ಗಾಲಿ ರೆಡ್ಡಿ ಅರ್ಜಿ ತಿರಸ್ಕರಿದ ಕೋರ್ಟ್, ಸಿಬಿಐ ಖುಷ್
ಎಎಂಸಿ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ತಮ್ಮನ್ನು ಸಿಬಿಐ ಪೊಲೀಸ್ ಬಂಧನಕ್ಕೆ ನೀಡಿದ ಸಿಬಿಐ ನ್ಯಾಯಾಲಯ ಆದೇಶ ಪ್ರಶ್ನಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅನಂದ್ ಅವರಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ರೆಡ್ಡಿ ವಿರುದ್ಧ ತೀರ್ಪು ನೀಡಿದೆ. ಗಣಿ ಅಕ್ರಮ ವಿಚಾರಣೆ ಸಂಬಂಧ ಅರೋಪಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವ ಅಧಿಕಾರ ಸಿಬಿಐಗೆ ಇದೆ ಎಂದು ನ್ಯಾ.ಆನಂದ್ ಹೇಳಿದ್ದಾರೆ.
ಕೇಸ್ ಹಿಸ್ಟರಿ: ಹೈದರಾಬಾದ್ನ ಚಂಚಲ ಗೂಡ ಜೈಲಿನಿಂದ ಕರೆತಂದಿದ್ದ ಸಿಬಿಐ ಪೊಲೀಸರು, ಮಾ.2ರಂದು ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪೊಲೀಸರ ಮನವಿ ಮೇರೆಗೆ ನ್ಯಾಯಾಲಯ ರೆಡ್ಡಿಯನ್ನು ಹೆಚ್ಚಿನ ವಿಚಾರಣೆಗಾಗಿ ಮಾ.16ರವರೆಗೆ ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿದ್ದ ರೆಡ್ಡಿ, ಸಿಬಿಐ ನ್ಯಾಯಾಲಯದ ಆದೇಶ ರದ್ದು ಕೋರಿ ಹೈಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದರು. ಈ ಸಂಬಂಧ ಮಾ.15ರಂದು ವಾದ-ಪ್ರತಿವಾದ ಆಲಿಸಿದ ನ್ಯಾ.ಎನ್.ಆನಂದ ಅವರ ಏಕ ಸದಸ್ಯ ಪೀಠ ತೀರ್ಪು ಕಾಯ್ದಿರಿಸಿದ್ದರು. ಪ್ರಸ್ತುತ ಗಾಲಿ ರೆಡ್ಡಿ ಹಾಗೂ ಅಲಿಖಾನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಯುಗಾದಿ ಆಚರಣೆ ತಯಾರಿಯಲ್ಲಿದ್ದಾರೆ.