ಶ್ರೀರಾಮುಲು-ರಕ್ಷಿತಾ ಜೋಡಿ ಗಾಲಿ ರೆಡ್ಡಿ 'ವಿ' ಚಾಟ್
ಬಡವರ ಶ್ರಮಿಕರ ರೈತರ (ಬಿಎಸ್ಆರ್) ಪಕ್ಷದ ಸ್ಥಾಪಕ ಶ್ರೀರಾಮುಲು ಅವರೊಂದಿಗೆ ರಕ್ಷಿತಾ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ದಾರೆ.
ಶ್ರೀರಾಮುಲು ಅವರ ಜೊತೆ ರಕ್ಷಿತಾ ಅವರು ಸಂದರ್ಶಕರ ಕೊಠಡಿಯಲ್ಲಿ ಕುಳಿತ್ತಿದ್ದಾಗ, ಜನಾರ್ದನ ರೆಡ್ಡಿ ಅವರು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ವಿಚಾರಣೆ ಏಪ್ರಿಲ್ ಮೊದಲ ವಾರಕ್ಕೆ ಮುಂದೂಡಲಾಗಿದೆ.
ನಂತರ ಇಬ್ಬರನ್ನು ಭೇಟಿ ಮಾಡಿದ ಜನಾರ್ದನ ರೆಡ್ಡಿ ಅವರು ರಕ್ಷಿತಾ ಅವರನ್ನು ತುಂಬು ಹೃದಯದಿಂದ ಸ್ವಾಗತಿಸಿದರು. ಬಿಎಸ್ ಆರ್ ಪಕ್ಷದ ಮೂಲಕ ಬಡವರ ಏಳಿಗೆಗೆ ದುಡಿಯುವಂತೆ ಕೇಳಿಕೊಂಡರು. ಬದಲಿಗೆ ಗಾಲಿ ರೆಡ್ಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ರಕ್ಷಿತಾ, ಶೀಘ್ರದಲ್ಲೇ ಆರೋಪ ಮುಕ್ತರಾಗಿ ಹೊರ ಬರುವಂತೆ ಹಾರೈಸಿದರು.
ಮುಂದಿನ ಚುನಾವಣೆಯಲ್ಲಿ ಬಿಎಸ್ ಆರ್ ಪಕ್ಷ ನಿರ್ಣಾಯಕ ಪಾತ್ರವಹಿಸಲಿದೆ. ಪಕ್ಷ ಸಂಘಟನೆ ಕಾರ್ಯದಲ್ಲಿ ಶ್ರೀರಾಮುಲು ಅವರ ಸಲಹೆ ಪಡೆಯಿರಿ ಎಂದು ರಕ್ಷಿತಾ ಅವರಿಗೆ ರೆಡ್ಡಿ ಕಿವಿಮಾತು ಹೇಳಿದ್ದಾರೆ.
ರೆಡ್ಡಿಗಾಗಿ ವಿ ಚಾಟ್ ವ್ಯವಸ್ಥೆ : ಬೆಳಗ್ಗೆ 10 ಗಂಟೆಗೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ ಶ್ರೀರಾಮುಲು ಹಾಗೂ ರಕ್ಷಿತಾ ಮಧ್ಯಾಹ್ನ 1 ಗಂಟೆವರೆಗೂ ಗಾಲಿ ರೆಡ್ಡಿ ದರ್ಶನ ಸಿಗದೇ ಪರಿತಪಿಸಿದರು. ನಂತರವೂ ಕೂಡಾ ಗಾಲಿ ರೆಡ್ಡಿ ಅವರನ್ನು ಮುಖತಃ ಭೇಟಿ ಮಾಡಲು ಜೈಲಿನ ಅಧಿಕಾರಿಗಳು ನಿರಾಕರಿಸಿದರು.
ಕೊನೆಗೆ ರಕ್ಷಿತಾ ಮೇಡಂ ಮುಖ ನೋಡಿಕೊಂಡು, ವಿಡಿಯೋ ಕಾನ್ಫರೆನ್ಸ್ ಮೂಲಕ ಮೂವರಿಗೂ ಸಂಪರ್ಕ ಕಲ್ಪಿಸಿ ಮಾತನಾಡಲು ಅವಕಾಶ ನೀಡಲಾಯಿತು. ಹಿರಿಯ ನಾಯಕರ ಆಶೀರ್ವಾದ ಪಡೆದ ರಕ್ಷಿತಾ, ಪಕ್ಷ ಏಳಿಗೆಗೆ ಶ್ರಮಿಸಲಿ ಹೆಚ್ಚಿನ ಹುಮ್ಮಸ್ಸು ಪಡೆದುಕೊಂಡು ಜೈಲಿನಿಂದ ಹೊರನಡೆದರು.