ರಾಜ್ಯಾಧ್ಯಕ್ಷ ಸ್ಥಾನ: ಯಡಿಯೂರಪ್ಪಗೆ ತುರ್ತು ಬುಲಾವ್

ಇದು ದಿಲ್ಲಿಯಲ್ಲಿ ಪಕ್ಷದ ವರಿಷ್ಠರಿಗೆ ತಲೆಬ್ಯಾನಿ ತಂದಿದೆ. ಅದರ ಉಪಶಮನಕ್ಕಾಗಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಇಂದು ಬೆಳಗ್ಗೆ ದಿಢೀರನೆ ದಿಲ್ಲಿಗೆ ಆಹ್ವಾನಿಸಿದೆ. ಹಾಗಾಗಿ ಯಡಿಯೂರಪ್ಪನವರು ತಕ್ಷಣ ದಿಲ್ಲಿ ವಿಮಾನ ಹತ್ತಿದ್ದಾರೆ. ಜತೆಗೆ ಶೋಭಾ ಕರಂದ್ಲಾಜೆ ಸೇರಿದಂತೆ ಕೆಲವು ಹಿರಿಯ ಸಚಿವರನ್ನೂ ದಿಲ್ಲಿಗೆ ಆಹ್ವಾನಿಸಲಾಗಿದೆ.
ಈ ಮಧ್ಯೆ, ಲಕ್ಷ ಕೋಟಿ ರುಪಾಯಿ ಬಜೆಟ್ ಮಂಡಿಸುವುದು ತಮ್ಮ ಕನಸು ಎಂದಿರುವ ಯಡಿಯೂರಪ್ಪಗೆ ಮತ್ತೆ ಮುಖ್ಯಮಂತ್ರಿಯಾಗುವ ಯೋಗ ಬರಲಿದೆಯಾ? ಎಂಬ ಕುತೂಹಲವೂ ಮೂಡಿದೆ.
ವರಿಷ್ಠರ ಅಭಯದ ಹಿನ್ನೆಲೆಯಲ್ಲಿ ಮಂಗಳವಾರ ಕರೆದಿದ್ದ ತಮ್ಮ ಬೆಂಬಲಿಗರ ಸಭೆಯನ್ನು ಹಠಾತ್ತನೇ ಮುಂದೂಡಿದ ಯಡಿಯೂರಪ್ಪ, ಮುಂದಿನ ಒಂದು ವಾರ ಸಾಧ್ಯವಾದಷ್ಟು ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿ ಎಂಬ ಸಂದೇಶವನ್ನು ಬೆಂಬಲಿಗ ಶಾಸಕರಿಗೆ ರವಾನಿಸಿ, ದಿಲ್ಲಿಯತ್ತ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.
ಇದುವರೆಗೆ ಯಡಿಯೂರಪ್ಪ ಪಕ್ಷದಿಂದ ಹೊರಹೋದರೂ ಪರವಾಗಿಲ್ಲ ಎಂಬ ನಿರ್ಲಕ್ಷ್ಯ ಧೋರಣೆ ತಳೆದಿದ್ದ ಬಿಜೆಪಿ ಹೈಕಮಾಂಡ್ ಮತ್ತು ಸಂಘ ಪರಿವಾರದ ನಾಯಕರು ಇದೀಗ ತಮ್ಮ ಪಟ್ಟು ಸಡಿಲಿಸಿ ಯಡಿಯೂರಪ್ಪಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಒಲವು ತೋರಿದ್ದಾರೆ.
ಆದರೆ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆ ನೀಡಲು ಸಾಧ್ಯವಿಲ್ಲ ಎಂಬುದನ್ನೇ ಪುನರುಚ್ಚರಿಸಿರುವ ವರಿಷ್ಠರು ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಗಂಭೀರ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications