ಮರ್ಯಾದಾ ಹತ್ಯೆಗಾರ ಮಹದೇವ ಬಂಧನ
ಡಿಸಿಪಿ ಬಸವರಾಜ್ ಮಾಲಗತ್ತಿ ನಿರ್ದೇಶನದಂತೆ ನಝರಬಾದ ಪೊಲೀಸರು ಮಹದೇವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಲಿತ ಹುಡುಗನನ್ನು ತಂಗಿ ಮದುವೆಯಾಗುವುದು ಇಷ್ಟವಿಲ್ಲದ ಕಾರಣ 'ಮರ್ಯಾದಾ ಹತ್ಯೆ' ಮಾಡಲು ಮುಂದಾದೆ ಎಂದು ಆರೋಪಿ ಮಹದೇವ ಹೇಳಿದ್ದಾನೆ.
ಕುದೇರು ಕಾಲೇಜಿನ ಉಪನ್ಯಾಸಕಿ ಸ್ಮೃತಿ(27) ಹಾಗೂ ತುಮಕೂರಿನ ದೈಹಿಕ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕನಾಗಿ ಸಂದೀಪ್(30) ದುರಂತ ಪ್ರೇಮ ಕಥೆಗೆ ಮಾನಸ ಗಂಗೋತ್ರಿ ಸಾಕ್ಷಿಯಾಗಿದೆ.
ಘಟನೆ ವಿವರ: ಸುಮಾರು ಏಳು ವರ್ಷಗಳ ಹಿಂದೆ ಮಾನಸ ಗಂಗೋತ್ರಿಯಲ್ಲಿ ಓದುವಾಗ ಸುದೀಪ್ಕುಮಾರ್ (30) ಎಂಬವನನ್ನು ಸ್ಮೃತಿ ಪ್ರೀತಿಸುತ್ತಿದ್ದಳು. ಇಬ್ಬರು ಕೆಲಸಕ್ಕೆ ಸೇರಿದ ಆನಂತರ ಮದುವೆಯಾಗುವ ಬಗ್ಗೆ ನಿರ್ಧರಿಸಿದ್ದರು.
ಆದರೆ, ಮದುವೆಗೆ ಸ್ಮೃತಿ ಮನೆಯವರು ಒಪ್ಪಲಿಲ್ಲ. ಆದರೆ ಪ್ರೀತಿಸಿದವನನ್ನೇ ಮದುವೆಯಾಗುತ್ತೇನೆ ಎಂದು ಸ್ಮೃತಿ ಹಠ ಹಿಡಿದಾಗ ಆಕೆಯ ಅಣ್ಣ ಮಹದೇವ ತೀವ್ರ ವಿರೋಧ ವ್ಯಕ್ತಪಡಿಸಿದ್ದಾನೆ.
ಮನೆ ಕಡೆ ಒಪ್ಪಿಗೆ ಸಿಗದಿದ್ದರೂ ಮೊದಲೇ ನಿರ್ಧರಿಸಿದಂತೆ ಪ್ರೇಮಿಗಳು ಉದ್ಯೋಗ ಸಿಕ್ಕಿದ ಮೇಲೆ 2011 ನ. 23ರಂದು ವಿವಾಹವಾಗಿದ್ದಾರೆ.
ವಿಚಾರ ತಿಳಿದ ಸ್ಮೃತಿ ಮನೆಯವರು ಆಕೆಗೆ ಬೇಗನೇ ಬೇರೆ ಮದುವೆ ಮಾಡಲು ಮುಂದಾಗಿದ್ದಾರೆ. ಇದರಿಂದ ಬೇಸತ್ತ ಆಕೆ, ಆಲನಹಳ್ಳಿ ಬಡಾವಣೆಯಲ್ಲಿರುವ ತನ್ನ ಅಜ್ಜಿ ನಂಜಮ್ಮ ಅವರ ಮನೆಗೆ ಬಂದು ನೆಲೆಸುತ್ತಾಳೆ.
ತಂಗಿ ಕೊಂದ ಅಣ್ಣ: ಅಜ್ಜಿಮನೆಗೆ ಬಂದ ಅಣ್ಣ ಮಹದೇವ ಪಾನಮತ್ತನಾಗಿ ಬಂದು ಜಗಳ ವಾಡಿ, ಸ್ಮೃತಿಯನ್ನು ಮನಸೋ ಇಚ್ಛೆ ಥಳಿಸಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ನಝರಬಾದ ಪೊಲೀಸರು ತಿಳಿಸಿದ್ದಾರೆ.