ಯಡಿಯೂರಪ್ಪ-ಶೋಭಾ ಮದುವೆಯಾಗಲಿ

ಅಗ್ನಿ ಸಾಕ್ಷಿಯಾಗಿ ಪರಸ್ಪರ ಕೈ ಹಿಡಿದ ದಂಪತಿಗಳು ನೆರವೇರಿಸುವ ವಾಜಪೇಯಿ ಯಾಗವನ್ನು ತಮ್ಮದು ಅಪ್ಪ-ಮಗಳ ಸಂಬಂಧ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ಮತ್ತು ಶೋಭಾ ಮಾಡುತ್ತಾರೆ. ಇದರಿಂದ ಅವರ ಹುಳುಕು ಹೊರಬಿದ್ದಿದ್ದು, ಇಬ್ಬರೂ ಇಂತಹ ನಾಟಕ ಬಿಟ್ಟು ಮದುವೆಯಾಗಲಿ ಬಿಡಿ ಎಂದು ಯತ್ನಾಳ ಕಟಕಿಯಾಡಿದ್ದಾರೆ.
ಶೋಭಾ ಕರಂದ್ಲಾಜೆ ಗುಡುಗಿದರೆ ವಿಧಾನಸೌಧ ನಡುಗುವುದು: ನವನಗರದ ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಚೇತನ ಸಮಾವೇಶದಲ್ಲಿ ಮಾತನಾಡಿದ ಅವರು, ತಮ್ಮನ್ನು ವೀರಶೈವ ನಾಯಕ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ಅವರ ಬಣ್ಣದ, ನಾಟಕೀಯ ಮಾತುಗಳಿಗೆ ರಾಜ್ಯದ ಜನ ಮರುಳಾಗಿ ಮೋಸ ಹೋಗಿದ್ದಾರೆ. ಅವರ ಮಾತನ್ನು ನಂಬಿ ಎಲ್ಲರಂತೆ ನಾನೂ ಕೂಡಾ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂದು ಘೋಷಣೆ ಕೂಗಿದ್ದೆ. ಆದರೆ ಇದೀಗ ಶೋಭಾ ಕರಂದ್ಲಾಜೆ ಗುಡುಗಿದರೆ ಎಂಬಂತಾಗಿದೆ. ವೀರಶೈವ ನಾಯಕ ಎಂದು ಕರೆದುಕೊಳ್ಳುವ ಇವರು ಎಸ್. ನಿಜಲಿಂಗಪ್ಪ, ಜೆ.ಎಚ್. ಪಟೇಲ್, ವೀರೇಂದ್ರ ಪಾಟೀಲ, ಬಿ.ಡಿ. ಜತ್ತಿ ಅವರಂಥ ವೀರಶೈವ ನಾಯಕರ ಹೆಸರಿಗೆ ಕಪ್ಪು ಮಸಿ ಬಳಿಯುವಂತೆ ವರ್ತಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ವಾಜಪೇಯಿ-ಅಡ್ವಾಣಿ ಅವರಂಥ ಮಹಾನ್ ನಾಯಕರು ಕಟ್ಟಿ ಬೆಳೆಸಿದ್ದ ಬಿಜೆಪಿ ಮೇಲೆ ಎಂದರೆ ಒಂದು ಕಾಲದಲ್ಲಿ ಸಾಕಷ್ಟು ನಿರೀಕ್ಷೆ-ಭರವಸೆಗಳಿದ್ದವು. ರಾಷ್ಟ್ರಮಟ್ಟದಲ್ಲಿ ಅಯೋಧ್ಯಾ-ಕಾಶ್ಮೀರ ಸಮಸ್ಯೆ, ರಾಜ್ಯದಲ್ಲಿ ಈದ್ಗಾ, ದತ್ತಪೀಠದಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿದ್ದ ಹೋರಾಟದಲ್ಲಿ ಯುವ ಜನತೆ ಬಿಜೆಪಿಯನ್ನು ನಿರೀಕ್ಷೆ ಮೀರಿ ಬೆಂಬಲಿಸಿತ್ತು. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಯುವ ಸಮುದಾಯಕ್ಕೆ ಮಾತ್ರವಲ್ಲ ರಾಜ್ಯದ ಮಹಿಳೆಯರೂ ಮಾನವಾಗಿ ಬದುಕದ ಸ್ಥಿತಿ ನಿರ್ಮಾಣ ಮಾಡಿದರು. ರಿಯಲ್ ಎಸ್ಟೇಟ್ ದಂಧೆಕೋರರನ್ನು, ಗಣಿ ಲೂಟಿಕೋರರನ್ನು, ಲ್ಯಾಂಡ್ ಮಾಫಿಯಾದ ಡಿ ನೋಟಿಫಿಕೇಶನ್, ವರ್ಗಾವಣೆಯಂಥ ದಂಧೆಯಲ್ಲಿ ತೊಡಗುವ ಮೂಲಕ ಪರಮ ಭ್ರಷ್ಟಾಚಾರಿಯಾಗಿ ಹೊರ ಹೊಮ್ಮಿದ್ದಾರೆ. ಆ ಮೂಲಕ ಯುವ ಜನತೆ ಬೆಂಬಲವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಜಿಲ್ಲಾಧ್ಯಕ್ಷ ಬಸವಪ್ರಭು ಸರನಾಡಗೌಡ, ಘನಶಾಂ ಭಾಂಡಗೆ, ರಂಗನಗೌಡ ಇತರರು ಸಭೆಯಲ್ಲಿ ಇದ್ದರು.












Click it and Unblock the Notifications