಾರಿ ಶೋಭಾ ಕರಂದ್ಲಾಜೆ ಅವರು ರಾಜ್ಯದ ಜನತೆಗೆ ಏಪ್ರಿಲ್ ಫೂಲ್ ದಿನದಶುಭಾಶಯಗಳನ್ನು ತಿಳಿಸಿದ್ದಾರೆ.