'ವಿಜಯ'ವಾಣಿ ಮಾಲೀಕ ಸಂಕೇಶ್ವರ್ ಗೆ ನೋಟಿಸ್

ವಿಷಯ ಏನಪಾ ಅಂದ್ರೆ ...VRL ಸಂಸ್ಥೆಯ ಮಾಲೀಕ, ಬಿಜೆಪಿಯ ಮೇಲ್ಮನೆ ಸದಸ್ಯ ವಿಜಯ ಸಂಕೇಶ್ವರಗೆ ತಮ್ಮ ಹೆಸರಿನಲ್ಲಿರುವ 'ವಿಜಯ' ಎಲ್ಲೆಲ್ಲೂ ತನ್ನ ಪತಾಕೆ ಹಾರಿಸಲಿ ಎಂಬ ಬಯಕೆ. ಹಾಗಾಗಿ ಮುಂದಿನ ವಾರದಿಂದ ಹೊಸದಾಗಿ ಆರಂಭಿಸಲಿರುವ ತಮ್ಮ ಮತ್ತೊಂದು ಸಾಹಸಕ್ಕೂ 'ವಿಜಯವಾಣಿ' ಎಂದೇ ಹೆಸರಿಟ್ಟಿದ್ದಾರೆ.
ಆದರೆ 'ವಿಜಯ ಕರ್ನಾಟಕ' ಪತ್ರಿಕೆಯ ಹಾಲಿ ಮಾಲೀಕರಾದ ವಿಪಿಎಲ್ ಸಂಸ್ಥೆ (ಬೆನಟ್ ಅಂಡ್ ಕೋಲ್ ಮನ್ ಟೈಮ್ಸ್ ಗ್ರೂಪ್) ಇದಕ್ಕೆ ತಗಾದೆ ತೆಗೆದಿದೆ. 'ವಿಜಯ ಕರ್ನಾಟಕ'ದಲ್ಲಿರುವ 'ವಿಜಯ' ಎಂಬ ಪದ ವಿಜಯವಾಣಿಗೂ ತಳುಕು ಹಾಕಿಕೊಂಡಿದೆ.
ಆ 'ವಿಜಯ' ಏನಿದ್ದರೂ ನಮ್ಮದೇ. ಆದ್ದರಿಂದ 'ವಿಜಯವಾಣಿ' ಹೆಸರಿನಲ್ಲಿ ಪತ್ರಿಕೆ ಆರಂಭಿಸದಂತೆ 'ವಿಜಯ' ಸಂಕೇಶ್ವರಗೆ ನೋಟಿಸ್ ಮೂಲಕ ತಿಳಿಸಿದೆ. ಪುಣ್ಯ, ತಮ್ಮ ಹೆಸರಿನಲ್ಲಿರುವ 'ವಿಜಯ'ವನ್ನು ಕಿತ್ತುಹಾಕಿ ಎಂದು ಅದು ಸಂಕೇಶ್ವರರಿಗೆ ಹೇಳಿಲ್ಲ!
ಈ ಸಂಬಂಧ ವಿಪಿಎಲ್ ಸಂಸ್ಥೆ ಕೋರ್ಟ್ ಮೆಟ್ಟಿಲು ಸಹ ಹತ್ತಿದೆ. ಸಿಟಿ ಸಿವಿಲ್ ಕೋರ್ಟಿನ 13ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನ್ಯಾ. ಮುತ್ತೂರು ಅವರ ಮುಂದೆ ಇಂದು (ಮಾರ್ಚ್ 29) ಅರ್ಜಿ ವಿಚಾರಣೆ ನಡೆಯಲಿದೆ. 'ವಿಜಯ ಕರ್ನಾಟಕ'ವನ್ನು ಮಾರಿದ್ದೇ ಬಂತು 'ವಿಜಯ' ಸಂಕೇಶ್ವರಗೆ ಟೈಮ್ಸ್ ಗ್ರೂಪ್ ಅಂದಿನಿಂದಲೂ ಅಡ್ಡಗಾಲು ಹಾಕುತ್ತಿದೆ. ಇಲ್ಲವಾದಲ್ಲಿ 'ವಿಜಯವಾಣಿ' ಯಾವಾಗಲೋ ಆರಂಭವಾಗಬೇಕಿತ್ತು.












Click it and Unblock the Notifications