ಗೂಂಡಾಗಿರಿ ಮಾಡಿದ ವಕೀಲರ ಕೈಗೆ ಬಿತ್ತು ಕೋಳ
ಶನಿವಾರ ಸಂಜೆ ಪತ್ರಿಕಾಗೋಷ್ಠಿ ಕರೆದಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು, ಇಲ್ಲಿಯವರೆಗೆ ವಕೀಲರ ವಿರುದ್ಧ ದಾಖಲಾದ ಕ್ರಿಮಿನಲ್ ಕೇಸುಗಳು, ಗಾಯಗೊಂಡವರು, ಹಾನಿಗೊಳಗಾದ ವಾಹನಗಳು, ಬಂಧನಕ್ಕೊಳಗಾಗಿರುವ ವಕೀಲರ ವಿವರಗಳನ್ನು ಮಾಧ್ಯಮಗಳಿಗೆ ಒದಗಿಸಿದರು. "ನಿಮ್ಮ ಕೈಲಾಗದಿದ್ರೆ ಹೇಳಿ, ನಾನೇ ಕಮಿಷನರ್ ಆಗಿ ಕ್ರಮ ತೆಗೆದುಕೊಳ್ಳುತ್ತೇನೆ" ಎಂದು ಮುಖ್ಯಮಂತ್ರಿ ಸದಾನಂದ ಗೌಡ ಅವರು ಶುಕ್ರವಾರ ಮಿರ್ಜಿಯವರನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ನೆನಪಿಸಬಹುದು.
ಬಂಧನಕ್ಕೊಳಗಾದವರು : ಬೆಂಗಳೂರು ವಕೀಲರ ಸಂಘದ ಕಾರ್ಯದರ್ಶಿ ಎ.ಪಿ. ರಂಗನಾಥ್, ಸೋಮೇಶ, ಅರುಣ್ ನಾಯಕ್ ಮತ್ತು ಸಂತೋಷ್. ವಕೀಲರ ವಿರುದ್ಧ ಒಟ್ಟು 31 ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಸಿದ ಬಳಿಕ ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಮಿರ್ಜಿ ಹೇಳಿದರು.
ಹಲಸೂರು ಠಾಣೆಯಲ್ಲಿ ಒಟ್ಟು 31 ಪ್ರಕರಣಗಳು ದಾಖಲಾಗಿವೆ. 51 ಪೊಲೀಸರಿಗೆ ಗಾಯಗಳಾಗಿದ್ದು, ಐವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆ ಮಾಡಿದಾಗ ಫೋಟೋಗ್ರಾಫರುಗಳು ಸೇರಿದಂತೆ 10 ಪತ್ರಕರ್ತರು ಗಾಯಗೊಂಡಿದ್ದಾರೆ. ಎಂ.ಎಸ್. ಜಗದೀಶ್ ಎಂಬುವವರು ಕೂಡ ದೂರು ದಾಖಲಿಸಿದ್ದು, ಅವರ ಚಿನ್ನದ ಸರ, 2 ಮೊಬೈಲ್ ಮತ್ತು 1,900 ರು. ನಗದನ್ನು ದೋಚಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತರಿಂದ ತೂರಿಬಂದ ಪ್ರಶ್ನೆಗಳ ಬಾಣಗಳಿಗೆ ಅತ್ಯಂತ ಶಾಂತ ರೀತಿಯಿಂದಲೇ ಉತ್ತರಿಸಿದ ಮಿರ್ಜಿ ಅವರು, ಫೋಟೋ, ವಿಡಿಯೋಗಳಲ್ಲಿ ಎಲ್ಲ ಆರೋಪಿಗಳ ವಿರುದ್ಧ ಸಾಕ್ಷಿ ದೊರೆತಿದ್ದು ಆದಷ್ಟು ಬೇಗನೆ ಅವರೆಲ್ಲರನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದರು. ಇನ್ನು ಮುಂದೆ ಪತ್ರಕರ್ತರು ನಿರ್ಭೀತರಾಗಿ ವರದಿ ಮಾಡಬಹುದೆಂದು ಅಭಯಹಸ್ತ ನೀಡಿದರು.
ರಾಜ್ಯಾದ್ಯಂತ ಪ್ರತಿಭಟನೆ : ಹುಬ್ಬಳ್ಳಿ, ಧಾರವಾಡ, ಗೋಕಾಕ, ಮಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಯಾದಗಿರಿ, ಸವಣೂರು, ಮೈಸೂರು, ಹಾವೇರಿ, ಬೆಳಗಾವಿ ಮುಂತಾದ ನಗರಗಳಲ್ಲಿ ಪತ್ರಕರ್ತರಿಂದ ಮತ್ತು ನಾಗರಿಕರಿಂದ ವಕೀಲರ ವಿರುದ್ಧ ವ್ಯಾಪಕವಾದ ಪ್ರತಿಭಟನೆಗಳಾಗಿವೆ. ಕಪ್ಪುಪಟ್ಟಿ ಕಟ್ಟಿಕೊಂಡು, ರಸ್ತೆಗಳಲ್ಲಿ ವಕೀಲರ ಪ್ರತಿಕೃತಿ ದಹಿಸಿ, ಟೈರುಗಳನ್ನು ಸುಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಕಾಕದಲ್ಲಿ ಟಿವಿ9 ಪ್ರತಿನಿಧಿಗೆ ವಕೀಲರಿಂದ ಪ್ರಾಣ ಬೆದರಿಕೆ ಒಡ್ಡಿದ ಘಟನೆಯೂ ನಡೆದಿದೆ.
ಬೆಂಗಳೂರಿನಲ್ಲಿಯೂ ಪತ್ರಿಕೆ, ಟಿವಿ ಮತ್ತು ಇಂಟರ್ನೆಟ್ ಪತ್ರಕರ್ತರು ವಕೀಲರು ಮತ್ತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಮೆರವಣಿಗೆ ನಡೆಸಿ ಪ್ರತಿಭಟಿಸಿದರು. ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಚಿತಾವಣೆ ನೀಡಿದ್ದರು. ಇಂದು ಸಂಜೆಯ ಒಳಗೆ ಗೂಂಡಾ ವಕೀಲರನ್ನು ಬಂಧಿಸದಿದ್ದರೆ ಹೋರಾಟವನ್ನು ತೀವ್ರ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಮನವಿಪತ್ರ ಕೂಡ ನೀಡಿ ಸಿಬಿಐ ತನಿಖೆ ನಡೆಸಲು ಒತ್ತಾಯಿಸಿದ್ದರು. ಶುಕ್ರವಾರ ಹಿಂಸಾಚಾರ ನಡೆದ ನಂತರ ಬಾಯಿ ತೆರೆಯದಿದ್ದ ಮಾನವ ಹಕ್ಕುಗಳ ಆಯೋಗ ಶನಿವಾರ ವಕೀಲರ ವಿರುದ್ಧ ತಾನಾಗಿಯೇ ಪ್ರಕರಣ ದಾಖಲಿಸಿದೆ.